ಮುಂಗಾರು ಆರ್ಭಟ: ರಾಜ್ಯದ ಈ ಭಾಗದಲ್ಲಿ ಇಂದಿನಿಂದ 4 ದಿನಗಳ ಕಾಲ ವರುಣನ ರೌದ್ರಾವತಾರ ಕಂಟಿನ್ಯೂ
ಕರ್ನಾಟಕ, ಜುಲೈ, 09: ರಾಜ್ಯದಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು, ನದಿಗಳ ಮತ್ತು ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಲೇ. ಅದರಲ್ಲೂ ದಕ್ಷಿಣ ಕನ್ನಡ ಭಾಗದಲ್ಲಂತೂ ಮಳೆರಾಯ ರೌದ್ರಾವತಾರ ತಾಳಿದ್ದಾನೆ. ಹಾಗೆಯೇ ಇಂದಿನಿಂದ 4 ದಿನಗಳವರೆಗೂ ರಾಜ್ಯದ ಹಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯ ರಾಜಧಾನಿ ಇಂದು ಮೋಡ ಕವಿದ ವಾತಾವರಣ ಇದ್ದು, ಆಗಾಗ ನಗರದಲ್ಲಿ ಜಿನುಗು ಮಳೆ ಬೀಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೇ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಜುಲೈ 13ರವರೆಗೂ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಈ ಭಾಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಅನ್ನು ಸಹ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಉತ್ತರ ಒಳನಾಡಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಶನಿವಾರ (ಜುಲೈ 08) ಕೊಲ್ಲೂರು, ಕುಮಟಾ, ಗೇರುಸೊಪ್ಪ, ಕ್ಯಾಸಲ್ ರಾಕ್, ಕೊಟ್ಟಿಗೆಹಾರ, ಹೊನ್ನಾವರ, ಶಿರಾಲಿ, ಗೋಕರ್ಣ, ಮಂಕಿ, ಬೆಳ್ತಂಗಡಿ, ಸುಬ್ರಹ್ಮಣ್ಯ, ಮಂಗಳೂರು, ಅಂಕೋಲಾ, ಭಾಗಮಂಡಲ ಸೇರಿ ಹಲವೆಡೆ ಭಾರೀ ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಲ್ಲೆಲ್ಲಿ ಮಳೆ ಆರ್ಭಟ?
ಹಾಗೆಯೇ ಮಂಗಳೂರು, ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ, ಸುಳ್ಯ, ಕದ್ರಾ, ಕಮ್ಮರಡಿ, ಲಿಂಗನಮಕ್ಕಿ, ಲೋಂಡಾ, ಮಂಚಿಕೆರೆ,ಕಿರವತ್ತಿ, ಸಕಲೇಶಪುರ, ತಾಳಗುಪ್ಪ, ಕಳಸ, ನಾಪೋಕ್ಲು, ಪುನ್ನಂಪೇಟೆ, ಯಲ್ಲಾಪುರ, ಹಳಿಯಾಳ, ಬನವಾಸಿ, ಕಾರವಾರ, ಕುಂದಾಪುರ, ಬೆಳಗಾವಿ, ಕೊಪ್ಪ, ಜಯಪುರ, ಶೃಂಗೇರಿ, ಬಾಳೆಹೊನ್ನೂರು ಭಾಗದಲ್ಲಿ ಇಂದಿನಿಂದ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಗೆ ಸಂದೇಶವನ್ನು ರವಾನಿಸಿದೆ.
ಇನ್ನು ಎನ್.ಆರ್. ಪುರ, ನಿಪ್ಪಾಣಿ, ಲಿಂಗಸುಗೂರು, ಹೊಸಕೋಟೆ, ಹರಪನಹಳ್ಳಿ, ಬೇಲೂರು, ಬಂಡೀಪುರ, ಸರಗೂರು, ಚಿಂತಾಮಣಿಯಲ್ಲೂ ಅಬ್ಬರದ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ರವಾನಿಸಿದೆ.
ದಾಖಲಾದ ತಾಪಮಾನದ ವಿವರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಲ್ಲಿ ಕೂಡ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ನೀಡಿದೆ. ಇನ್ನು ನಿನ್ನೆ ಎಚ್ಎಎಲ್ನಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹಾಗೂ ಕೆಐಎಎಲ್ನಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು ಆಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆದಿದ್ದು, ಇಲ್ಲಿನ ಜನಜೀವನ ಅಸ್ತವ್ಯವಸ್ಥವಾಗಿದೆ. ಹಾಗೆಯೇ ಇಲ್ಲಿ ಇಂದಿನಿಂದ ಇನ್ನೂ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಈ ಭಾಗದಲ್ಲಿನ ಜನರು ಜೀವವವನ್ನು ಕೈಯಲ್ಲಿ ಹಿಡಿದುಕೊಂಡು ಜೀವನವನ್ನು ಸಾಗಿದುವಂತಹ ವಾತಾವರಣ ನಿರ್ಮಾಣ ಆಗಿದೆ.












Click it and Unblock the Notifications