ಮೈ ಮರೆಯೋ ಚಾಳಿಯ ಕಾಂಗ್ರೆಸ್, 2 ತಿಂಗಳಲ್ಲಿ ಆಟ ಬದಲಿಸಬಹುದಾದ ಬಿಜೆಪಿ
Recommended Video

ಬಿಜೆಪಿಯವರ ಪರಿವರ್ತನಾ ಯಾತ್ರೆಯಲ್ಲಿ ದೂಳು, ರಚ್ಚು, ವೈಮನಸ್ಯವೇ ಎದ್ದು ಕಾಣುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಗೆ ಮುಂದಿನ ವಿಧಾನಸಭಾ ಚುನಾವಣೆ ಫಲಿತಾಂಶ ಹೆಚ್ಚು ಆಶಾದಾಯಕವಾಗಿರುತ್ತದಾ ಎಂಬ ಪ್ರಶ್ನೆ ಹಾಗೂ ನಿರೀಕ್ಷೆ ಕಾಣುತ್ತಿದೆ. ಒಂದು ವೇಳೆ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಾದ ಅಪಸವ್ಯಗಳೇನಾದರೂ ಕಾಂಗ್ರೆಸ್ ನಲ್ಲಿ ಕಂಡಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು.
ಈಗಲೇ ಚುನಾವಣೆ ನಡೆದರೆ ಅದು ಕಾಂಗ್ರೆಸ್ ಗೆ ಸರಳ ಬಹುಮತ ತಂದುಕೊಡುವ ಎಲ್ಲ ಸಾಧ್ಯತೆ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಇನ್ನಾರು ತಿಂಗಳ ನಂತರ ಚುನಾವಣೆ ನಡೆದರೆ ಎಂಬ ಪ್ರಶ್ನೆ ಮುಂದಿಟ್ಟರೆ, ಅದಕ್ಕೆ ಎಂಥ ವಿಶ್ಲೇಷಕರಿಂದಲೂ ಉತ್ತರ ಅಸಾಧ್ಯ ಎಂಬ ಮಾತು ಕೇಳಿಬರುತ್ತದೆ.
"ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಿದ್ದರೆ ಅದು ಮತದಾನಕ್ಕೆ ಮುಂಚಿನ ಎರಡು ತಿಂಗಳಿಂದ ಆರಂಭವಾಗುತ್ತದೆ. ಅಂತಹ ವಿಚಾರಗಳನ್ನು ಜನರ ಮಧ್ಯೆ ಯಾರು ತೆಗೆದುಕೊಂಡು ಹೋಗುತ್ತಾರೋ ಅವರ ಪರವಾಗಿ ಫಲಿತಾಂಶ ಬರುತ್ತದೆ. ಆದ್ದರಿಂದ ಇಷ್ಟು ಮುಂಚಿತವಾಗಿ ಹೀಗೆ ಅಂತ ಹೇಳುವುದು ಸಾಧ್ಯವಿಲ್ಲ" ಎಂಬ ಅಭಿಪ್ರಾಯ ಪಡುತ್ತಾರೆ ರಾಜಕೀಯ ವಿಶ್ಲೇಷಕರು ಹಾಗೂ ಚಿಂತಕರಾದ ಶಿವಸುಂದರ್.

ಸಿದ್ದರಾಮಯ್ಯ ಅವರೂ ಅದೇ ಚಾಳಿಗೆ ಬಲಿಯಾಗಬಹುದು
ಕಳೆದ ಒಂದು ವರ್ಷದಿಂದ ಈಚೆಗೆ ಲಿಂಗಾಯತ ಹಾಗೂ ಪರಿಶಿಷ್ಟರ ಎಡಗೈ ಸಮುದಾಯ ಕಾಂಗ್ರೆಸ್ ಕಡೆಗೆ ವಾಲುತ್ತಿವೆ. ಇದು ಸ್ಪಷ್ಟವಾಗಿ ಕಾಣುವ ಬದಲಾವಣೆ. ಆದರೆ ಕಾಂಗ್ರೆಸ್ ನವರ ಅತಿ ದೊಡ್ಡ ಸಮಸ್ಯೆ ಅಂದರೆ ಅತಿಯಾದ ಆತ್ಮವಿಶ್ವಾಸ. ಸಿದ್ದರಾಮಯ್ಯ ಅವರೂ ಅದೇ ಚಾಳಿಗೆ ಬಲಿ ಬಿದ್ದರೂ ಅಚ್ಚರಿಯಿಲ್ಲ. ಬಹಳ ಸಲ ಕೈಗೆ ಬಂದ ಅವಕಾಶವನ್ನು ಕಾಲಲ್ಲಿ ಹೊಸಕಿ ಆ ನಂತರ ಪರಿತಪಿಸಿದ ಉದಾಹರಣೆಗಳಿವೆ.

ತಿಜೋರಿಗಳಂತಿರುವ ಕ್ಯಾಂಡಿಡೇಟ್ ಗಳ ಮೇಲೆ ದಾಳಿ
ಇನ್ನು ಬಿಜೆಪಿಯಿಂದ ಕಾಂಗ್ರೆಸ್ ನ ಹಣದ ತಿಜೋರಿಗಳಂತಿರುವ ಕ್ಯಾಂಡಿಡೇಟುಗಳ ಮೇಲೆ ರೇಡ್ ಆಗಬಹುದು. ಇಡಿಯಂಥ ಏಡಿ, ಆದಾಯ ತೆರಿಗೆ ಇಲಾಖೆಯಂಥ ಕತ್ತರಿಯಲ್ಲಿ ಕಾಂಗ್ರೆಸ್ ನ ಫಂಡ್ ರೈಸರ್ ಗಳನ್ನೇ ಕೆಡವಿ ಕಣ್ಣು-ಬಾಯಿ ಬಿಡುವಂತೆ ಮಾಡಿದರೆ ಚುನಾವಣೆ ವೇಳೆಗೆ ಕೈ ಪಕ್ಷ ಮಧುಮೇಹ ಬಂದ ವ್ಯಕ್ತಿಯಂತೆ ದುರ್ಬಲವಾಗುವ ಸಾಧ್ಯತೆಯೂ ಇದೆ.

ಜನಪ್ರಿಯ ಯೋಜನೆಗಳು ಜಾರಿಗೆ ತಂದರೆ ಪ್ಲಸ್ಸು
ಒಂದು ವೇಳೆ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು, ಜನರ ಮಧ್ಯೆ ಚರಿಷ್ಮಾ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಟ್ಟುಬಿಟ್ಟರೆ ಕಾಂಗ್ರೆಸ್ ಗೆ ಸದ್ಯಕ್ಕೆ ಇರುವಂಥ ಆಶಾದಾಯಕ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಇನ್ನು ಜಾತಿ ಧ್ರುವೀಕರಣವೂ ಸಾಧ್ಯವಾಗಿಬಿಟ್ಟರೆ ಅಧಿಕಾರ ಹಿಡಿಯುವುದು ಖಂಡಿತಾ ಕಷ್ಟ ಇಲ್ಲ.

ಬಿಜೆಪಿಯ ಭಿನ್ನಮತ ಕಾಂಗ್ರೆಸ್ ನ ವರ
ಸದ್ಯದ ಪರಿಸ್ಥಿತಿ ನೋಡಿದರೆ ಬಿಜೆಪಿಯಲ್ಲಿರುವಷ್ಟು ಭಿನ್ನಮತ ಕಾಂಗ್ರೆಸ್ ನಲ್ಲಿಲ್ಲ. ಜತೆಗೆ ಹೈ ಕಮಾಂಡ್ ಕೂಡ ಅಷ್ಟೊಂದು ಪ್ರಭಾವಿಯಾಗಿಲ್ಲ. ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ಸ್ವಾತಂತ್ರ್ಯ ಖಂಡಿತಾ ಇದೆ. ಬಿಜೆಪಿಯಲ್ಲಿ ಭಿನ್ನಮತವಿಲ್ಲ ಎಂಬ ಮಾತನ್ನು ತಮಾಷೆಗೆ ಆಡಿದರೂ ಒಪ್ಪುವ ಸ್ಥಿತಿಯಲ್ಲಿ ಕಮಲ ಪಕ್ಷದ ಕಾರ್ಯಕರ್ತರೇ ಇಲ್ಲ. ಇದು ಕಾಂಗ್ರೆಸ್ ಪಾಲಿಗೆ ಅನುಕೂಲಕರ ಸನ್ನಿವೇಶ.

ದೇವೇಗೌಡರು- ಕುಮಾರಸ್ವಾಮಿ ಮೇಲಿನ ಅವಲಂಬನೆ
ಕಾಂಗ್ರೆಸ್ ನ ಮತಗಳನ್ನು ಕೀಳಬಹುದಾದ ಪ್ರಮುಖ ಪಕ್ಷ ಜೆಡಿಎಸ್. ಆದರೆ ಅಲ್ಲಿ ಈಗ ಆಗಿರುವ ಸಮಸ್ಯೆ ಏನೆಂದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮೇಲಿನ ಅವಲಂಬನೆ. ಇಬ್ಬರ ಪ್ರಯತ್ನವೂ ಅದ್ಭುತವಾಗಿವೆ, ಆಲೋಚನೆಗಳ ಬಗ್ಗೆಯೂ ಬೆರಳು ಮಡಚುವಂತಿಲ್ಲ. ಆದರೆ ಇಡೀ ರಾಜ್ಯ ಸುತ್ತುವಷ್ಟು ಆರೋಗ್ಯ ಸ್ಥಿತಿ ಇಬ್ಬರಿಗೂ ಉತ್ತಮವಿಲ್ಲ.

ಮೈ ಮರೆಯುವ ಪ್ರವೃತ್ತಿ ಬಿಡಬೇಕು
ಕಾಂಗ್ರೆಸ್ ನ ಕೊನೆಯ ಕ್ಷಣದಲ್ಲಿ ಮೈ ಮರೆಯುವ ಪ್ರವೃತ್ತಿ, ಅಹಂಭಾವದ ವರ್ತನೆ, ವಿಪಕ್ಷಗಳ ತಂತ್ರಗಾರಿಕೆ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟರೆ ಮುಂದಿನ ವಿಧಾನಸಭೆ ಚುನಾವಣೆ ಫಲಿತಾಂಶ 'ಕೈ' ಹತ್ತುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮೋದಿ ಹವಾ ಕಡಿಮೆ ಆದಂತೆ ಗೋಚರಿಸುತ್ತಿದೆ. ಅದು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆವರೆಗೆ ಹೀಗೆ ಇರಬಹುದಾ ಎಂಬುದು ಗೊತ್ತಿಲ್ಲ. ಇದ್ದರೆ ಮಾತ್ರ ಕಾಂಗ್ರೆಸ್ ಗೆ ಅನುಕೂಲಕರವಾಗಿದೆ ಎಂಬುದು ವಿಶ್ಲೇಷಕರಾದ ಶಿವಸುಂದರ್ ಅವರ ಅಭಿಪ್ರಾಯ.












Click it and Unblock the Notifications