ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮಳೆಯ ಆರ್ಭಟ
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನಲ್ಲಿ ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ಬುಧವಾರ ಸಂಜೆಯಿಂದ ಮತ್ತೆ ಮಳೆ ಸುರಿಯಲು ಆರಂಭಿಸಿದ್ದು ಮತ್ತದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳೆಲ್ಲಾ ನದಿಗಳಾಗಿದ್ದು ವಾಹನಗಳು ಬೋಟ್ ನಂತೆ ನಿಧಾನವಾಗಿ ಚಲಿಸಬೇಕಾಗಿ ಬಂದಿದೆ.
ಶಿವಾನಂದ ಸರ್ಕಲ್, ಕಬ್ಬನ್ ಪಾರ್ಕ್, ವಿಧಾನ ಸೌಧ, ಸಿಲ್ಕ್ ಬೋರ್ಟ್, ಬಿಟಿಎಂ ಲೇಔಟ್, ಜಯನಗರ ಸುತ್ತ ಮುತ್ತ ಭಾರೀ ಮಳೆಯಾಗುತ್ತಿದೆ. ನಗರದ 100 ಅಡಿ ರಸ್ತೆ, ಬನ್ನೇರುಘಟ್ಟ ರಸ್ತೆ, ಬಿಜಿ ರಸ್ತೆಯ ಹುಳಿಮಾವು ಜಂಕ್ಷನ್, ಶಾಹಿ ಗಾರ್ಮೆಂಟ್ಸ್, ಮೇಕ್ರಿ ಸರ್ಕಲ್, ಗುಟ್ಟಹಳ್ಳಿ, ಉದಯ ಟಿವಿ ಜಂಕ್ಷನ್, ಸಿಐಎಲ್ ಕ್ರಾಸ್, ಮಡಿವಾಳ ಮಾರುಕಟ್ಟೆ, ರುಪೇನ ಅಗ್ರಹಾರ, ರೇಸ್ ಕೋರ್ಸ್ ರಸ್ತೆಯಲ್ಲಿ ಚಾಲುಕ್ಯ ವೃತ್ತದ ಬಳಿಯೆಲ್ಲಾ ರಸ್ತೆಯಲ್ಲೇ ನೀರು ನಿಂತಿದ್ದು ವಾಹನ ದಟ್ಟಣೆ ಹೆಚ್ಚಾಗಿದೆ.

ಇನ್ನು ಮಳೆಯಿಂದಾಗಿ ವಿಪ್ರೋ ಜಂಕ್ಷನ್ ಮತ್ತು ಮಹಾರಾಜ ವೃತ್ತದ ನಡುವಿನ ರಸ್ತೆಯನ್ನು ಮುಚ್ಚಲಾಗಿದ್ದು 7ನೇ ಅಡ್ಡ ರಸ್ತೆಯನ್ನು ಪರ್ಯಾಯವಾಗಿ ಬಳಸುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

ಮುಂದಿನ 24 ರಿಂದ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಕರ್ನಾಟಕದಾದ್ಯಂತ ಮಳೆ
ಇನ್ನು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದಾದ್ಯಂತವೂ ಮಳೆ ಸುರಿಯುತ್ತಿದೆ. ತುಮಕೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕೊರಟಗೆರೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಇನ್ನು ಮುಂದಿನ 24 ರಿಂದ 48 ಗಂಟೆಗಳಲ್ಲಿ ಉತ್ತರ ಒಳನಾಡು ಕರ್ನಾಟಕದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications