ಬಂಧನ ಭೀತಿ: ಡಿ.ಕೆ.ಶಿವಕುಮಾರ್ ಮನೆಯಲ್ಲಿ ಬಿರುಸಿನ ಚಟುವಟಿಕೆ
ಬೆಂಗಳೂರು, ಸೆಪ್ಟೆಂಬರ್ 08: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಮನೆಯಲ್ಲೇ ಬೀಡುಬಿಟ್ಟಿದ್ದು, ಮನೆಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಕೆಲವು ಹೊತ್ತಿನ ಮುಂಚೆಯಷ್ಟೆ ಡಿಕೆ ಶಿವಕುಮಾರ್ ಒಡೆತನದ ಶೋಭಾ ಡೆವೆಲಪರ್ಸ್ ರಿಯಲ್ ಎಸ್ಟೇಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಅಷ್ಟೆ ಅಲ್ಲದೆ ಡಿ.ಕೆ.ಶಿವಕುಮಾರ್ ಅವರ ಆಪ್ತರು, ಲೆಕ್ಕಪರಿಶೋಧಕರು ಮತ್ತು ವಕೀಲರು ಸಹ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲೇ ಬೀಡು ಬಿಟ್ಟಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳುವ ಎಲ್ಲ ಸಾಧ್ಯತೆಗಳ ಬಗ್ಗೆಯೂ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಚರ್ಚೆ ನಡೆಯುತ್ತಿದೆ.

ಜಾಮೀನು ತೆಗೆದುಕೊಳ್ಳಲು ಚರ್ಚೆ
ಒಂದು ವೇಳೆ ಬಂಧನವಾದರೆ ಯಾವ ಅಂಶದ ಮೇಲೆ ಜಾಮೀನು ತೆಗೆದುಕೊಳ್ಳಬೇಕು. ಜಾಮೀನು ತೆಗೆದುಕೊಳ್ಳಲು ನೀಡಬೇಕಾದ ಲೆಕ್ಕಪತ್ರಗಳನ್ನು ತಯಾರಿ ಮಾಡಿಟ್ಟುಕೊಳ್ಳುವುದು ಇದೇ ಮುಂತಾದ ಕಾರ್ಯಗಳು ಡಿಕೆಶಿ ಅವರ ಮನೆಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ.

ದೇವರ ಮೊರೆ ಹೋದ ಕುಟುಂಬ ಸದಸ್ಯರು
ಈ ನಡುವೆ ಮೂಲವೊಂದರ ಪ್ರಕಾರ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಅವರು ಬಂದಿರುವ ಕಂಟಕ ನಿವಾರಣೆ ಆಗಲೆಂದು ವಿಘ್ನ ವಿನಾಶಕನ ಮೊರೆ ಸಹ ಹೋಗಿದ್ದಾರೆ. ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಅವರ ಮನೆಯ ಸಮೀಪದಲ್ಲಿರುವ ಗಣೇಶ ದೇವಾಲಯಕ್ಕೆ ಭೇಟಿ ನೀಡಿರುವ ಉಷಾ ಅವರು ಗರಿಕೆ, ಕಡಲೆ ಹಾರವನ್ನು ಗಣೇಶನಿಗೆ ಸಮರ್ಪಿಸಿದ್ದಾರೆ ಎನ್ನಲಾಗಿದೆ.

ಅಣ್ಣನ ಜೊತೆ ಇದ್ದಾರೆ ಡಿ.ಕೆ.ಸುರೇಶ್
ಸಂಸದ ಡಿ.ಕೆ.ಸುರೇಶ್ ಕೂಡ ಅಣ್ಣನವರ ಜೊತೆಯಲ್ಲೇ ಇದ್ದು, ಅವರಿಗೂ ಬಂಧನದ ಭೀತಿ ಇದೆ ಎನ್ನಲಾಗುತ್ತಿದೆ. ಸೋಮವಾರ ನಗರಕ್ಕೆ ಬರುತ್ತಿರುವ ಇಡಿ ಅಧಿಕಾರಿಗಳು ಮೊದಲಿಗೆ ವಿಚಾರಣೆ ನಡೆಸಿ ಸಮಪರ್ಕ ಎನಿಸದ ಉತ್ತರಗಳು ಬಂದರೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಿದ್ದಾರೆ.

ಬಿಜೆಪಿಯಿಂದ ಕಾದು ನೋಡುವ ತಂತ್ರ
ಡಿ.ಕೆ.ಶಿವಕುಮಾರ್ ಅವರ ಬಂಧನದ ಸುದ್ದಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು. ಈಗಾಗಲೆ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಬಿಜೆಪಿಯು ಕಾದು ನೋಡುವ ತಂತ್ರ ಅನುಸರಿಸುತ್ತೇವೆ ಎಂದು ಹೇಳುತ್ತಿದ್ದರೆ. ಕಾಂಗ್ರೆಸ್ ಪಕ್ಷವು ಬಿಜೆಪಿಯ ಮೇಲೆ ಆರೋಪಗಳ ಸುರಿಮಳೆ ಮಾಡುತ್ತಿದೆ. ಇನ್ನು ಜೆಡಿಎಸ್ ಪಕ್ಷವು ಎಚ್ಚರಿಕೆಯ ಹೆಜ್ಜೆಯನ್ನಿಡುವ ತಂತ್ರಕ್ಕೆ ಮೊರೆ ಹೋಗಿದೆ.











Click it and Unblock the Notifications