ಹಿಜಾಬ್ ಧಾರಣೆ ಕಡ್ಡಾಯಗೊಳಿಸುವ ವಾದ ಪುರಸ್ಕರಿಸಬಾರದು: ಎಜಿ
ಬೆಂಗಳೂರು, ಫೆ.22: ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಅದು ಮಹಿಳೆಯರ ಆಯ್ಕೆಯ ಬಿಟ್ಟಿದ್ದು, ಇದು ಅವರ ಘನತೆಯ ವಿಚಾರವೂ ಹೌದು. ಹಾಗಾಗಿ ಅವರಿಗೆ ಹಿಜಾಬ್ ಧಾರಣೆ ಕಡ್ಡಾಯಗೊಳಿಸಲು ನ್ಯಾಯಾಲಯವನ್ನು ಕೋರಲಾಗಿದೆ. ಈ ವಾದವನ್ನು ನ್ಯಾಯಾಲಯ ಒಪ್ಪಬಾರದು ಎಂದು ಸರ್ಕಾರ ಹೈಕೋರ್ಟ್ ಮುಂದೆ ವಾದಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅತಿ ಮುಖ್ಯ. ಹಾಗಾಗಿ ಅಯಾ ಸಂಸ್ಥೆಗಳೇ ಸಮವಸ್ತ್ರ ನಿಗದಿಪಡಿಸಿವೆ. ತರಗತಿಗಳಲ್ಲಿ ಹಿಜಾಬ್ ಧಾರಣೆಗೆ ಅವಕಾಶವಿಲ್ಲ, ಆದರೆ ಹೊರಗೆ ಧರಿಸಲು ಯಾವುದೇ ನಿರ್ಬಂಧವಿಲ್ಲ ಎಂದರು.
ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಅವರಿದ್ದ ಪೂರ್ಣ ಪೀಠ ಸುಮಾರು ಎರಡು ಗಂಟೆಗಳ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಸುಮಾರು ಒಂದೂಕಾಲು ಗಂಟೆ ವಾದ ಮಂಡಿಸಿದ ಎಜಿ, ಅರ್ಜಿದಾರರು ಎತ್ತಿರುವ ಯಾವುದೇ ಅಂಶಗಳಲ್ಲಿ ಹುರುಳಿಲ್ಲ. ಹಿಜಾಬ್ ಧಾರಣೆಗೆ ಭಾರತದಲ್ಲಿ ನಿರ್ಬಂಧವಿಲ್ಲ. ಆದರೆ ಅದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಇದರಲ್ಲಿ ಮಹಿಳೆಯರ ವಿಶೇಷವಾಗಿ ಮುಸ್ಲಿಂ ಮಹಿಳೆಯರ ಘನತೆ ಅಡಗಿದೆ. ಅದನ್ನು ನ್ಯಾಯಾಲಯ ಗಮನದಲ್ಲಿರಿಸಿಕೊಳ್ಳಬೇಕು ಎಂದರು.

ಫ್ರಾನ್ಸ್ನಲ್ಲಿ ಹಿಜಾಬ್ಗೆ ಸಂಪೂರ್ಣ ನಿಷೇಧ: ಫ್ರಾನ್ಸ್ನಲ್ಲಿ ಹಿಜಾಬ್ ಧಾರಣೆಗೆ ಸಂಪೂರ್ಣ ನಿರ್ಬಂಧವಿದೆ, ಹಾಗೆಂದು ಅಲ್ಲಿ ಇಸ್ಲಾಂ ಧರ್ಮ ಇಲ್ಲವೆಂದಲ್ಲ. ಅಂತೆಯೇ ಟರ್ಕಿ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಹಿಜಾಬ್ಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಎಲ್ಲೆಡೆ ನಿಷೇಧಿಸಲಾಗಿದೆ ಎಂದು ಎ ಜಿ ಹೇಳಿದರು.
ಆದರೆ ಭಾರತದಲ್ಲಿ ಹಿಜಾಬ್ಗೆ ನಿರ್ಬಂಧವಿಲ್ಲ, ಆದರೆ ಶಾಲಾ ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರ ನಿಗದಿ ಮಾಡಿರುವುದರಿಂದ ಅದನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಧರಿಸಲು ಅವಕಾಶವಿಲ್ಲ, ಅದನ್ನು ನ್ಯಾಯಬದ್ಧವಾಗಿಯೇ ನಿರ್ಬಂಧಿಸಲಾಗಿದೆ. ಅದೂ ತರಗತಿಗಳಲ್ಲಿ ಮಾತ್ರ ಹಿಜಾಬ್ ಧರಿಸುವಂತಿಲ್ಲ ಎಂದು ಅಡ್ವೊಕೇಟ್ ಜನರಲ್ ಹೇಳಿದರು.
ಸುರ ಮತ್ತ ಖುರಾನ್ ಉಲ್ಲೇಖಿಸಿದ ಎಜಿ, ಅರ್ಜಿದಾರರು ಉಲ್ಲೇಖಿಸಿರುವಂತೆ ಖುರಾನ್ನಲ್ಲೂ ಹಿಜಾಬ್ ಧಾರಣೆ ಅತ್ಯಗತ್ಯವೆಂದು ಹೇಳಿಲ್ಲ, ಹಾಗಾಗಿ ಅದು ಅತ್ಯಗತ್ಯ ಧಾರ್ಮಿಕ ಆಚರಣೆ ಪದ್ದತಿಯಲ್ಲ ಎಂದು ವಾದಿಸಿದರು.
ಎಲ್ಲರಿಗೂ ಧರಿಸುವಂತೆ ಒತ್ತಡ: ಹಿಜಾಬ್ ಧರಿಸಲು ಅನುಮತಿ ಕೋರಿರುವ ಅರ್ಜಿದಾರರು ಆ ಮೂಲಕ ನ್ಯಾಯಾಲಯದಿಂದ ಆದೇಶ ಪಡೆದು ಎಲ್ಲ ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಲೇಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇದು ಸರಿಯಲ್ಲ, ಇದನ್ನು ಕೋರ್ಟ್ ಒಪ್ಪಬಾರದು ಎಂದರು.
ಆಗ ನ್ಯಾ. ಕೃಷ್ಣ ದೀಕ್ಷಿತ್, ಉದಾಹರಣೆಗೆ ಮಂಗಳಸೂತ್ರದ ವಿಚಾರ ಬಂದಾಗ ನ್ಯಾಯಾಲಯ ಮಂಗಳಸೂತ್ರ ಧರಿಸುವುದು ಕಡ್ಡಾಯವೆಂದರೆ, ಆಗ ಯಾವ ಮಹಿಳೆಯರು ಧರಿಸುವುದಿಲ್ಲವೋ ಅಂತಹವರು ನಿಯಮ ಉಲ್ಲಂಘಿಸಿದ್ದಾರೆ ಎಂದು ಅರ್ಥವೇ ಎಂದರು.
ಅದಕ್ಕೆ ಹೌದು ಎಂದು ಅಡ್ವೊಕೇಟ್ ಜನರಲ್ ಉತ್ತರಿಸಿದರು.
ನಾಗಾನಂದ್ ವಾದ ಮಂಡನೆ: ಪ್ರತಿವಾದಿಗಳ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಸ್. ಎಸ್. ನಾಗಾನಂದ್, ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಯಲ್ಲ. ಅದು ಅಗತ್ಯವೂ ಅಲ್ಲ. ಹಿಂದೂ ಧರ್ಮದಲ್ಲೂ ಸಾಕಷ್ಟು ಆಚರಣೆಗಳಿವೆ, ಅವೆಲ್ಲಾ ಅಯಾ ಸಂದರ್ಭಕ್ಕೆ ಸೀಮಿತವಾದವು, ಅವುಗಳು ಕಡ್ಡಾಯವಲ್ಲ. ಅಂತೆಯೇ ಹಿಜಾಬ್ ಧಾರಣೆ ಕಡ್ಡಾಯವಲ್ಲ, ಈ ವಿಚಾರದಲ್ಲಿ ಸರಕಾರದ ವಾದ ಅನುಮೋದಿಸುವುದಾಗಿ ತಿಳಿಸಿದರು. ಆ ಕುರಿತು ಬುಧವಾರ ಹೆಚ್ಚಿನ ವಾದ ಮಂಡಿಸುವುದಾಗಿ ಹೇಳಿದರು.












Click it and Unblock the Notifications