ಕೊಲ್ಲೂರು ದೇವಾಲಯ ಮಂಡಳಿಗೆ ಹಿನ್ನಡೆ, ರಾಘವೇಶ್ವರ ಶ್ರೀಗಳಿಗೆ ಮುನ್ನಡೆ
ಉಡುಪಿ, ಜೂ 11: ರಾಜ್ಯದ ಪುರಾಣಪ್ರಸಿದ್ದ ಮತ್ತು ಮುಜರಾಯಿ ವ್ಯಾಪ್ತಿಯ ಶ್ರೀಮಂತ ದೇವಾಲಯಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ರಾಮಚಂದ್ರಾಪುರ ಮಠದ ಶ್ರೀಗಳಿಗಿದ್ದ ತೊಡಕು ನಿವಾರಣೆಯಾಗಿದೆ.
ದೇವಾಲಯದ ಆಡಳಿತ ಮಂಡಳಿ, ಮೂಕಾಂಬಿಕೆಯ ಜನ್ಮಾಷ್ಠಮಿಯ೦ದು ಪ್ರತೀವರ್ಷ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳನ್ನು ಆಮಂತ್ರಿಸಿ, ಶ್ರೀಗಳಿಂದ ತಾಯಿಗೆ ವಿಶೇಷಪೂಜೆ ಮಾಡಿಸುವ ಪದ್ದತಿಯನ್ನು ಪಾಲಿಸಿಕೊಂಡು ಬರುತ್ತಿತ್ತು. (ಹವ್ಯಕರ ಸಭೆಯಲ್ಲಿ ಮಾರಾಮಾರಿ)
ಆದರೆ ಕಳೆದ ವರ್ಷ (2015) ಮೂಕಾಂಬಿಕೆಯ ಜನ್ಮಾಷ್ಠಮಿಯ೦ದು ರಾಘವೇಶ್ವರ ಶ್ರೀಗಳು ಪೂಜೆ ಮಾಡದಂತೆ ತಡೆಯುವ ಪ್ರಯತ್ನಗಳು ನಡೆದಿದ್ದವು. ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ದೇವಾಲಯದಲ್ಲಿ ಶ್ರೀಗಳು ನಡೆಸುತ್ತಿದ್ದ ಪೂಜೆಗೆ ತಡೆಯೊಡ್ಡಿದ್ದರು.

ಇದನ್ನು ಪ್ರಶ್ನಿಸಿ ಕೊಲ್ಲೂರು ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಅಡಿಗರು ಧಾರ್ಮಿಕ ದತ್ತಿ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರ ಏಕ ಸದಸ್ಯ ಪೀಠ, ಸರಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಧಾರ್ಮಿಕ ದತ್ತಿ ಇಲಾಖೆಯ ನಿರ್ಧಾರ ತಪ್ಪು ಎಂದು ಮಧ್ಯಂತರ ಆದೇಶ ನೀಡಿದ್ದಾರೆ.
ಶ್ರೀಗಳ ಪಾಲ್ಗೊಳ್ಳುವಿಕೆ ವಿಚಾರ ಧಾರ್ಮಿಕ ಪರಿಷತ್ ನಿರ್ಧರಿಸಬೇಕು ಎನ್ನುವ ರಾಮಚಂದ್ರಾಪುರ ಮಠದ ವಕೀಲರ ವಾದವನ್ನು ಪುರಷ್ಕರಿಸಿದ ನ್ಯಾಯಪೀಠ, ಜನ್ಮಾಷ್ಠಮಿಯ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಬೇಕೋ, ಬೇಡವೋ ಎನ್ನುವುದನ್ನು ಪರಿಷತ್ ನಿರ್ಧರಿಸಲಿ ಎಂದು ಪೀಠ ಅಭಿಪ್ರಾಯ ಪಟ್ಟಿದೆ. (ರಾಘವೇಶ್ವರ ಶ್ರೀಗಳು ಖುಲಾಸೆ, ತೀರ್ಪಿನ ಅಂಶ)
ಶ್ರೀ ಗಳನ್ನು ಪದ್ದತಿಯಂತೆ ಕರೆಸಿ ಅವರಿಂದ ನಡೆಸುವ ಪೂಜೆ ಮಾಡುವ ಆಚರಣೆಯನ್ನು ನಿಲ್ಲಿಸುವಂತೆ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಆದೇಶಕ್ಕೆ ಅಬ್ದುಲ್ ನಜೀರ್ ಅವರ ಪೀಠ ತಡೆಯಾಜ್ಞೆ ನೀಡಿದೆ.
ಇದರಿಂದ ಈ ವರ್ಷ ರಾಮಚಂದ್ರಾಪುರ ಮಠದ ಶ್ರೀಗಳನ್ನು ಕರೆಸಿಕೊಳ್ಳುವುದಕ್ಕಿದ್ದ ತೊಡಕು ಒಂದು ಹಂತಕ್ಕೆ ನಿವಾರಣೆಯಾಗಿದೆ.
ಜೂನ್ ಹನ್ನೆರಡರಂದು ನಡೆಯಲಿರುವ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀಗಳು ಭಾಗವಹಿಸುವಿಕೆಯ ಬಗ್ಗೆ ಧಾರ್ಮಿಕ ಪರಿಷತ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.












Click it and Unblock the Notifications