ವಿಶ್ವನಾಥ್ ಶೆಟ್ಟಿ ನೇಮಕದ ವಿರುದ್ಧ ಸುಪ್ರಿಂಗೆ ಹೋಗಲೂ ಸಿದ್ದ-ಹಿರೇಮಠ್
ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಯವರನ್ನು ನೇಮಕ ಮಾಡಿ ಸರಕಾರ ಕ್ರಮದ ವಿರುದ್ದ ಸುಪ್ರಿಂ ಕೋರ್ಟಿಗೆ ಹೋಗಲೂ ಸಿದ್ಧ ಎಂದು ಎಸ್.ಆರ್.ಹಿರೇಮಠ್ ಹೇಳಿದ್ದಾರೆ.
ಹುಬ್ಬಳ್ಳಿ, ಜನವರಿ 26: ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳಿವೆ. ಅವರು ಲೋಕಾಯುಕ್ತ ಹುದ್ದೆಯನ್ನು ಒಪ್ಪಿಕೊಳ್ಳಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್ ಹಿರೇಮಠ್ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ನ್ಯಾ. ವಿಶ್ವನಾಥ್ ಶೆಟ್ಟಿಯನ್ನು ಲೋಕಾಯುಕ್ತರಾಗಿ ನೇಮಿಸುವ ರಾಜ್ಯಪಾಲರ ನಿರ್ಧಾರವನ್ನು ರಾಷ್ಟ್ರಪತಿಗಳು ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸುಪ್ರಿಂ ಕೋರ್ಟಿಗೆ ಹೋಗಲೂ ಸಿದ್ಧ," ಎಂದು ಹೇಳಿದ್ದಾರೆ. [ನ್ಯಾ. ವಿಶ್ವನಾಥ್ ಶೆಟ್ಟಿ ಹೊಸ ಲೋಕಾಯುಕ್ತ]
"ವಿಶ್ವನಾಥ ಶೆಟ್ಟಿಯವರ ಪತ್ನಿ ಶಕುಂತಲಾ ಗಂಟಗಾನಹಳ್ಳಿಯಲ್ಲಿ ಅಕ್ರಮವಾಗಿ 6 ಎಕರೆಗೂ ಮಿಕ್ಕಿ ಗೋಮಾಳ ಜಮೀನು ಖರೀದಿಸಿದ್ದಾರೆ. ಅಕ್ರಮ, ವ್ಯವಹಾರ, ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾದ ಗಂಭೀರ ಆರೋಪಗಳು ವಿಶ್ವನಾಥ ಶೆಟ್ಟಿಯವರ ಮೇಲಿದೆ. ಲೋಕಾಯುಕ್ತ ಸಂಸ್ಥೆಯ ಮೇಲೆ ಅವರಿಗೆ ಕಿಂಚಿತ್ತು ಗೌರವ ಇದ್ದರೆ ಲೋಕಾಯುಕ್ತ ಹುದ್ದೆಯನ್ನು ವಹಿಸಿಕೊಳ್ಳಬಾರದು," ಎಂದು ವಾಗ್ದಾಳಿ ನಡೆಸಿದರು. [ಲೋಕಾಯುಕ್ತ ಹುದ್ದೆಗೇರಲಿರುವ ನ್ಯಾ.ವಿಶ್ವನಾಥ್ ಶೆಟ್ಟಿ ವ್ಯಕ್ತಿಚಿತ್ರ]
"ಸರಕಾರ ಕೊನೆಗೂ ಲೋಕಾಯುಕ್ತ ಸಂಸ್ಥೆಗೆ ಕಳಂಕ ರಹಿತರನ್ನು ನೇಮಿಸಲು ವಿಫಲವಾಗಿದೆ. ರಾಜ್ಯ ಸರಕಾರ ಪ್ರಾಮಾಣಿಕರು, ದಕ್ಷರಿಗೆ ಮಣೆ ಹಾಕಬೇಕು. ಸಾಹಿತಿ ದೇವನೂರು ಮಹಾದೇವ ಮತ್ತು ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.