'ಪಾದರಾಯನಪುರ: ಮುಂದೆ ಮಾದರಿಯಾಗಲಿರುವ ಕಠಿಣಕ್ರಮ ಕೈಗೊಳ್ಳುತ್ತೇವೆ'
ಬೆಂಗಳೂರು, ಏ. 20: ಇಡೀ ದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಬೆಂಗಳೂರಿನಲ್ಲಿ ಅತಿಹೆಚ್ಚು 17 ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಪಾದರಾಯನಪುರ ಪ್ರದೇಶದ ಜನರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಅಂತಹ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಕುರಿತು ಖಡಕ್ ಕ್ರಮಕ್ಕೆ ಸರ್ಕಾರ ಸೂಚಿಸಿದೆ.
ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳಲಿರುವ ಕ್ರಮ ಮುಂದೆ ಮಾದರಿಯಾಗಲಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಪ್ರಕರಣದ ಕುರಿತು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಿಷ್ಟು: ಪಾದರಾಯನಪುರ ಘಟನೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಯಾವುದೇ ಮುಲಾಜಿಗೆ ಒಳಗಾಗದೇ ಕ್ರಮಕೈಗೊಳ್ಳಿ ಎಂದು ಸಿಎಂ ಅವರು ಸೂಚನೆ ಕೊಟ್ಟಿದ್ದಾರೆ. ನಾನು ಅಧಿಕಾರಿಗಳಿಗೂ ತಿಳಿಸಿದ್ದೇನೆ, ಇದು ಸಣ್ಣ ಕಾನೂನು ಉಲ್ಲಂಘನೆ ಪ್ರಕರಣ ಅಲ್ಲ. ಇದೊಂದು ಸಮಾಜ ದ್ರೋಹಿಗಳ ಕೆಲಸ. ಸರ್ಕಾರ ಅದನ್ನು ಸಹಿಸಲ್ಲ. ಈ ಒಂದು ಪ್ರಕರಣದಿಂದ ಸರ್ಕಾರ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಮಾದರಿಯಾಗಲಿದೆ.
ಒಂದು ವಾರ ಸಹಕಾರ ಕೊಟ್ಡಿದ್ದ ಜನರನ್ನ ದಾರಿ ತಪ್ಪಿಸಿದ್ದು ಯಾರು ಎಂದು ತನಿಖೆ ಮಾಡುತ್ತೇವೆ. ಉಳಿದ ಎಲ್ಲ ಸ್ಥಳಗಳಲ್ಲಿ ಭದ್ರತೆ ಮಾಡಿದ್ದೇವೆ. ಪಾದರಾಯನಪುರ, ಬಾಪೂಜಿನಗರ, ಟಿಪ್ಪುನಗರದಲ್ಲಿ ಹೆಚ್ಚಿನ ಭದ್ರತೆ ಮಾಡಿದ್ದೇವೆ. ನಾಲ್ಕು ಕೆಎಸ್ಆರ್ಪಿ ತುಕಡಿಗಳನ್ನ ನಿಯೋಜನೆ ಮಾಡಿದ್ದೇವೆ. ಯಾಕಂದ್ರೇ ಈ ಮೂರು ಪ್ರದೇಶಗಳಲ್ಲಿ 19ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಹಂತದ ಸಂಪರ್ಕ ಹೊಂದಿದ್ದವರನ್ನು ಪತ್ತೆ ಮಾಡುತ್ತಿದ್ದೇವೆ. ಘಟನೆಗೆ ಕಾರಣ ಏನು, ಯಾರು ಪ್ರಚೋದನೆ ಕೊಟ್ಡಿದ್ದಾರೆ, ಇದರ ಯಾರಿದ್ದಾರೆ ಅನ್ನೋದು ತನಿಖೆಯಲ್ಲಿ ಗೊತ್ತಾಗಲಿದೆ. ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications