Heavy Rain: ಕೇರಳದಲ್ಲಿ ಭಾರಿ ಮಳೆ ಮುನ್ಸೂಚನೆ, ಕಾವೇರಿ ನೀರಿನ ಸಮಸ್ಯೆ ಬಗೆಹರಿಯುತ್ತಾ?
ಕಾವೇರಿ ನದಿ ನೀರಿನ ವಿಚಾರಕ್ಕೆ ಕನ್ನಡಿಗರು ರೊಚ್ಚಿಗೆದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೇ ಕೋಪಕ್ಕೆ ಇಂದು ಕರ್ನಾಟಕವೇ ಬಂದ್ ಆಗಿದೆ. ಆದರೆ ಈ ಸಂದರ್ಭದಲ್ಲಿ ಕಾವೇರಿ ಕೊಳ್ಳದಲ್ಲಿ ಹೊಸ ಭರವಸೆ ಮೂಡಿದೆ. ಏನೆಂದರೆ ಕಾವೇರಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ಕೇರಳದಲ್ಲಿ ಸಿಕ್ಕಾಪಟ್ಟೆ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಕನ್ನಡ ನಾಡಿನ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತಾ?
ನೋಡ ನೋಡುತ್ತಲೇ ಮೋಡ ಮರೆಯಾಗಿ, ಗಿರಿ ಶಿಖರಗಳ ನಾಡು ಹಾಗೂ ಕಾವೇರಿ ತಾಯಿ ತವರು ಕೊಡಗಿನಲ್ಲೂ ಸಾಕಷ್ಟು ಮಳೆ ಕೊರತೆ ಎದುರಾಗಿ ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಿದೆ. ಹೀಗೆ ರಾಜ್ಯದ ಹಳೇ ಮೈಸೂರು ಭಾಗದ ರೈತರು ಆಕಾಶ ನೋಡುತ್ತಾ ಕೂರುವಂತಾಗಿದೆ. ಆದರೆ ಈ ವೇಳೆ ಮಳೆರಾಯ ಒಂದಷ್ಟು ಕರುಣೆ ತೋರಿಸಿದ್ದು ಕೇರಳ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಹಾಗಾದರೆ ಕಾವೇರಿ ನದಿಗೂ ಭಾರಿ ನೀರು ಹರಿದು ಬರುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾವೇರಿ ನದಿಗೆ ನೀರು ಬರುತ್ತಾ?
ಅಂದಹಾಗೆ ಈಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕೇರಳದ ಇಡುಕ್ಕಿ, ಎರ್ನಾಕುಲಂ, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು, ತ್ರಿಶೂರ್ ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆಯಂತೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಿದೆ ಹವಾಮಾನ ಇಲಾಖೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, 6 ರಿಂದ 11 ಸೆಂ.ಮೀ ಮಳೆಯಾಗುವ ನಿರೀಕ್ಷೆ ಕೂಡ ಇದೆ. ಹೀಗೆ ಕಾವೇರಿ ನದಿಗೂ ಭಾರಿ ಪ್ರಮಾಣದ ನೀರು ಬರುತ್ತಾ? ಎಂಬ ಆಸೆ ಕೂಡ ಚಿಗುರಿದೆ.
ಎಲ್ಲಿ ಹೋದವು ಮಳೆ ಮೋಡಗಳು?
ಅಷ್ಟಕ್ಕೂ ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕೇರಳದ ಇಡುಕ್ಕಿ, ಎರ್ನಾಕುಲಂ, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮಾತ್ರ ಭಾರಿ ಮಳೆ ಬೀಳುವ ಸೂಚನೆ ಇದೆ. ಆದರೆ ವಯನಾಡು ಭಾಗದಲ್ಲಿ ಮಳೆ ಬಿದ್ದರೆ ಮಾತ್ರ ಕಾವೇರಿ ನದಿಗೆ ನೇರವಾಗಿ ಭಾರಿ ಪ್ರಮಾಣದ ನೀರು ಬರಲಿದೆ. ಈವರೆಗೂ ಕಾವೇರಿ ನದಿಗೆ ನೀರು ಹರಿದುಬರುವ ಕೇರಳದ ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ವಯನಾಡು ಭಾಗದಲ್ಲಿ ಮಳೆ ಬೀಳಲಿ ಅಂತಾ ರೈತ ಸಮುದಾಯ ಈಗ ಬೇಡಿಕೊಳ್ಳುವಂತಾಗಿದೆ. ಇನ್ನು ಈಗಿನ ಪರಿಸ್ಥಿತಿ ನೋಡಿದರೆ ಒಂದು ಲೆಕ್ಕಕ್ಕೆ ವಯನಾಡು ಭಾಗದಲ್ಲಿ ಕೂಡ ಮಳೆ ಬೀಳಬಹುದು ಎನ್ನಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಲ್ಲಿ ಕೂಡ ಮಳೆ ಆರ್ಭಟ ತೋರುವ ನಿರೀಕ್ಷೆ ಇದೆ. ಸದ್ಯಕ್ಕೆ ಮಾತ್ರ ವಯನಾಡು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ.
ಕುಡಿಯುವ ನೀರಿಗೂ ಮುಂದೆ ಪರದಾಟ?
ಕಾವೇರಿ ಕೊಳ್ಳದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕುಡಿಯುವ ನೀರಿಗು ಕೂಡ ಕಷ್ಟವಾಗುವ ಮುನ್ಸೂಚನೆ ಎದುರಾಗಿದೆ. ಈಗ ಸರಿಯಾಗಿ ಮಳೆ ಬರದಿದ್ರೆ ಬೇಸಿಗೆ ಹೊತ್ತಿಗೆ ರಾಜ್ಯದಲ್ಲಿ ನೀರಿಗೆ ಕೊರತೆ ಪಕ್ಕಾ. ಇದೇ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವೂ ನೀರಿನ ವಿಚಾರ ಮುಂದಿಟ್ಟುಕೊಂಡು, ನೀರು ಬಿಡಿ ಅಂತಾ ಟಾರ್ಚರ್ ಮಾಡುತ್ತಿದೆ. ಹೀಗಾಗಿ ಇಂದು ಕರ್ನಾಟಕ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಪ್ರಕೃತಿ ಮಾತೆ ಕನ್ನಡಿಗರಿಗೆ ರಿಲೀಫ್ ನೀಡುವ ನಿರೀಕ್ಷೆ ಇತ್ತು. ಆದರೆ ಈವರೆಗೂ ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿಲ್ಲ.
ಒಟ್ನಲ್ಲಿ ಈಗ ಮಳೆ ಬೀಳಲೇಬೇಕಿದೆ ಈಗ ಬೀಳದಿದ್ದರೂ ಮುಂಬರುವ ದಿನಗಳಲ್ಲಿ ಪ್ರಕೃತಿ ಕರುಣೆ ತೋರಬೇಕಿದೆ. ಇದು ಸಾಧ್ಯವಾಗದೇ ಇದ್ದರೆ ಮುಂದಿನ ಬೇಸಿಗೆ ಹೊತ್ತಿಗೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಬರದ ಬಿಸಿ ಎದುರಾಗಲಿದೆ. ಕೃಷಿ ಬಿಡಿ ಕನಿಷ್ಠ ಕುಡಿಯುವ ನೀರಿಗೆ ಕೂಡ ಪರದಾಡುವ ವಾತಾವರಣ ನಿರ್ಮಾಣವಾಗಲಿದೆ. ಹೀಗಾಗಿ ಮುಂಗಾರು ಕೈಕೊಟ್ಟು ಹೋದರೂ ಹಿಂಗಾರು ಮಳೆ ಕೈಹಿಡಿಯುವ ನಿರೀಕ್ಷೆ ಇದೆ. ಈ ನಿರೀಕ್ಷೆ ಹುಸಿಯಾದರೂ, ಸೈಕ್ಲೋನ್ ಮತ್ತಿತರ ಹವಾಮಾನ ವೈಪರಿತ್ಯ ರಾಜ್ಯಕ್ಕೆ ಆಸರೆಯಾದರೂ ಅಚ್ಚರಿ ಇಲ್ಲ.












Click it and Unblock the Notifications