ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಡಿಕೆ! ಏನಿದರ ಮರ್ಮ?
Recommended Video

ಬೆಂಗಳೂರು, ಡಿಸೆಂಬರ್ 03 : ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ, ಕೆಲ ಜೆಡಿಎಸ್ ನಾಯಕರ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಭುಗಿಲೆದ್ದಿರುವ ಅಸಮಾಧಾನ ಮುಂತಾದ ವಿಷಯಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಂಪುಟ ವಿಸ್ತರಣೆಯಲ್ಲಿ ಯಾರ್ಯಾರಿಗೆ ಅವಕಾಶ ನೀಡುವುದು ಒಂದೆಡೆಯಾದರೆ, ಅವಕಾಶ ಸಿಗದಿರುವ ಶಾಸಕರು ಸಿಡಿದೇಳುವ ಸಾಧ್ಯತೆಗಳು ಕೂಡ ದಟ್ಟವಾಗಿವೆ. ಜೊತೆಗೆ, ಎಚ್ ಡಿ ರೇವಣ್ಣ ಸೇರಿದಂತೆ ಕೆಲ ಜೆಡಿಎಸ್ ಸಚಿವರ ವಿರುದ್ಧ ಕಾಂಗ್ರೆಸ್ ನಾಯಕರಲ್ಲಿಯೇ ದುಸುಮುಸು ಶುರುವಾಗಿದೆ.
ಈ ನಿಟ್ಟಿನಲ್ಲಿ ಡಿಸೆಂಬರ್ 8, ಶನಿವಾರದಂದು ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಪರಿಹಾರ ಕಂಡುಕೊಳ್ಳಲು, ಶಾಸಕರ ಕೋಪವನ್ನು ಶಮನ ಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈಗಾಗಲೆ ಉದ್ಭವವಾಗಿರುವ ಸಮಸ್ಯೆಗಳು ಮಾತ್ರವಲ್ಲ, ಮುಂದೆ ಕೂಡ ಜೆಡಿಎಸ್-ಕಾಂಗ್ರೆಸ್ ಸರಕಾರ ಸಾಮರಸ್ಯದಿಂದ ಕೆಲಸ ಮಾಡಲು ಅನುಕೂಲವಾಗುವಂತೆ ಎಲ್ಲ ಅಡೆತಡೆಗಳನ್ನು ನಿವಾರಿಸುವ ಉದ್ದೇಶವೂ ಕಾಂಗ್ರೆಸ್ ಸಭೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಭಾಗವಹಿಸುವುದರ ಹಿಂದಿದೆ.

ಕುಮಾರಸ್ವಾಮಿಯವರೇ ಗೊಂದಲ ಶಮನ ಮಾಡಲಿ
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷವಾಗಲಿ ಇತರ ಪಕ್ಷಗಳ ಶಾಸಕಾಂಗ ಪಕ್ಷದ ಸಭೆಯಲ್ಲಿ ಇತರ ಪಕ್ಷಗಳ ನಾಯಕರು ಭಾಗವಹಿಸುವುದಿಲ್ಲ. ಆದರೆ, ಸರಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಆಡಳಿತ ನಡೆಸುತ್ತಿರುವುದರಿಂದ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಿ, ಕಾಂಗ್ರೆಸ್ ನಾಯಕರಲ್ಲಿ ಕಾಣಿಸಿಕೊಂಡಿರುವ ಅಸಮಾಧಾನ ಮತ್ತು ಕೆಲ ಆಡಳಿತಾತ್ಮಕ ಗೊಂದಲಗಳನ್ನು ಕುಮಾರಸ್ವಾಮಿಯವರೇ ಶಮನ ಮಾಡಲಿ ಎಂಬ ಉದ್ದೇಶದಿಂದ ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ಸಭೆಗೆ ಆಹ್ವಾನಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ತಕ್ಕಡಿ ಸ್ವಲ್ಪ ಏರುಪೇರಾದರೂ
ಎಲ್ಲಕ್ಕಿಂತ ಮುಖ್ಯವಾಗಿ ಜಂಟಿ ಸರಕಾರದಲ್ಲಿ 8 ಸ್ಥಾನಗಳು ಖಾಲಿಯಿವೆ. 6 ಸ್ಥಾನಗಳನ್ನು ಕಾಂಗ್ರೆಸ್ ತುಂಬಬೇಕಿದ್ದರೆ, ಇನ್ನೆರಡು ಜೆಡಿಎಸ್ ತುಂಬಬೇಕಾಗಿದೆ. ಜೆಡಿಎಸ್ ನಲ್ಲಿ ಈವೆರಡು ಸ್ಥಾನಗಳನ್ನು ತುಂಬಲು ಯಾವುದೇ ತೊಡಕಿಲ್ಲ, ಆದರೆ, ಸಮಸ್ಯೆಯಿರುವುದೇ ಕಾಂಗ್ರೆಸ್ ನಲ್ಲಿ. 6 ಸ್ಥಾನ ಗ್ರಹಿಸಲು ಡಜನ್ ಗೂ ಹೆಚ್ಚು ಹಿರಿಯ ಮತ್ತು ಕಿರಿಯ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ತಕ್ಕಡಿ ಸ್ವಲ್ಪ ಏರುಪೇರಾದರೂ ಸರಕಾರವೇ ಉರುಳಿ ಹೋಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ, ಸಂಪುಟ ವಿಸ್ತರಣೆಯೆಂಬುದು ಕಾಂಗ್ರೆಸ್ ಪಾಲಿಗೆ ಬಿಡಿಸಲಾಗದ ಗಂಟಾಗಿದೆ.

ಜಾರಕಿ ಸಹೋದರರ ಈಡೇರದ ಬೇಡಿಕೆಗಳು
ಬೆಳಗಾವಿಯ ಪ್ರಬಲ ರಾಜಕಾರಣಿಗಳಾದ ಜಾರಕಿಹೊಳಿ ಬ್ರದರ್ಸ್ ರನ್ನು ನಿಯಂತ್ರಣದಲ್ಲಿಡುವುದೇ ಕಾಂಗ್ರೆಸ್ಸಿಗೆ ಕಷ್ಟವಾಗಿದೆ. ಮೊದಲಿಗೆ ಸ್ಥಳೀಯ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಜಾರಕಿಹೊಳಿ ಬ್ರದರ್ಸ್ ಸಂಘರ್ಷ ನಡೆಸಿದ್ದರೆ, ಈಗ ತಮಗೆ ಕ್ಯಾಬಿನೆಟ್ ನಲ್ಲಿ ಉನ್ನತ ಸ್ಥಾನಗಳು ಬೇಕು ಎಂದು ಬೇಡಿಕೆ ಮುಂದಿಟ್ಟಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುಪ್ಪವಾಗಿದೆ. ಅಲ್ಲದೆ, ತಾವು ಇಚ್ಛಿಸುವ ವರ್ಗಾವಣೆಗಳು ಆಗುತ್ತಿಲ್ಲ, ಈಗಾಗಲೆ ಮಂತ್ರಿಗಿರಿ ಸಿಕ್ಕಿರುವ ಶಾಸಕರು ತಮ್ಮ ಮಾತು ಕೇಳುತ್ತಿಲ್ಲ ಎಂದು ಅವರು ಕುಮಾರಸ್ವಾಮಿಯವರಿಗೆ ದೂರು ನೀಡುತ್ತಲೇ ಬಂದಿದ್ದಾರೆ.

ಡಿಸೆಂಬರ್ 10ರಿಂದ ಚಳಿಗಾಲದ ಅಧಿವೇಶನ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಅದರಲ್ಲಿ ಕುಮಾರಸ್ವಾಮಿಯವರು ಭಾಗವಹಿಸುತ್ತಿರುವುದು ಆ ಸಭೆಗೆ ಮತ್ತಷ್ಟು ಮಹತ್ವ ತಂದುಕೊಟ್ಟಿದೆ. ಏಕೆಂದರೆ, ಡಿಸೆಂಬರ್ 10ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಬೆಳಗಾವಿಯ ಸಕ್ಕರೆ ಕಾರ್ಖಾನೆ ಮಾಲಿಕರು ತಮಗೆ ಕಳೆದ ನಾಲ್ಕು ವರ್ಷಗಳಿಂದ ಬಾಕಿ ಕೊಟ್ಟಿಲ್ಲ ಎಂಬುದು ಅಧಿವೇಶನವನ್ನು ಬಿರುಗಾಳಿಯಂತೆ ಅಪ್ಪಳಿಸಲಿದೆ. ಅಲ್ಲಿ ಪ್ರತಿಭಟನೆ ಮಾಡಲು ಬೆಳಗಾವಿಯ ರೈತರು ಈಗಾಗಲೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ ಮತ್ತು ಆ ಪ್ರತಿಭಟನೆಗೆ ಬೆಂಬಲ ನೀಡಲು ಭಾರತೀಯ ಜನತಾ ಪಕ್ಷ ಕೂಡ ಸಿದ್ಧವಾಗಿದೆ. ರೈತರ ಪ್ರತಿಭಟನೆ ಮತ್ತು ಬಿಜೆಪಿಯ ಆಕ್ರೋಶ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಬಿಸಿ ಮುಟ್ಟಿಸುವುದಂತೂ ಗ್ಯಾರಂಟಿ.

ಅವಕಾಶಕ್ಕೆ ಕಾದು ಕುಳಿತಿರುವ ಯಡಿಯೂರಪ್ಪ
ಇದೆಲ್ಲದರ ಜೊತೆಗೆ ಮೈತ್ರಿ ಸರಕಾರ ರಚನೆಯಾದಾಗಿನಿಂದ ಸಂಪುಟ ಸೇರಲು ವಿಫಲರಾಗಿರುವ ಅಥವಾ ಅವಕಾಶ ಕಳೆದುಕೊಂಡಿರುವ ಹಲವಾರು ಕಾಂಗ್ರೆಸ್ಸಿನ ಹಿರಿಯ ನಾಯಕರು ಒಳಗಿಂದೊಳಗೇ ಕತ್ತಿ ಮಸೆಯುತ್ತಿದ್ದಾರೆ. ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡಿಗೆ ತಮ್ಮ ಬೇಡಿಕೆಯನ್ನು ಮುಂದಿಟ್ಟು ಒತ್ತಡ ಹಾಕುತ್ತಿದ್ದಾರಾದರೂ, ಲೋಕಸಭೆ ಚುನಾವಣೆಯೊಳಗೆ ಯಾವುದೇ ಕಾರಣಕ್ಕೂ ಸರಕಾರ ಬೀಳಬಾರದು ಎಂದು ಮೈತ್ರಿಕೂಟವನ್ನು ಜತನದಿಂದ ಕಾಯುತ್ತಿರುವ ಕಾಂಗ್ರೆಸ್ ಹೈಕಮಾಂಡ್, ಭಿನ್ನಮತೀಯರ ಈ ಬೇಡಿಕೆಗೆ ಓಗೊಟ್ಟಿಲ್ಲ. ಸಾಲದೆಂಬಂತೆ, ಮೈತ್ರಿಕೂಟದ ಗೊಂದಲಗಳನ್ನೇ ಪ್ರಬಲ ಅಸ್ತ್ರವಾಗಿಸಿಕೊಂಡು, ಸರಕಾರವನ್ನು ಅಸ್ಥಿರಗೊಳಿಸಿ, ಮತ್ತ ಗದ್ದುಗೆಗೇರಲು ಯಡಿಯೂರಪ್ಪನವರು ಕಾಯುತ್ತಲೇ ಇದ್ದಾರೆ. ಇದಕ್ಕೆ ಪುಷ್ಟಿಯೆಂಬಂತೆ ಅವರು ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು.











Click it and Unblock the Notifications