ಬಿಜೆಪಿಯಲ್ಲಿ ಅಸಮಾಧಾನ; ಯಡಿಯೂರಪ್ಪ ಅವರ ಮಗ ಎಂದು ಈ ಸ್ಥಾನ ಕೊಟ್ಟಿಲ್ಲ: ವಿಜಯೇಂದ್ರ
ಬೆಂಗಳೂರು,ನವೆಂಬರ್ 23: ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ, ಪ್ರಧಾನಿ ಮೋದಿ, ಹಿರಿಯರಾದ ಅಮಿತ್ ಶಾ ಹಾಗೂ ಸಂತೋಷ್ ಅವರು ಸೇರಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಮಗ ಎಂದು ಈ ಸ್ಥಾನ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಈ ಕುರಿತು ಮಾತನಾಡಿದ ಅವರು, ನಗರಕ್ಕೆ ಸೀಮಿತವಾಗಿದ್ದ ನಮ್ಮ ಪಕ್ಷವನ್ನು ಹಳ್ಳಿಹಳ್ಳಿಗೆ ಒಯ್ದವರು ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಸದಾನಂದಗೌಡ, ನಳಿನ್ಕುಮಾರ್ ಕಟೀಲ್ ಮತ್ತಿತರ ಅನೇಕ ಹಿರಿಯರಿದ್ದಾರೆ ಎಂದು ತಿಳಿಸಿದರು. ಹಿರಿಯರ ಪರಿಶ್ರಮದಿಂದ ಬಿಜೆಪಿ ಈ ಎತ್ತರಕ್ಕೆ ಬೆಳೆದುನಿಂತಿದೆ ಎಂದರು.

ಕಾಂಗ್ರೆಸ್ ಪಕ್ಷ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಪಪ್ರಚಾರ ಮಾಡುವ ಮೂಲಕ ರಾಜ್ಯದ ಮತದಾರರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿತು. ಶೇ 40 ಭ್ರಷ್ಟಾಚಾರದ ಆರೋಪ ಮಾಡಿದ್ದರು. ಜನರು ಒಂದು ಕ್ಷಣ ಮೈಮರೆತಿದ್ದರಿಂದ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಅಭಿವೃದ್ಧಿ ಕುಂಠಿತವಾದರೂ ಪರವಾಗಿಲ್ಲ. ಇಂಡಿಯ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಮೋದಿಜೀ ಅವರು ಕ್ರೀಡಾ ಮನೋಭಾವದಿಂದ ವಿಶ್ವಕಪ್ ಕ್ರಿಕೆಟ್ ನೋಡಲು ಬಂದರೆ ಅದು ಅಪಶಕುನ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಸ್ವಾತಂತ್ರ್ಯ ಬಂದು 50-55 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಇತಿಶ್ರೀ ಹಾಡಿದ ನಾಯಕ ರಾಹುಲ್ ಗಾಂಧಿ ಎಂದು ಹೇಳಿದರು.
ರಾಹು ಕಾಲದಲ್ಲಿ ನಾವು ಶುಭಕಾರ್ಯ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ. ರಾಹು ಕಾಲಕ್ಕೂ ರಾಹುಲ್ ಗಾಂಧಿಗೂ ಏನೂ ವ್ಯತ್ಯಾಸ ಇಲ್ಲ. ಅವರು ಅಧ್ಯಕ್ಷರಾದ ಬಳಿಕ ಆ ಪಕ್ಷಕ್ಕೆ ರಾಹು ಕಾಲ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಡೆಯಲು ಯಾವ ದುಷ್ಟ ಶಕ್ತಿಗಳಿಂದಲೂ ಅಸಾಧ್ಯ ಎಂದು ಅವರು ಸವಾಲೆಸೆದರು.

ಹೊಸ ಸರಕಾರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ರೈತರು, ಬಡವರ ಪರವಾಗಿ ಇರಬೇಕಿದ್ದ ಸರಕಾರದ ಬಗೆಗಿನ ನಿರೀಕ್ಷೆಗಳು ಹುಸಿಯಾಗಿದೆ. ಮೋದಿಜೀ ಅವರ ನೇತೃತ್ವದ ಸರಕಾರವು ಕಳೆದ ಸುಮಾರು 10 ವರ್ಷಗಳಲ್ಲಿ ಬಡವರು, ರೈತರು ಸೇರಿ ಎಲ್ಲ ಜನರ ಪರವಾಗಿ ಮಾಡಿದೆ. ಭಾರತವನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂದಕ್ಕೆ ಒಯ್ಯಲು ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಅಧಿಕಾರದ ದರ್ಪದಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 28ಕ್ಕೆ 28 ಸಂಸದರನ್ನು ಕಳಿಸುವ ಮೂಲಕ ಮೋದಿಜೀ ಅವರ ಕೈಯನ್ನು ಬಲಪಡಿಸುತ್ತೇವೆ. ಈ ವಿಷಯದಲ್ಲಿ ಕಾರ್ಯಕರ್ತರಿಗೆ ಕಿಂಚಿತ್ತೂ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶ, ರಾಜ್ಯದ ಇತಿಹಾಸದಲ್ಲಿ ಕೇವಲ ಆರು ತಿಂಗಳಲ್ಲೇ ಜನಪ್ರಿಯತೆಯನ್ನು ಕಳಕೊಂಡ ಸರಕಾರ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕುಂತಲ್ಲಿ, ನಿಂತಲ್ಲಿ ಕೇಂದ್ರವನ್ನು ಟೀಕಿಸುತ್ತಾರೆ. ಬರಗಾಲ ಇದೆ 136 ಶಾಸಕರಿದ್ದರೂ ರಾಜ್ಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಟೀಕಿಸಿದರು.
ಬಿಜೆಪಿ ರೈತರಿಗೆ ನ್ಯಾಯ ಕೊಡಲು ಮುಂದಾಗಿದೆ. ಆದರೆ, ಕಾಂಗ್ರೆಸ್ಸಿಗರು ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ. ನಿಮ್ಮ ಬೋರ್ಡ್ ಚಯರ್ಮ್ಯಾನ್ ತೆಗೆದುಕೊಂಡು ರೈತರಿಗೆ ಏನು ಆಗಬೇಕಿದೆ ಎಂದು ಕಟುವಾಗಿ ಟೀಕಿಸಿದರು. ಸಿಎಂ ಮನೆಯನ್ನು ಹತ್ತಾರು ಕೋಟಿ ವೆಚ್ಚದಲ್ಲಿ ನವೀಕರಣ ಮಾಡುತ್ತಿದ್ದಾರೆ. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಅಲ್ಪಸಂಖ್ಯಾತರು ಬೆಂಕಿ ಹಚ್ಚಿದರೂ ಆ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರರು ಅವರನ್ನು ಸಮಾಧಾನಿಸಲಿಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ದಲಿತ ಶಾಸಕರನ್ನು ಬಲಿ ಕೊಡಲು ಮುಂದಾದರು ಎಂದರು.












Click it and Unblock the Notifications