Karntaka rains: ಮೂರು ದಿನದಲ್ಲಿ ಬಿಸಿಲಿಗೆ ಮುಕ್ತಿ, ಮತ್ತೆ ವ್ಯಾಪಕ ಮಳೆ ಎಂದ ಹವಾಮಾನ ಇಲಾಖೆ
ಬೆಂಗಳೂರು, ಮೇ 17: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಾದ್ಯಂತ ಕಂಡು ಬರುತ್ತಿರುವ ಅತ್ಯಧಿಕ ತಾಪಮಾನದ ವಾತಾವರಣಕ್ಕೆ ಮುಂದಿನ ಮೂರು ದಿನಗಳಲ್ಲಿ ಮುಕ್ತಿ ದೊರೆಯಲಿದೆ. ಕಾರಣ ಈ ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ರಾಜ್ಯದಲ್ಲಿ ಕರಾವಳಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆಯ ವಾತಾವರಣವೇ ಮುಂದುವರಿಯಲಿದೆ. ಈ ಪೈಕಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆ ಬರಲಿದೆ. ಅದರಲ್ಲಿ ಆರಂಭಿಕ ಮೂರು ದಿನ (ಮೇ 20ರವರೆಗೆ) ತುಂತುರು ಮಳೆ ಬಂದರೆ ನಂತರ ಎರಡು ದಿನ ಅಂದರೆ ಮೇ 21 ಮತ್ತು 22 ರಂದು ವ್ಯಾಪಕ ಮಳೆ ನಿರೀಕ್ಷೆ ಇದೆ.

ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ವಿಜಯನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ ಅಬ್ಬರಿಸಲಿದೆ.
ಮುಂದುವರಿದ ಒಣಹವೆ: ಕೆಲವೆಡೆ ಗರಿಷ್ಠ ತಾಪಮಾನ
ಇದೇ ಕೆಲವು ಜಿಲ್ಲೆಗಳಲ್ಲಿ ನಾಳೆಯಿಂದ ಮೂರು ದಿನ ಆಗಾಗ ತುಂತುರು ಮಲೆ ಕಾಣಿಸಿಕೊಳ್ಳಲಿದೆ. ಕರಾವಳಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ ಬೆಂಗಳೂರು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಬಿರು ಬಿಸಿಲಿನ ಧಗೆ ಹೆಚ್ಚಾಗಿದೆ. ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ಮತ್ತು ಕೊಪ್ಪಳ್ಳ, ರಾಯಚೂರಿನಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಈ ಪೈಕಿ ಮುಂದಿನ ಮೂರು ದಿನಗಳ ನಂತರ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆರಾಯ ಜೋರು ಅಬ್ಬರಿಸಿ ಧೆಗೆ ತಂಪೆರೆಯಲಿದ್ದಾನೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ರೈತರನ್ನು ಕಾಯಿಸಲಿರುವ ಮುಂಗಾರು
ಈ ಭಾರಿಯ ಮುಂಗಾರು ಮಳೆ ನಿಗದಿಯಂತೆ ಜೂನ್ ಮೊದಲ ವಾರ ಆರಂಭವಾಗಬೇಕು. ಆದರೆ ತುಸು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂನ್ 04ರಂದು ಮುಂಗಾರು ಮಳೆ ಸುರಿಸುವ ಮಾರುತಗಳು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತದನಂತರ ಆ ಮಾರುತಗಳು ಭಾರತ-ಕರ್ನಾಟಕ ಪ್ರವೇಶಿಸಲು ತುಸು ಸಮಯ ಹಿಡಿಯುವುದರಿಂದ ಈ ಬಾರಿ ಮುಂಗಾರು ನಿರೀಕ್ಷೆಯಲ್ಲಿರುವ ರೈತರು ಇನ್ನೂ ಸಲ್ವ ದಿನ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.












Click it and Unblock the Notifications