ಮಳೆ ಅವಾಂತರ: ಬಳ್ಳಾರಿಯಲ್ಲಿ ವ್ಯಕ್ತಿ ಸಾವು, ಕಲಬುರಗಿಯಲ್ಲಿ 17 ಜಾನುವಾರುಗಳು ಸಾವು
ಬೆಂಗಳೂರು ಅಕ್ಟೋಬರ್ 20: ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಮಳೆ ಅಬ್ಬರ ಜೋರಾಗಿದೆ. ನಿನ್ನೆ(ಅಕ್ಟೋಬರ್ 19) ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ
ಮುಂದಿನ ನಾಲ್ಕು ದಿನಗಳ ದಿನಗಳ ಕಾಲ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಅಧಿಕ ಮಳೆಯಾಗಲ್ಲಿದ್ದು, ಇಂದು ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ತುಮಕೂರು, ಚಾಮರಾಜನ ನಗರ, ಕೊಡಗು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಜೆಡಿಎಸ್ ಕಚೇರಿ ಬಳಿ ಮೆಟ್ರೋ ತಡೆಗೋಡೆ ಕುಸಿತ
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ರಾಜಧಾನಿ ನಿವಾಸಿಗಳು ವರುಣ ಆರ್ಭಟಕ್ಕೆ ಹೈರಾಣಾಗಿ ಹೋಗಿದ್ದಾರೆ. ನಿನ್ನೆ (ಅಕ್ಟೋಬರ್ 19) ರಾತ್ರಿ ಭಾರೀ ಮಳೆಯಾಗಿದ್ದು, ಹಲವಾರು ಬಡಾವಣೆಗಳು ಜಲಾವೃತಗೊಂಡಿದೆ. ರಸ್ತೆಗಳು ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಬೆಂಗಳೂರಿನ ಮಂತ್ರಿಮಾಲ್ ಸಮೀಪದ ಜೆಡಿಎಸ್ ಕೇಂದ್ರ ಕಚೇರಿ ಮುಂಭಾಗದ ಮೆಟ್ರೋ ತಡೆಗೋಡೆ ಕುಸಿದಿದೆ. ಮೆಟ್ರೋ ಕಾಂಪೌಂಡ್ ಕುಸಿದು ವಾಹನಗಳ ಮೇಲಿದ್ದು, ಕಾರು, ಬೈಕ್ಗಳು ಸಂಪೂರ್ಣ ಜಖಂಗೊಂಡಿವೆ.

17 ಜಾನುವಾರುಗಳು ಸಾವು, ರೈತ ಕಂಗಾಲು
ಕಲಬುರಗಿ ಜಿಲ್ಲೆಯಲ್ಲಿ ನಿನ್ನೆ (ಅಕ್ಟೋಬರ್ 19) ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಕಲಬುರಗಿ ಜನತೆ ತತ್ತರಿಸಿದ್ದು, ಸಿಡಿಲು ಬಡಿದು ದೊಡ್ಡ ಅನಾಹುತ ಸಂಭವಿಸಿದೆ. ಕಲಬುರಗಿ ಜಿಲ್ಲೆಯ, ಕಾಳಗಿ ತಾಲೂಕಿನ ಲಕ್ಷ್ಮಣ ತಾಂಡದ ಬಳಿ ಸಿಡಿಲು ಬಡಿದು ಒಟ್ಟು 17 ಜಾನುವಾರುಗಳು ಸಾವನ್ನಪ್ಪಿವೆ. ಭಾರಿ ಮಳೆಗೆ ಮರದ ಕೆಳಗೆ ನಿಂತಿದ್ದ 16 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನು ಮದಗುಣಕಿ ಗ್ರಾಮದ ಹಸು ಸಿಡಿಲು ಬಡಿದು ಸಾವನ್ನಪ್ಪಿದ್ದು, ಹೈನುಗಾರಿಕೆಯನ್ನು ನಂಬಿಕೊಂಡಿದ್ದ ರೈತರು ಕಂಗಾಲಾಗಿದ್ದಾರೆ.

ಹಳ್ಳದಲ್ಲಿ ಸಿಲುಕಿದ್ದ ಬಸ್ ಪ್ರಯಾಣಿಕರ ರಕ್ಷಣೆ
ತುಮಕೂರಿನಲ್ಲೂ ನಿನ್ನೆ (ಅಕ್ಟೋಬರ್ 19) ಭಾರಿ ಮಳೆಯಾಗಿದೆ. ತುಮಕೂರಿನಲ್ಲಿ ಈ ವರ್ಷ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ನಿನ್ನೆ ಸುರಿದ ಅಧಿಕ ಮಳೆಗೆ ಕೆರೆ ಹಳ್ಳ-ಕೊಳ್ಳಗಳು ಏಕಾಏಕಿ ತುಂಬಿ ಹರಿದಿದ್ದು, ಆಂಧ್ರ ಪ್ರದೇಶದ ಹಿಂದೂಪುರಕ್ಕೆ ತೆರಳುತ್ತಿದ್ದ ಬಸ್ ಪಾವಗಡ ತಾಲೂಕಿನ ವೆಂಕಟಾಪುರ ಹಳ್ಳದಲ್ಲಿ ಸಿಲುಕಿಕೊಂಡಿದೆ. ಕೂಡಲೇ ಸ್ಥಳೀಯರು ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದು, ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಇನ್ನು ಪಾವಗಡ ತಾಲೂಕಿನ ಹನುಮಯ್ಯ ಪಾಳ್ಯದಲ್ಲಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಭಾರಿ ಮಳೆಗೆ ಬಳ್ಳಾರಿ ಹೈರಾಣು
ಬಳ್ಳಾರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸಂಡೂರು ಪಟ್ಟಣದ ಒಂದೇ ವಾರ್ಡ್ನಲ್ಲಿ ಮಳೆಯಿಂದ ಮನೆಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಯ ಗೋಡೆ ಪಕ್ಕ ಮಲಗಿದ್ದ ಸೋಮಶೇಖರ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಣಿ ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರಿದಿದೆ.
ಇನ್ನು ಉತ್ತರ ಕನ್ನಡ, ಹಾಸನ, ಮೈಸೂರು, ಮಂಡ್ಯ, ಚಾಮರಾಜ ನಗರ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಮಳೆಯ ಅವಾಂತರಗಳಿಂದ ಜನ ತತ್ತರಿಸಿ ಹೋಗಿದ್ದಾರೆ.












Click it and Unblock the Notifications