ಸುಮಲತಾ ವಿರುದ್ಧ ಹೇಳಿಕೆ : ರೇವಣ್ಣ ಪರವಾಗಿ ಕ್ಷಮೆ ಕೇಳಿದ ಕುಮಾರಸ್ವಾಮಿ
ಬೆಂಗಳೂರು, ಮಾರ್ಚ್ 10 : 'ನಮ್ಮ ಕುಟುಂಬ ಯಾವ ಹೆಣ್ಣು ಮಕ್ಕಳಿಗೂ ಅವಮಾನ ಮಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಪ್ರತಿದಿನ ನನ್ನ ನಡಳಿಕೆಗಳನ್ನು ನೋಡುತ್ತೀರಿ. ನಮ್ಮ ಕುಟುಂಬ ಯಾವ ಹೆಣ್ಣು ಮಕ್ಕಳಿಗೂ ಅವಮಾನ ಮಾಡಿಲ್ಲ' ಎಂದು ಹೇಳಿದರು.
'ಈ ರಾಜ್ಯದ ಬಡ ಕುಟುಂಬದ ಲಕ್ಷಾಂತರ ಹೆಣ್ಣು ಮಕ್ಕಳು ನನ್ನ ಮುಂದೆ ಕಣ್ಣಲ್ಲಿ ನೀರು ಹಾಕಿಕೊಂಡು ಬಂದಾಗ ಸ್ಥಳದಲ್ಲೇ ಕುಟುಂಬದ ಹೆಣ್ಣು ಮಕ್ಕಳ ರಕ್ಷಣೆಗೆ ಯಾವ ರೀತಿ ಕೆಲಸ ನಿರ್ವಹಣೆ ಮಾಡಿದ್ದೇನೆ ಎಂಬುದನ್ನು ನೀವು ನೋಡಿದ್ದೀರಿ' ಎಂದರು.
'ಅಧಿಕಾರ ಇರಲಿ ಇಲ್ಲದಿರಲಿ ಬಡ ಕುಟುಂಬದ ಹೆಣ್ಣು ಮಕ್ಕಳ ರಕ್ಷಣೆಗೆ ಕೆಲಸ ಮಾಡಿದ್ದೇನೆ. ಈ ಬಗ್ಗೆ ಯಾವ ವೇದಿಕೆ ಮೇಲೆ ಬೇಕಾದರೂ ಯಾರೊಂದಿಗೆ ಚರ್ಚೆ ಮಾಡುಲು ತಯಾರಾಗಿದ್ದೇನೆ' ಎಂದು ಕುಮಾರಸ್ವಾಮಿ ತಿಳಿಸಿದರು.

ಕುಮಾರಸ್ವಾಮಿ ಹೇಳಿದ್ದೇನು?
'ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದರೂ ಅದಕ್ಕೆ ಯಾರೂ ಪ್ರೇರಣೆ ನೀಡಿದ್ದಾರೆ ಎಂಬುದನ್ನು ನಿಮ್ಮ ವಿಡಿಯೋ ತೆಗೆದರೆ ಸಿಗುತ್ತದೆ. ಆದರೂ ಎಚ್ಚರಿಕೆಯಿಂದ ಉತ್ತರ ಕೊಡಬೇಕಿತ್ತು. ಇವತ್ತು ಯಾವುದಾದರೂ ಮಹಿಳೆಯರಿಗೆ ಇದರಿಂದ ನೋವಾಗಿದ್ದರೆ ರೇವಣ್ಣ ಅವರ ಪರವಾಗಿ ನಾನು ಕ್ಷಮೆ ಕೋರುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದರು.

ಅಗೌರವ ಸಲ್ಲಿಸಿಲ್ಲ
'ನಾಡಿನ ಜನತೆಗೆ, ನಾಡಿನ ಮಹಿಳಾ ಸಮುದಾಯಕ್ಕೆ ನಾನೇ ಕ್ಷಮೆ ಕೇಳುತ್ತೇನೆ. ನಮ್ಮ ಕುಟುಂಬ ಎಂದೂ ಮಹಿಳೆಯರಿಗಾಗಲಿ ಸಾಮಾನ್ಯ ಜನರಿಗಾಗಲಿ ಎಂದಿಗೂ ನಾವು ಅಗೌರವ ಸಲ್ಲಿಸಿದವರಲ್ಲ' ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಎಚ್.ಡಿ.ರೇವಣ್ಣ ಹೇಳಿದ್ದೇನು
ಶುಕ್ರವಾರ ದೆಹಲಿಯಲ್ಲಿ ಮಾತನಾಡಿದ್ದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, 'ಪತಿ, ಮಾಜಿ ಸಚಿವ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲಾ ಬೇಕಿತ್ತಾ?' ಎಂದು ಪ್ರಶ್ನೆ ಮಾಡಿದ್ದರು.

ನಾವು ಸಿದ್ಧರಾಗಿದ್ದೇವೆ
'ಕುಮಾರಸ್ವಾಮಿ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಿಕೊಟ್ಟರು. ಆದರೆ, ಸುಮಲತಾ ಅವರಿಗೆ ಯಾವುದೇ ಕೃತಜ್ಞತೆಯೂ ಇಲ್ಲ. ಅವರು ಚಾಲೆಂಜ್ ಮಾಡುತ್ತಿದ್ದಾರೆ. ಅವರ ಚಾಲೆಂಜ್ ಸ್ವೀಕರಿಸಲು ನಾವು ಸಿದ್ಧರಾಗಿದ್ದೇವೆ' ಎಂದು ಎಚ್.ಡಿ.ರೇವಣ್ಣ ಹೇಳಿದ್ದರು.












Click it and Unblock the Notifications