Karnataka Rains: ವಾಯುಭಾರ ಕುಸಿತ: ಎಲ್ಲ ಜಿಲ್ಲೆಗಳಿಗೆ 28ರವರೆಗೆ ಭಾರೀ ಮಳೆ, 'ರೆಡ್ ಅಲರ್ಟ್' ಮುನ್ಸೂಚನೆ
ಬೆಂಗಳೂರು, ಮೇ 24: ನೈಋತ್ಯ ಮಾನ್ಸೂನ್ 2025 ಭಾರತ ಪ್ರವೇಶಿಸುವ ಹೊತ್ತಿನಲ್ಲಿ ಕರ್ನಾಟಕದಾದ್ಯಂತ ಬಿಟ್ಟು ಬಿಡದೇ ಮಳೆ ಆವರಿಸಲಿದೆ. ಮುಂದಿನ ಐದು ದಿನ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ, ಭಾರೀ ಹಾಗೂ ಅತ್ಯಧಿಕ ಭಾರೀ ಮಳೆ ಆಗುವ ಲಕ್ಷಣಗಳು ಇವೆ. ಸಮುದ್ರ ಮೈಲ್ಮೈನಲ್ಲಿ ವಾಯುಭಾರ ಕುಸಿತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದ್ದು. ಇದರ ಪರಿಣಾಮವಾಗಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಆಗಲಿದೆ. ಕೆಲ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ.
ರಾಜ್ಯದಲ್ಲಿ ಇಂದು ಗರಿಷ್ಠ ಮಳೆ ಉತ್ತರ ಕನ್ನಡದ ಕ್ಯಾಸಲ್ ರಾಕ್ನಲ್ಲಿ 160 ಮಿಲಿ ಮೀಟರ್ ಆಗಿದೆ. ಕೊಡಗಿನ ಬಾಗಮಂಡಲದಲ್ಲಿ 100 ಮಿ.ಮೀ, ಲೋಂಡಾದಲ್ಲಿ 60 ಮಿಲಿ ಮೀಟರ್ ಮಳೆ ಆಗಿದೆ. ಇವತ್ತಿನಗಿಂತಲೂ ಹೆಚ್ಚಿನ ಮಳೆ ಮುಂದಿನ ಮೇ 28ರವರೆಗೆ ಆಗಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಹವಾಮಾನತಜ್ಞ, ವಿಜ್ಞಾನಿ ಡಾ.ಸಿ.ಎಸ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ವಾಯುಭಾರ ಕುಸಿತ, ವೈಪರಿತ್ಯಗಳ ಪ್ರಭಾವ
ಹವಾಮಾನ ವೈಪರೀತ್ಯವು ಪೂರ್ವ ಅರಬ್ಬಿ ಸಮುದ್ರದ ಗೋವಾ ಹಾಗೂ ಕೊಂಕಣ ಕರಾವಳಿ ಹತ್ತಿರದಲ್ಲಿ ಉಂಟಾಗಿದೆ. ಇಲ್ಲಿ ಸ್ಪಷ್ಟ ವಾಯುಭಾರ ಕುಸಿತ ನಿರ್ಮಾಣವಾಗಿದೆ. ಇದರೊಂದಿಗೆ ಚಂಡಮಾರುತ ಪ್ರಸರಣ ಇದ್ದು, ಅದ ಸಮುದ್ರ ಮೇಲ್ಮೈಗಿಂತ 5.8 ಕಿಲೋ ಮೀಟರ್ ಎತ್ತರದಲ್ಲಿದೆ. ಈ ವೈಪರೀತ್ಯವು ತನ್ನ ಮೂಲ ಸ್ಥಳದಿಂದ ಉತ್ತರ ಭಾಗಕ್ಕೆ ಚಲಿಸಲಿದೆ. ಈ ಹವಾಮಾನ ಬದಲಾವಣೆಯ ಪರಿಣಾಮವಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮೇ 28ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಅವರು ಮುನ್ಸೂಚನೆ ನೀಡಿದರು.
ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚು ಸಹತಿ ಭಾರೀ ಹಾಗೂ ಅತೀ ಭಾರಿ ಮಳೆ ಆಗಲಿದೆ. ಒಂದೆರಡು ಕಡೆ ಅತ್ಯಂತ ಭಾರೀ ಮಳೆ ಆಗುವ ಕಾರಣಕ್ಕೆ ಈ ಜಿಲ್ಲೆಗಳಿಗೆ ಇಂದಿನಿಂದ ಮೇ 27ರವರೆಗೆ 'ರೆಡ್ ಅಲರ್ಟ್' ಅಲರ್ಟ್ ನೀಡಲಾಗಿದೆ.

ಇನ್ನೂ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಸಹ ಭಾರಿ ಮಳೆ ಆಗಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಮೇ 27 ರವರೆಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಇನ್ನುಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗುವ ಲಕ್ಷಣ ಇದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಮೇ 28 ರವರೆಗೆ ಮಳೆ ಹಗುರದಿಂದ ಸಾಧಾರಣವಾಗಿ, ಕೆಲವೆಡೆ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಇಲ್ಲಿ ಗರಿಷ್ಠ ಗಾಳಿಯು ಪ್ರತಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ನಷ್ಟು ವೇಗದಲ್ಲಿ ಬೀಸಲಿದೆ. ಇಂದು ಸಹ ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.












Click it and Unblock the Notifications