ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್ಡಿಕೆ
ಹಾಸನ, ಸೆಪ್ಟೆಂಬರ್ 20: ಯಡಿಯೂರಪ್ಪ- ಕುಮಾರಸ್ವಾಮಿ ವಿರುದ್ಧ ಮಾತಿನ ಚಕಮಕಿ ಮಿತಿಮೀರಿ ನಡೆಯುತ್ತಿದ್ದು, ಸರ್ಕಾರಕ್ಕೆ ತೊಂದರೆ ಕೊಟ್ಟರೆ ಯಡಿಯೂರಪ್ಪ ವಿರುದ್ಧ ರಾಜ್ಯದ ಜನ ದಂಗೆ ಏಳುವಂತೆ ಕರೆ ಕೊಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಇಂದು ಮಧ್ಯಾಹ್ನ ಕುಮಾರಸ್ವಾಮಿ ಅವರು ಈ ಹೇಳಿಕೆಯನ್ನು ಮಾಧ್ಯಮದವರ ಮುಂದೆ ನೀಡಿದರು, ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಯಡಿಯೂರಪ್ಪ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಬಿಜೆಪಿ ಶಾಸಕರೊಂದಿಗೆ ಜಟಾಪಟಿ ಸಹ ನಡೆಸಿದ್ದಾರೆ.
ಬಿಎಸ್ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿ
ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮಾಡಿದರೆ ನಾವು ಕೈಕಟ್ಟಿ ಕೂರುವುದಿಲ್ಲ, ತಕ್ಕ ಶಾಸ್ತಿ ಮಾಡುತ್ತೇವೆ, ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾನೇ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಎಚ್ಡಿಕೆ-ಬಿಎಸ್ವೈ ನಡುವೆ ವಾಗ್ವಾದ
ನಿನ್ನೆಯಿಂದಲೂ ಯಡಿಯೂರಪ್ಪ - ಕುಮಾರಸ್ವಾಮಿ ನಡುವೆ ಭಾರಿ ವಾಗ್ವಾದ ನಡೆಯುತ್ತಿದ್ದು, ನಿನ್ನೆ ಯಡಿಯೂರಪ್ಪ ಅವರು ಅಪ್ಪ-ಮಕ್ಕಳು ಲೂಟಿಕೋರರು ಎಂದು ಬೈದಿದ್ದರು. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿತ್ತು.
ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ
'ಬಿಎಸ್ವೈ ನಾಲಿಗೆ ಬಿಗಿ ಹಿಡಿಯಲಿ'
ಯಡಿಯೂರಪ್ಪ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಹೇಳಿದ ಕುಮಾರಸ್ವಾಮಿ ಅವರು, ಯಡಿಯೂರಪ್ಪ ಕಮಿಷನ್ ಜನಕ, ಅವರು ಸರ್ಕಾರದ ಯಾವುದೇ ಕೆಲಸ ಮಾಡಿಸುವಾಗಲೂ ಕಮಿಷನ್ ಹಿಡಿದುಕೊಂಡು ಯೋಜನೆ ಜಾರಿ ಮಾಡುತ್ತಿದ್ದರು ಎಂದು ಆರೋಪಿಸಿದ್ದರು.
ಹದ್ದು ಮೀರಿದ ವಾಗ್ವಾದ
ಒಟ್ಟಿನಲ್ಲಿ ಈ ಇಬ್ಬರೂ ನಾಯಕರು ಸಹ ಹದ್ದು ಮೀರಿ ವಾಗ್ವಾದ ನಡೆಸುತ್ತಿದ್ದಾರೆ. ಪರಸ್ಪರ ಕೀಳು ಮಟ್ಟದ ಭಾಷೆಯನ್ನೂ ಆಗಾಗ್ಗೆ ಬಳಸಿದ್ದಾರೆ. ಹಳ್ಳ ಹಿಡಿದಿದ್ದ ರಾಜ್ಯದ ರಾಜಕೀಯ ಕೊಚ್ಚೆಯೆಡೆಗೆ ಜಾರುತ್ತಿರುವುದು ಇವರಿಬ್ಬರ ಪರಸ್ಪರ ನಿಂದನೆಗಳಿಂದ ಸ್ಪಷ್ಟವಾಗಿತ್ತಿದೆ.
ಸಿಎಂ ವಿರುದ್ಧ ದೂರಿಗೆ ಆಗ್ರಹ
ಆರ್.ಅಶೋಕ್, ರೇಣುಕಾಚಾರ್ಯ, ಎಂಎಲ್ಸಿ ರವಿಕುಮಾರ್ ಸೇರಿದಂತೆ ಹಲವರು ಯಡಿಯೂರಪ್ಪ ನಿವಾಸದ ಮನೆ ಮುಂದೆ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ದಂಗೆ ಏಳುವಂತೆ ಕರೆ ನೀಡಿದ ಕುಮಾರಸ್ವಾಮಿ ವಿರುದ್ಧ ರಾಜದ್ರೋಹ (ಸೆಡೆಶನ್) ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.