ಮಂಗಳೂರು ಗೋಲಿಬಾರ್: ಸರ್ಕಾರಕ್ಕೆ ಕುಮಾರಸ್ವಾಮಿ ಪಂಚ ಪ್ರಶ್ನೆಗಳು
ಬೆಂಗಳೂರು, ಡಿಸೆಂಬರ್ 20: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಬ್ಬರು ಯುವಕರನ್ನು ಬಲಿತೆಗೆದುಕೊಂಡು ಮಂಗಳೂರು ಗೋಲಿಬಾರ್ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಟ್ವಿಟ್ಟರ್ ನಲ್ಲಿ ಸರ್ಕಾರಕ್ಕೆ ಚಾಟಿ ಬೀಸುತ್ತಿರುವ ಕುಮಾರಸ್ವಾಮಿ, ಇಂದು ತುಸು ಹೆಚ್ಚಾಗಿಯೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳೂರಿನಲ್ಲಿ ಇಂದು ಆಗಿರುವ ಗೋಲಿಬಾರ್ ಹಾಗೂ ಅದಕ್ಕೆ ಇಬ್ಬರು ಯುವಕರು ಬಲಿ ಆಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಗೋಲಿಬಾರ್ ಕುರಿತು ಟ್ವಿಟ್ಟರ್ ನಲ್ಲಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

ಸರ್ಕಾರ ಬಲಿ ಪಡೆದದ್ದು ಯಾಕೆ?
''ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಇಬ್ಬರು ಅಮಾಯಕರನ್ನು ರಾಜ್ಯ ಸರ್ಕಾರ ಗೋಲಿಬಾರ್ ನಡೆಸಿ 'ಬಲಿ' ತೆಗೆದುಕೊಂಡಿದ್ದು ಯಾವ ಕಾರಣಕ್ಕೆ? ಯಾರನ್ನು ಮೆಚ್ಚಿಸಲು ಇಂತಹ ಮತಿಗೇಡಿ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡದ್ದು?'' ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಅಮಿತ್ ಶಾ ಮೆಚ್ಚಿಸಲು ಗೋಲಿಬಾರ್ ಮಾಡಿಸಿದಿರೇ?
''ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಮಾಯಕರ ಮೇಲೆ ಗುಂಡು ಸಿಡಿಸಿತೆ? ಅಧಿಕಾರಿಗಳು ತಾವಾಗಿಯೇ ಶಾಂತಿಯುತ ಪ್ರತಿಭಟನೆ ತಹಬದಿಗೆ ತರಲು ಅವಿವೇಕದ ನಿರ್ಧಾರ ಕೈಗೊಂಡರೋ? ರಾಜ್ಯ ಸರ್ಕಾರ ಶೌರ್ಯ ಪ್ರದರ್ಶನಕ್ಕೆ ಇಂತಹ ಆದೇಶ ನೀಡಿತೆ?'' ಎಂದು ಎಚ್ಡಿಕೆ ವ್ಯಂಗ್ಯ ಮಾಡಿದ್ದಾರೆ.

ಅಸ್ಸಾಂ ನಲ್ಲಿ ಆಗದ ಗೋಲಿಬಾರ್ ಇಲ್ಲೇಕೆ?
''ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ಮೊದಲು ತೀವ್ರತರವಾದ ಪ್ರತಿಭಟನೆ ಆಕ್ರೋಶ, ಭುಗಿಲೆದ್ದಿತು. ಆದರೆ ಅಲ್ಲಿ ನಡೆಯದ ಗೋಲಿಬಾರ್ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದ ರಾಜ್ಯದಲ್ಲಿ ನಡೆದಿದ್ದಾದರೂ ಯಾಕೆ? ಅಮಾಯಕರ 'ರಕ್ತ ತರ್ಪಣ' ಕೊಡುವ ಮೂಲಕ ಯಾರಿಗೆ ಯಾವ ಸಂದೇಶ ರವಾನಿಸಿದಿರಿ?'' ಎಂದು ಪ್ರಶ್ನಿಸಿದ್ದಾರೆ.

ಮೃತರ ಕುಟುಂಬದ ಜವಾಬ್ದಾರಿ ಹೊರುವರಾರು?
''ಪೋಲೀಸರ ಗುಂಡಿಗೆ ಬಲಿಯಾದ ಅಮಾಯಕರ ಕುಟುಂಬದ ಜವಾಬ್ದಾರಿ ಹೊರುವವರುವವರು ಯಾರು? ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರೂ ಪ್ರತಿಭಟಿಸಲೇ ಬಾರದೆ? 4 ತಿಂಗಳ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ 'ಪವಿತ್ರ ಸರ್ಕಾರ' ಮಾಡಲು ಹೊರಟಿರುವುದು ಏನು? '' ಎಂದು ಖಾರವಾಗಿ ಕೇಳಿದ್ದಾರೆ.

ಮೊದಲೇ ನಿಷೇಧಾಜ್ಞೆ ಹೊರಡಿಸಿದ ಕಾರಣವೇನು?
''ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಪ್ರತಿಭಟನೆಗೆ ನಿರ್ಬಂಧ ಹೇರಲು ಕಾರಣಗಳೇನು? ಇದರ ಹಿಂದಿರುವ ಹಕೀಕತ್ತಾದರೂ ಏನು?'' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications