ಹಿಜಾಬ್ ವಿವಾದ: ಫೆ.8ರಂದು ಹೈಕೋರ್ಟ್ನಲ್ಲಿ ಸರ್ಕಾರದ ವಾದ ಮಂಡನೆ
ಬೆಂಗಳೂರು. ಫೆ.3; ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ನಿರ್ಬಂಧ ವಿಧಿಸಿರುವ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಕಾನೂನು ಕಟಕಟೆಗೆ ಏರಿರುವ ಈ ವಿವಾದಕ್ಕೆ ನ್ಯಾಯಾಲಯವೇ ತೆರೆ ಎಳೆಯಬೇಕಿದೆ. ಇದೀಗ ರಾಜ್ಯ ಸರ್ಕಾರ ಫೆ.8ರಂದು ಹೈಕೋರ್ಟ್ ನಲ್ಲಿ ತನ್ನ ವಾದ ಮಂಡಿಸಲು ಸಜ್ಜಾಗುತ್ತಿದೆ.
ಉಡುಪಿ ಸರ್ಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್, ರೇಶಮ್ ಫಾರೂಕ್, ಅಲಿಯಾ ಅಸ್ಸಾದಿ, ಶಫಾ, ಶಮೀಮ್, ಮುಸ್ಕಾನ್ ಜೈನಬ್ ಹಾಗೂ ಅವರ ತಾಯಂದಿರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಆಗ ಸರಕಾರಿ ವಕೀಲರು, ಇದು ಗಂಭೀರ ವಿಚಾರವಾಗಿದ್ದು, ಇದರಲ್ಲಿ ಅಡ್ವೊಕೇಟ್ ಜನರಲ್ ಅವರೇ ಖುದ್ದು ವಾದ ಮಂಡಿಸಲಿದ್ದಾರೆ, ಹಾಗಾಗಿ ಸ್ವಲ್ಪ ಸಮಯ ನೀಡಬೇಕೆಂದು ಕೋರಿದರು. ಆ ಹಿನ್ನೆಲೆಯಲ್ಲಿ ನ್ಯಾಯಪೀಠ, ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿತು,
ಅಲ್ಲದೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರು, ಉಡುಪಿ ಜಿಲ್ಲಾಧಿಕಾರಿ, ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ರುದ್ರೇಗೌಡ, ಉಪ ಪ್ರಾಚಾರ್ಯ ಗಂಗಾಧರ ಶರ್ಮಾ, ಪ್ರಾಧ್ಯಾಪಕರಾದ ಡಾ. ಯಾದವ್, ಪ್ರಕಾಶ್ ಶೆಟ್ಟಿ, ಡಿ ದಯಾನಂದ, ರುದ್ರಪ್ಪ, ಶಾಲಿನಿ ನಾಯಕ್, ಛಾಯಾ ಶೆಟ್ಟಿ, ಡಾ. ಉಷಾ ನವೀನ್ ಚಂದ್ರ, ಉಡುಪಿ ಶಾಸಕ ರಘುಪತಿ ಭಟ್ ಮತ್ತು ಯಶ್ಪಾಲ್ ಆನಂದ್ ಸುರಾನ ಅವರನ್ನು ಐದರಿಂದ 16ನೇ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಮೂಲಭೂತ ಹಕ್ಕು ಉಲ್ಲಂಘನೆ: ಸಂವಿಧಾನದ ಕಲಂ 14 ಮತ್ತು 25ರ ಅನ್ವಯ ತಮಗಿರುವ ಧಾರ್ಮಿಕ ಸ್ವಾತಂತ್ರ್ಯದಡಿ ಹಿಜಾಬ್ ಧರಿಸುತ್ತಿದ್ದೇವೆ. ಆದರೆ ಅದನ್ನು ನಿರ್ಬಂಧಿಸುವ ಮೂಲಕ ಮುಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಅರ್ಜಿಯಲ್ಲಿ ಹೇಳಿದ್ದಾರೆ.
"ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಲಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಕಾಲೇಜಿನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. 2021ರ ಡಿ.28ರಂದು ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳಿಗೆ ಕಾಲೇಜು ಪ್ರವೇಶ ನಿರ್ಬಂಧಿಸಲಾಗಿದೆ, ಅವರಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಿಲ್ಲ. ಶಿಕ್ಷಣ ಸಂಸ್ಥೆಗಳು ಹಿಜಾಬ್ ಧಾರಣೆಯನ್ನು ನಿರ್ಬಂಧಿಸುವಂತಿಲ್ಲವೆಂದು'' ಕೋರ್ಟ್ ಆದೇಶ ನೀಡಬೇಕೆಂದು ವಿದ್ಯಾರ್ಥಿನಿ ಕೋರಿದ್ದಾರೆ.
ಪವಿತ್ರ ಖುರಾನ್ನಲ್ಲಿ ಮುಸ್ಲಿಂ ಧರ್ಮದ ಯುವತಿಯರು ಹಿಜಾಬ್ ಧರಿಸಬೇಕೆನ್ನುವ ಪದ್ದತಿಯ ಉಲ್ಲೇಖಲಿದೆ. ಹಾಗಾಗಿ ಹಿಜಾಬ್ ಧರಿಸಿದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ ಮೂಲಕ ಮೂಲಭೂತ ಹಕ್ಕು ಉಲ್ಲಂಘಸಿಲಾಗಿದೆ. ಜೊತೆಗೆ ಭಾರತೀಯ ಸಂವಿಧಾನದಡಿ ಎಲ್ಲರಿಗೂ ತಮ್ಮ ಆದೇಶ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಅವಕಾಶವಿದೆ. ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಹಾಗೆ ಮಾಡಿದರೆ ಅದು ಸಂವಿಧಾನಿಕ ನಿಯಮಗಳ ಉಲ್ಲಂಘನೆಯಾಗಿದೆ. ಸರ್ಕಾರ ರಾಜಕೀಯ ಪ್ರೇರಿತವಾಗಿ, ತಾರತಮ್ಯದ ಉದ್ದೇಶದಿಂದ ಇಂತಹ ಕ್ರಮ ಅನುಸರಿಸುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.












Click it and Unblock the Notifications