ಹಿಂದೂ ಪದದ ವಿವಾದ: ಜಾರಕಿಹೊಳಿ ವಿರುದ್ಧ ಕೋರ್ಟ್ಗೆ ದೂರು
ಬೆಂಗಳೂರು ನ.10: ರಾಜ್ಯಾದ್ಯಂತ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿರುವ ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ವಿಚಾರಣಾ ಕೋರ್ಟ್ನಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ.
ನಗರದ ಕೆ. ದಿಲೀಪ್ ಕುಮಾರ್ ಎಂಬ ವಕೀಲರು ಬುಧವಾರ ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ಗಲಭೆ ಮತ್ತು ಮಾನಹಾನಿ ಪ್ರಕರಣ ಸಂಬಂಧ ಸತೀಶ್ ಜಾರಕಿಹೊಳಿ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಕೋರ್ಟ್ ಕೆಲ ಕಾಲ ವಿಚಾರಣೆ ನಂತರ ದೂರಿನ ವಿಚಾರಣೆಯನ್ನು ನ.18ಕ್ಕೆ ಮುಂದೂಡಿದೆ.
ದೂರುದಾರರ ವಾದವೇನು?: ಜಾರಕಿಹೊಳಿ ಹೇಳಿಕೆಯಿಂದ ಅವಮಾನವಾಗಿದೆ. ನಾನು ಮಾನಸಿಕವಾಗಿ ಬಹಳ ಖಿನ್ನತೆಗೆ ಒಳಗಾಗಿದ್ದೇನೆ. ನನಗೆ ಸಾಕಷ್ಟು ಇತರೆ ಧರ್ಮದ ಸಾಕಷ್ಟು ಕಕ್ಷಿದಾರರು ಹಾಗೂ ಸ್ನೇಹಿತರಿದ್ದಾರೆ. ಅವರು ನನ್ನನ್ನು ಅವಮಾನ ಮತ್ತು ನಿರ್ಲಕ್ಷದಿಂದ ನೋಡುತ್ತಿದ್ದಾರೆ. ಹಿಂದು ಧರ್ಮದ ಕೆಲ ಸ್ನೇಹಿತರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಅವಮಾನ ಮತ್ತು ಮಾನಹಾನಿಗೆ ಗುರಿಯಾಗಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.

ಅಲ್ಲದೆ, ನನ್ನ ಹಾಗೂ ಹಿಂದು ಧರ್ಮದ ಅಪಾರ ಜನರ ಭಾವನೆಗಳನ್ನು ಅವಮಾನಿಸಿದ್ದಾರೆ. ಮಾನಹಾನಿ ಉಂಟು ಮಾಡಿದ್ದಲ್ಲದೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರು ಹೇಳಿಕೆ ನೀಡಿದ ನಂತರ ರಾಜ್ಯದ ಹಲವು ಭಾಗಗಳಲ್ಲಿ ಗಲಭೆ ನಡೆಯುತ್ತಿದೆ. ಆ ಮೂಲಕ ಭಾರತೀಯ ದಂಡ ಸಂಹಿತೆ ಸೆಕ್ಷನ್ 500 ಮಾನಹಾನಿ ಮತ್ತು 159ಅಡಿಯಲ್ಲಿ ಗಲಭೆ ಕಾರಣವಾಗುವ ಪ್ರಚೋದನೆ ಹೇಳಿಕೆ ನೀಡಿದ ಅಪರಾಧ ಕೃತ್ಯ ಎಸಗಿದ್ದಾರೆ. ಆದ್ದರಿಂದ ಆರೋಪಿ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಕೋರಿದ್ದಾರೆ.'
ಪ್ರಕರಣದ ಹಿನ್ನೆಲೆ ಏನು? ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ನ.6ರಂದು ನಡೆದ ಮಾನವ ಬಂಧುತ್ವ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿ, ಹಿಂದು ನಮ್ಮ ಪದವೇ ಅಲ್ಲ. ಇಂದು ಪರ್ಷಿಯನ್ನಿಂದ ಬಂದಿರುವ ಪದ. ಹಿಂದು ಪದದ ಅರ್ಥ ಅಶ್ಲೀಲವಾಗಿದೆ. ಆ ಪದದ ಅರ್ಥ ತಿಳಿದರೆ ನಾಚಿಕೆಯಾಗುತ್ತದೆ. ಪರ್ಷಿಯನ್ ಪದವಾದ ಹಿಂದು ನಮ್ಮ ಪದ ಹೇಗಾಯಿತು. ಈ ವಿಷಯದಲ್ಲಿ ಚರ್ಚೆಯಾಗಬೇಕು. ಎಲ್ಲಿಂದಲೋ ತಂದ ಪದವನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ ಪದದ ಅರ್ಥವೇನು ಎಂದು ಅಲ್ಲಿದ್ದವರು ಪ್ರಶ್ನಿಸಿದಾಗ, ವಿಕಿಪೀಡಿಯಾ ನೋಡಿದರೆ ನಿಮಗೆ ತಿಳಿಯುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆಯ ವಿಡಿಯೊ ವೈರಲ್ ಆಗಿದೆ. ಅಲ್ಲದೆ, ತಮ್ಮ ಹೇಳಿಕೆ ವೈಯಕ್ತವಾದುದ್ದಲ್ಲ. ವಿಕಿಪೀಡಿಯಾ ಮತ್ತು ಹಲವು ಲೇಖಕರು ಬರೆದಿರುವ ಲೇಖನಗಳನ್ನು ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಈ ಕುರಿತ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದು ದೂರಿನಲ್ಲಿ ದೂರುದಾರರ ತಿಳಿಸಿದ್ದಾರೆ.

ಸ್ಪಷ್ಟನೆ, ಸಿಎಂಗೆ ಪತ್ರ: ಹಿಂದೂ ಎಂಬ ಪದವು ಪರ್ಷಿಯನ್ ಭಾಷೆಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ನಾನು ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಈ ಕುರಿತು ಹಲವಾರು ಪುಸ್ತಕಗಳು, ಪತ್ರಿಕೆಗಳಲ್ಲಿಯೂ ಉಲ್ಲೇಖವಾಗಿದೆ. ಹಿಂದೂ ಪದವು ಪರ್ಷಿಯನ್ ಭಾಷೆಯಿಂದ ಬಂದಿದ್ದು, ಅದರ ಕುರಿತು ಚರ್ಚೆ ನಡೆಯಬೇಕಿದೆ ಎಂಬುದಾಗಿ ಹೇಳಿರುವ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಯಾವುದೇ ಹಿಂದೂ ಧರ್ಮವಿರಲಿ, ಪಾರ್ಸಿಯಿರಲಿ, ಇಸ್ಲಾಂ ಇರಲಿ, ಬೌದ್ಧ ಇರಲಿ, ಜೈನ ಇರಲಿ ಅದನ್ನು ಮೀರಿ ಬೆಳೆಯಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹೀಗಾಗಿ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪರ್ಷಿಯನ್ ಶಬ್ಧದಿಂದ ಬಂದಿರುವುದಕ್ಕೆ ನೂರಾರು ಸಾಕ್ಷ್ಯಗಳಿವೆ. ಅದರಲ್ಲಿ ಮುಖ್ಯವಾಗಿ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿ ರಚಿಸಿರುವ ಸತ್ಯಾರ್ಥ ಪ್ರಕಾಶ ಪುಸ್ತಕದಲ್ಲಿ ಉಲ್ಲೇಖವಿದೆ. ಅದೇ ರೀತಿ ಡಾ. ಜಿಎಸ್ ಪಾಟೀಲ್ ಬರೆದಿರುವ ಬಸವ ಭಾರತ ಪುಸ್ತಕದಲ್ಲಿಯೂ ಇದೆ. ಬಾಲಗಂಗಾಧರ ತಿಲಕ ಅವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖವಿದೆ. ಇದು ಕೇವಲ ಉದಾಹರಣೆಯಷ್ಟೇ, ಇಂಥ ನೂರಾರು ಸಾವಿರಾರು ಉದಾಹರಣೆಗಳು ನಿಮಗೆ ಸಿಗುತ್ತವೆ ಎಂದಿದ್ದರು.
ಬುಧವಾರದಂದು ಈ ವಿವಾದಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚಿಸಲು ಸಿಎಂ ಬೊಮ್ಮಾಯಿಗೆ ಶಾಸಕ ಸತೀಶ್ ಜಾರಕಿಹೊಳಿ ಪತ್ರ ಬರೆದಿದ್ದಾರೆ.












Click it and Unblock the Notifications