ರಾಜ್ಯದ ನಾಲ್ಕು 'ಕೇಸರಿ ಕೋಟೆ ಕ್ಷೇತ್ರದಲ್ಲಿ' ಹೇಗಿದೆ ಸದ್ಯದ ರಾಜಕೀಯ ಹವಾ

ರಾಜ್ಯದಲ್ಲಿ ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ ಹದಿನಾಲ್ಕು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರು ಪ್ರಮುಖ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಮತದಾರನನ್ನು ಓಲೈಸುವ ಎಲ್ಲಾ ಸಾಧ್ಯವಾದ ದಾರಿಗಳನ್ನು ಬಳಸಿಕೊಳ್ಳುತ್ತಿವೆ.

ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಭಾಷಣ ಮಾಡಿ ಹೋಗಿದ್ದಾರೆ, ಮತ್ತೆ ಬರುವವರಿದ್ದಾರೆ ಕೂಡಾ. ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಇದ್ದಷ್ಟು ಮೋದಿ ಹವಾ ಈ ಬಾರಿಯೂ ಇದೆಯಾ ಎನ್ನುವ ಪ್ರಶ್ನೆಗೆ, ಪ್ರಚಾರದ ವೇಳೆ, ಅಭ್ಯರ್ಥಿಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆಯ ಪ್ರಕಾರ ಉತ್ತರ ಇಲ್ಲ.

ಆದರೆ, ಪುಲ್ವಾಮಾ ಘಟನೆ ತದನಂತರದ ಏರ್ ಸ್ಟ್ರೈಕ್ ವಿದ್ಯಮಾನ, ಮೋದಿಯ ಜನಪ್ರಿಯತೆಯನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ ಎನ್ನುತ್ತದೆ ಸಮೀಕ್ಷೆಯ ವರದಿ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಪಾಲಿಗೆ 'ಕೇಸರಿ ಕೋಟೆ' ಯಂತಿರುವ ಕ್ಷೇತ್ರಗಳು ಯಾವುವು ಅಂದರೆ ಅದು ಕರಾವಳಿ ಮತ್ತು ಮಲೆನಾಡಿನ ಕ್ಷೇತ್ರಗಳು.

ಮಿಕ್ಕ ಹಲವು ಕ್ಷೇತ್ರಗಳೂ ಬಿಜೆಪಿಯ ಭದ್ರಕೋಟೆಯಾಗಿದ್ದರೂ, ಕೇಸರಿ ಕೋಟೆ ಮತ್ತು ಬಿಜೆಪಿ ಕೋಟೆ ಎನ್ನುವ ಪದಗಳಿಗೆ ವ್ಯತ್ಯಾಸ ಇರುವುದರಿಂದ, ಆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಪೂರಕ ವಾತಾವರಣ ಇದೆಯಾ ಅಥವಾ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಆ ಭಾಗದಲ್ಲಿ ವರ್ಕೌಟ್ ಆಗುತ್ತಿದೆಯಾ ಎನ್ನುವ ಪ್ರಶ್ನೆ ಬರುವುದು ಸಹಜ.

ಹಿಂದೂ ಪ್ರಯೋಗಶಾಲೆ ಎಂದು ಕರೆಯಲ್ಪಡುವ ಕ್ಷೇತ್ರಗಳು

ಹಿಂದೂ ಪ್ರಯೋಗಶಾಲೆ ಎಂದು ಕರೆಯಲ್ಪಡುವ ಕ್ಷೇತ್ರಗಳು

ರಾಜ್ಯದ ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರಕನ್ನಡ ಮತ್ತು ಉಡುಪಿ ಚಿಕ್ಕಮಗಳೂರು ಕೇಸರಿ ಭದ್ರಕೋಟೆ. ಅದರಲ್ಲೂ ದಕ್ಷಿಣಕನ್ನಡ ಮತ್ತು ಉಡುಪಿ ಹಿಂದೂ ಪ್ರಯೋಗಶಾಲೆ ಎಂದೇ ಕರೆಯಲ್ಪಡುವ ಕ್ಷೇತ್ರಗಳು. ಈ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಕಳೆದ ಬಾರಿ ಗೆದ್ದ ಎಲ್ಲಾ ನಾಲ್ವರು ಈ ಬಾರಿ ಕೂಡಾ ಬಿಜೆಪಿಯ ಅಭ್ಯರ್ಥಿಗಳು. ಈ ನಾಲ್ಕು ಕ್ಷೇತ್ರಗಳಲ್ಲಿ ಸದ್ಯದ ವಾತಾವರಣ ಹೇಗಿದೆ, ಬಿಜೆಪಿ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲಿದೆಯಾ ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಹಲವು ಕುತೂಹಲಕ್ಕೆ ಕಾರಣವಾಗಿದೆ, ಅದಕ್ಕೆ ಕಾರಣಗಳೂ ಹಲವಾರು. ಟಿಕೆಟಿಗಾಗಿ ಹಲವರು ಪ್ರಯತ್ನಿಸಿದ್ದರೂ ಬಿಜೆಪಿ ಟಿಕೆಟ್ ನಿರೀಕ್ಷೆಯಂತೆ ಒಲಿದದ್ದು ನಳಿನ್ ಕುಮಾರ್ ಕಟೀಲ್ ಗೆ. ಇನ್ನು ಕಾಂಗ್ರೆಸ್ ನಲ್ಲೂ ರಮಾನಾಥ ರೈ, ಐವಾನ್ ಡಿಸೋಜ ಮುಂತಾದವರು ಶತಪ್ರಯತ್ನ ಮಾಡಿದರೂ, ಯುವ ಮುಖಂಡ ಮಿಥುನ್ ರೈಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.

ಕ್ಷೇತ್ರದ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಿಜೆಪಿ ಏಳರಲ್ಲಿ ಗೆದ್ದದ್ದು ಒಂದೆಡೆಯಾದರೆ, ಎಂಪಿಯಾಗಿ ಕಟೀಲ್ ಅವರ ಕೆಲಸದ ಬಗ್ಗೆ ಜನರಿಗೆ ಅಷ್ಟೇನೂ ಸಮಾಧಾನವಿಲ್ಲ ಎನ್ನುವುದು ವಾಸ್ತವತೆ. ಬಿಜೆಪಿಯ ಟ್ರೇಡ್ ಮಾರ್ಕ್ ನಂತಿದ್ದ ಕೇಸರಿ ಶಾಲನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದ ವೇಳೆ ಬಳಸಿಕೊಳ್ಳುತ್ತಿರುವುದು ಒಂದೆಡೆಯಾದರೆ, ಜಿಲ್ಲೆಯ ಪ್ರಭಾವಿ ಮುಖಂಡ ಜನಾರ್ಧನ ಪೂಜಾರಿಯ ಪುತ್ರ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಧುಮುಕಿದ್ದಾರೆ.

ಆದರೆ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಮನಃಪೂರ್ವಕವಾಗಿ ಶ್ರಮಿಸಲಿದ್ದಾರಾ ಎನ್ನುವ ಪ್ರಶ್ನೆ, ಕಾಂಗ್ರೆಸ್ ಕಾರ್ಯಕರ್ತರಿಗೂ ಕಾಡುತ್ತಿದೆ. ಇತ್ತ ಬಿಜೆಪಿಯಲ್ಲಿ ನಳಿನ್ ಕಟೀಲ್ ಗಿಂತ ಮೋದಿಯ ಹೆಸರೇ ಇವರಿಗೆಲ್ಲಾ ಸರ್ವಸ್ವ. ಸದ್ಯದ ಮಟ್ಟಿಗೆ ಹೇಳುವುದಾದರೆ, ದಕ್ಷಿಣಕನ್ನಡದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಹುದು.

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ, ಕಳೆದ ಬಾರಿಗಿಂತ ಈ ಬಾರಿ ಭಿನ್ನ. ಯಾಕೆಂದರೆ, ಈ ಬಾರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಮೈತ್ರಿ ಪಕ್ಷದ ಅಭ್ಯರ್ಥಿ. ಅಂದರೆ, ಜೆಡಿಎಸ್ ಚಿಹ್ನೆಯಿಂದ ಪ್ರಮೋದ್ ಮಧ್ವರಾಜ್ ಇಲ್ಲಿ ಬಿಜೆಪಿಗೆ ಎದುರಾಳಿ. ಶತಶತ ಪ್ರಯತ್ನದ ನಂತರ ಶೋಭಾ ಕರಂದ್ಲಾಜೆಗೆ ಇಲ್ಲಿ ಟಿಕೆಟ್ ಸಿಕ್ಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಜಯಪ್ರಕಾಶ್ ಹೆಗ್ಡೆ ಮತ್ತು ಯಶಪಾಲ್ ಸುವರ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದವರು. ಟಿಕೆಟ್ ಅಂತಿಮವಾಗುತ್ತಿದ್ದಂತೆಯೇ, ವಂಚಿತರಿಬ್ಬರೂ ಸಾಮಾಜಿಕ ತಾಣದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿ ಎಂದು ಒಗ್ಗಟ್ಟು ಪ್ರದರ್ಶಿಸುವುದು ಬಿಜೆಪಿಗೆ ಆದ ಪ್ಲಸ್ ಪಾಯಿಂಟ್. ಇನ್ನು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಉಡುಪಿ ವಿಧಾನಸಭೆಯ ಮಾಜಿ ಶಾಸಕರು.

ಹಾಗಾಗಿ, ಇವರಿಗೆ ಉಡುಪಿಯಿಂದ ಹೊರಗಡೆ ಇವರ ಬಗ್ಗೆ ಜನರಿಗೆ ಪರಿಚಯ ಇರುವ ಸಾಧ್ಯತೆ ಕಮ್ಮಿ. ಇದು ಬಿಜೆಪಿಗಾಗುತ್ತಿರುವ ಇನ್ನೊಂದು ವರದಾನ. ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಶೃಂಗೇರಿ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಬಿಜೆಪಿ ಶಾಸಕರಿದ್ದಾರೆ. ಶೋಭಾ ಮೇಲೆ ಬಿಜೆಪಿಯ ಮುಖಂಡರಿಗೆ ಅಸಮಾಧಾನವಿದ್ದರೂ, ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಮತ್ತೆ ಇಲ್ಲಿ ಕೂಡಾ, ಮೋದಿಯೇ ಅಭ್ಯರ್ಥಿ ಎಂದು ಪ್ರಚಾರ ನಡೆಸುತ್ತಿರುವುದರಿಂದ, ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು.

ಉತ್ತರಕನ್ನಡ ಲೋಕಸಭಾ ಕ್ಷೇತ್ರ

ಉತ್ತರಕನ್ನಡ ಲೋಕಸಭಾ ಕ್ಷೇತ್ರ

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಡೆದ ಕಳೆದ ಆರು ಚುನಾವಣೆಯಲ್ಲಿ ( 1999 ಹೊರತು ಪಡಿಸಿ) ಬಿಜೆಪಿಯದ್ದೇ ಪಾರುಪತ್ಯ. ಅಭಿವೃದ್ದಿ ವಿಚಾರದಲ್ಲಿ ಹಾಲೀ ಸಂಸದರ ಮೇಲೆ, ಅಷ್ಟೇನೂ ಒಳ್ಳೆಯ ಜನಾಭಿಪ್ರಾಯ ಇಲ್ಲದಿದ್ದರೂ, ಬಿಜೆಪಿ ಸತತವಾಗಿ ಈ ಕ್ಷೇತ್ರದಲ್ಲಿ ಗೆಲ್ಲುತ್ತಿದೆ. ಈ ಬಾರಿಯೂ ಬಿಜೆಪಿಯಿಂದ ಅನಂತ್ ಕುಮಾರ್ ಹೆಗಡೆ ಕಣಕ್ಕಿಳಿದಿದ್ದಾರೆ.

ಇನ್ನು, ಜೆಡಿಎಸ್ ನಿಂದ ಆನಂದ್ ಅಸ್ನೋಟಿಕರ್ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಐದರಲ್ಲಿ, ಕಾಂಗ್ರೆಸ್ ಮೂರರಲ್ಲಿ ಗೆದ್ದಿತ್ತು. ಜೆಡಿಎಸ್ಸಿಗೆ ಪ್ರಾಭಲ್ಯವಿಲ್ಲದಿದ್ದರೂ, ಮೈತ್ರಿ ಹೊಂದಾಣಿಕೆಯಂತೆ, ಕಾಂಗ್ರೆಸ್ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು.

ಎರಡು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಜೊತೆಜೊತೆಯಾಗಿ ಕೆಲಸ ಮಾಡದೇ ಇರುವುದು ಪಕ್ಷಕ್ಕಾಗುತ್ತಿರುವ ಹಿನ್ನಡೆ ಒಂದೆಡೆಯಾದರೆ, ಅಸ್ನೋಟಿಕರ್ ಅವರಿಗೆ ಕಾರವಾರದಿಂದ ಹೊರಗೆ ಅಷ್ಟೇನೂ ಜನಪ್ರಿಯತೆ ಇಲ್ಲದಿರುವುದು ಇನ್ನೊಂದು. ಮೋದಿ ಹವಾ ಇಲ್ಲಿ ಹೆಚ್ಚಾಗಿರುವುದರಿಂದ, ಕ್ಷೇತ್ರವನ್ನು ಬಿಜೆಪಿ ಮತ್ತೆ ತನ್ನ ಸುಪರ್ದಿಯಲ್ಲಿ ಉಳಿಸಿಕೊಳ್ಳಬಹುದು.

ಶಿವಮೊಗ್ಗ ಲೋಕಸಭಾ ಕ್ಷೇತ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರ

ರಾಜ್ಯದ ಹಲವು ಮುಖಂಡರಿಗೆ ರಾಜಕೀಯ ಕರ್ಮಭೂಮಿಯಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಮತ್ತು ಜೆಡಿಎಸ್ ನಿಂದ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯ ಉಪಚುನಾವಣೆಯಲ್ಲಿ ಸುಮಾರು ಐವತ್ತು ಸಾವಿರ ಮತಗಳ ಅಂತರದಿಂದ ಸೋತಿದ್ದ ಮಧು, ಒಲ್ಲದ ಮನಸ್ಸಿನಿಂದಲೇ ಸ್ಪರ್ಧೆಗೆ ಈ ಬಾರಿ ಓಕೆ ಎಂದಿದ್ದರು.

ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ಇಲ್ಲಿ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಒಂದು ಅಸೆಂಬ್ಲಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದ್ದರೆ, ಬಿಜೆಪಿ ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.

ಭದ್ರಾವತಿ ಮತ್ತು ಸೊರಬ ಕ್ಷೇತ್ರಗಳನ್ನು ಹೊರತು ಪಡಿಸಿದರೆ, ಮಿಕ್ಕಕಡೆ ಜೆಡಿಎಸ್ ಹವಾ ಕಮ್ಮಿ. ಕಾಂಗ್ರೆಸ್ ಮುಖಂಡರು ಪೂರ್ಣ ಮನಸ್ಸಿನಿಂದ ಇನ್ನಾದರೂ ಕೈಜೋಡಿಸಿದರೆ ಮಾತ್ರ, ಬಿಜೆಪಿಗೆ ಫೈಟ್ ನೀಡಲು ಸಾಧ್ಯ ಎನ್ನುವ ಸ್ಥಿತಿ ಇಲ್ಲಿದೆ. ಇಲ್ಲೂ ಮೈತ್ರಿ ಪಕ್ಷಕ್ಕೆ ಆಶಾದಾಯಕ ಫಲಿತಾಂಶ ಹೊರಬೀಳುವ ಸಾಧ್ಯತೆ ಕಮ್ಮಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+