ಹವಾಮಾನ ಮುನ್ಸೂಚನೆ: ಕರ್ನಾಟಕದ ಕೆಲವೆಡೆ ಮುಂದಿನ 5 ದಿನ ಮಳೆ ನಿರೀಕ್ಷೆ
ಬೆಂಗಳೂರು ಜೂನ್ 8: ಮುಂಗಾರು ಮಾರುತಗಳು ಕೇರಳ ಪ್ರವೇಶಿ ವಾರ ಕಳೆದಿದ್ದರೂ ಇನ್ನೂ ಅಬ್ಬರಿಸಿಲ್ಲ. ಆದರೆ ಮುಂದಿನ ವಾರದಲ್ಲಿ ಮಳೆ ಪ್ರಮಾಣಾ ಎಲ್ಲೆಡೆ ಅಧಿಕವಾಗುವ ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವೆಂಬಂತೆ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿದೆ. ಪರಿಣಾಮ ಜೂ.12 ರವರೆಗೆ ಕರ್ನಾಟದಕ ಕೆಲವೆಡೆ ಹಗುರದಿಂದ ಸಾಧಾರಣ ಹಾಗೂ ಕೆಲವೆಡೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD)ಯ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಕರಾವಳಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಸದ್ಯಕ್ಕೆ ತಮಿಳುನಾಡು ಕರಾವಳಿಯತ್ತ ಆಗಮಿಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಹೀಗಿದ್ದರು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ ಕಳೆದ ಮಂಗಳವಾರದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಉಷ್ಣಾಂಶ ಕಡಿಮೆಯಾಗಿ ತಂಪು ವಾತಾವರಣ ಕಂಡು ಬರುತ್ತಿದೆ. ಇದೇ ವಾತಾವರಣ ಮುಂದಿನ ಐದು ದಿನವು ಮುಂದುವರಿಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮೂರು ದಿನ ಮಳೆ: ಕರಾವಳಿಗೆ ಉತ್ತಮ ಮಳೆ?
ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮುಂದಿನ 48 ಗಂಟೆವರೆಗೆ ಆಗಾಗ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಗಂಟೆಗೆ ಸುಮಾರು 30-40ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಹಿನ್ನೆಲೆಯಲ್ಲಿ ಸಾಧಾರಣ ಮಳೆ ಪರಿಸ್ಥಿತಿ ಶನಿವಾರದವರೆಗೆ ಮುಂದುವರಿಯಲಿದೆ.

ಇದೇ ವೇಳೆ ಉತ್ತರ ಒಳನಾಡಿನ ರಾಯಚೂರು, ಕಲಬುರಗಿ, ಕೊಪ್ಪಳ್ಳ, ಬೀದರ್ನ ಕೆಲವು ಪ್ರದೇಶಗಳಲ್ಲಿ ಒಣ ಹವೆ ಕಂಡು ಬರಲಿದೆ. ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ ಸುರಿಯಲಿದೆ.
ಇನ್ನು ಶನಿವಾರ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮತ್ತು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರುಣನ ಅಬ್ಬರ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ. ಅಂದು ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಮುನ್ಸೂಚನೆ: ಚಿಕ್ಕಮಗಳೂರಿನಲ್ಲಿ ಕಟ್ಟೆಚ್ಚರ
ಬೆಟ್ಟ ಗುಡ್ಡಗಳಿಂದ ಕೂಡಿರುವ ಮಲೆನಾಡಿನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಒಂದು ವೇಳೆ ಮುನ್ಸೂಚನೆಯಂತೆ ಭಾರಿ ಮಳೆ ಸುರಿದು ಪ್ರವಾಹದಂತಹ ಅವಘಡಗಳು ಉಂಟಾದರೆ ಇಲ್ಲವೇ ಬೆಟ್ಟ ಗುಡ್ಡಗಳು, ರಸ್ತೆ ಸೇತುವೆಗಳು ಹಾಗೂ ಕಟ್ಟಡಗಳು ಕುಸಿದರೆ ಆ ಸವಾಲನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಎದುರಾಗಲಿರುವ ಸವಾಲು ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ 47 ಅಪಾಯದ ಸ್ಥಳಗಳನ್ನು ಗುರುತಿಸಿದೆ. ಅಲ್ಲದೇ ಸ್ಯಾಟ್ ಲೈಟ್ ಮೂಲಕ 108 ಪ್ರದೇಶ ಪತ್ತೆ ಮಾಡಿದೆ. 64 ಜೆಸಿಬಿ. 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್ ಗಳನ್ನು ಕಾರ್ಯಾರಣೆಗೆಂದು ಕಾಯ್ದಿರಿಸಿದೆ. ಜಿಪಿಎಸ್ ಮೂಲಕ ಅಪಾಯದ 47 ಸ್ಥಳಗಳನ್ನು ಗುರುತಿಸಿದ್ದರೆ, ಸ್ಯಾಟಲೈಟ್ ಮೂಲಕ 108 ಸ್ಥಳಗಳನ್ನು ಪತ್ತೆ ಮಾಡಿದೆ. 77 ಗ್ರಾಮಗಳನ್ನು ಅಪಾಯದ ಗ್ರಾಮಗಳೆಂದು ಜಿಲ್ಲಾಡಳಿತ ಗುರುತಿಸಿದೆ.
ತುರ್ತು ಸಂದರ್ಭದ ನಿರ್ವಹಣೆಗಾಗಿ 34 ತಂಡ ನಿಯೋಜಿಸಿದೆ. ಇದರಲ್ಲಿ ಹೋಂ ಗಾರ್ಡ್, ಈಜು ತಜ್ಞರು, ಸ್ವಯಂ ಸೇವಕರು ಸೇರಿದಂತೆ ಅಗತ್ಯ ಸಿಬ್ಬಂದಿ ಇರಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.












Click it and Unblock the Notifications