Karnataka Rains: ಚಂಡಮಾರುತ ಪ್ರಸರಣ, ಮೂರು ದಿನ 7 ಜಿಲ್ಲೆಗಳಿಗೆ ಭಾರೀ ಮಳೆ! ಶಾಲೆಗಳಿಗೆ ರಜೆ ನಿರೀಕ್ಷೆ..
ಬೆಂಗಳೂರು, ಜುಲೈ 28: ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಇದೀಗ ಬದಲಾದ ಹವಾಮಾನ ವೈಪರೀತ್ಯಗಳು, ಚಂಡಮಾರುತ ಪ್ರಸರಣದಿಂದಾಗಿ ದಿನವೀಡಿ ಮಳೆ ಆಗುತ್ತಿದೆ. ಕೆಲವೆಡೆ ಭರ್ಜರಿ ಮಳೆ ಮುನ್ಸೂಚನೆ ಇದೆ. ಮುಂದಿನ 03 ರಿಂದ 05 ದಿಂದ ವಿವಿಧ ಜಿಲ್ಲೆಗಳಿಗೆ ಜೋರು ಬಿರುಗಾಳಿ ಸಹಿತ ಭಾರೀಯಿಂದ ಅತ್ಯಧಿಕ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದಿರುವ ಹವಾಮಾನ ಇಲಾಖೆಯು 'ಆರೆಂಜ್ ಅಲರ್ಟ್' ಮತ್ತು ಯೆಲ್ಲೋ ಅಲರ್ಟ್' ಘೋಷಿಸಿದೆ. ಹವಾಮಾನ ತಜ್ಞರ ಪ್ರಕಾರ, ಚಂಡಮಾರುತ ಪ್ರಸರಣ ಕಾರಣದಿಂದ ಮುಂಗಾರು ಮಳೆ ಆರ್ಭಟಿಸುತ್ತಿದೆ.
ಮುಂಗಾರು ಆರಂಭವಾದಾಗಿನಿಂದ ರಾಜ್ಯದ ಮಲೆನಾಡಿನಲ್ಲಿ ನದಿಗಳು, ಹಳ್ಳಗಳು, ಕರೆಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತಗೊಂಡಿದ್ದು, ಈ ಭಾಗದ ಜನರ ಸ್ಥಿತಿ ಅಕ್ಷರಶಃ ನಲುಗಿದೆ. ಬಿಟ್ಟು ಬಿಡದೇ ಮಳೆ ಆಗುತ್ತಿದೆ. ಭಾಗಮಂಗಲ, ತಲಕಾವೇರಿ ಸೇರಿದಂತೆ ಮಡಿಕೇರಿ, ಕೊಡಗು ಭಾಗದಲ್ಲಿ ವ್ಯಾಪಕ ಮಳೆ ಮುಂದುವರಿದಿದೆ. ಸಮುದ್ರ ಮೇಲ್ಮೈನಲ್ಲಿ ಎದ್ದ ಸ್ಟ್ರಫ್ ಕಾರಣದಿಂದ ಭಾರೀ ಮಳೆ ಆಗುತ್ತಿದೆ. ಮುಂದಿನ ಮೂರು ದಿನ ಏಳು ಜಿಲ್ಲೆಗಳಿಗೆ ಭಾರೀ ಮಳೆ ನಿರೀಕ್ಷೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸುವ ನಿರೀಕ್ಷೆ ಇದೆ.

ಭಾರೀ ಅಬ್ಬರ: 3 ದಿನ ಆರೇಂಜ್ ಅಲರ್ಟ್
ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಭಾರೀ ಮಳೆ ಆಗಲಿದ್ದು, 30ರವರೆಗೆ ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ನಂತರ ಕೊಂಚ ಮಳೆ ಪ್ರಭಾವ ತಗ್ಗಲಿದ್ದು, ಎರಡು ದಿನ ಅಂದರೆ ಆಗಸ್ಟ್ 01ರವರೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಇಂದು ಮತ್ತು ನಾಳೆ ಎರಡು ದಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರಣಭೀಕರ ಮಳೆ ಮುಂದುವರಿಯಲಿದೆ. ಗಾಳಿ ಪ್ರಯಾಣ ಜೋರಾಗಿರಲಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಸೋಮವಾರದ IMD ಕರ್ನಾಟಕ ಕೇಂದ್ರ ಮುನ್ಸೂಚನೆ ಕೊಟ್ಟಿದೆ.
ಈ ವಾತಾವರಣಕ್ಕೆ ಆರೋಗ್ಯದಲ್ಲಿ ಏರುಪೇರು
ಹಲವು ದಿನಗಳಿಂದ ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆ ಇಲ್ಲದಿದ್ದರೂ ಸಹಿತ ಜಿಟಿ ಜಿಟಿ ಮಳೆ ಮುಂದುವರಿದಿದೆ. ದಿನಪೂರ್ತಿ ಮಬ್ಬು ವಾತಾವರಣ ಉಂಟಾಗಿದೆ. ಬಿಸಿಲಿನ ದರ್ಶನವೇ ಇಲ್ಲದಾಗಿದೆ. ಇದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಜ್ವರ, ಕೆಮ್ಮು, ನೆಗಡಿ ಆರೋಗ್ಯ ಏರುಪೇರು ಕಂಡು ಬರುತ್ತಿದೆ. ವೃದ್ಧರಿಗೆ, ಗರ್ಭಿಣಿಯರಿಗೆ, ಮಕ್ಕಳ ಆರೋಗ್ಯ ಈ ವಾತಾವರಣದಿಂದ ಹದಗೆಡುತ್ತಿದೆ.
ಒಳನಾಡು ಭಾಗದಲ್ಲಿ ಭಾರೀ ಚಳಿ, ಜಡಿಮಳೆ
ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಚಿತ್ರದುರ್ಗದಲ್ಲಿ ಆಗಾಗ ಹಗುರದಿಂದ ಸಾಧಾರಣ ಮಳೆ ದಾಖಲಾಗಿದೆ. ಬೆಂಗಳೂರು ಸೇರಿದಂತೆ ಒಳನಾಡು ಜಿಲ್ಲೆಗಳು, ಉತ್ತರ ಕರ್ನಾಟಕದ ಭಾಗಗಳಲ್ಲಿ ಚಳಿ ಮುಂದುವರಿದಿದೆ.
ಅರಬ್ಬಿ ಸಮುದ್ರ ಹಾಗೂ ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ಚಂಡಮಾರುತ ಪ್ರಸರಣ ಮುಂದುವರಿದಿದೆ. ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಸ್ಟ್ರಫ್ ಸೃಷ್ಟಿಯಾಗಿದ್ದು, ಗಾಳಿ ಬೀಸುವಿಕೆ ಜೋರಾಗಿದೆ. ಹೀಗಾಗಿ ರಾಜ್ಯದ ನಾನಾ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯ ವಾತಾವರಣ ಕಂಡು ಬಂದಿದೆ. ಇನ್ನು ಕೆಲವು ದಿನಗಳ ಕಾಲ ಇದೇ ರೀತಿಯ ಚಳಿ, ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications