ಚನ್ನಿಗಪ್ಪ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ!
ಬೆಂಗಳೂರು, ಜನವರಿ 12 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಬಿ.ಮುನೇಗೌಡ 2018ರ ಚುನಾವಣೆ ಅಭ್ಯರ್ಥಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ದೇವನಹಳ್ಳಿಯ ಚಪ್ಪರದಕಲ್ಲಿನ ಬಳಿ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಅಭ್ಯರ್ಥಿ ಘೋಷಣೆ ಮಾಡಿದರು. ಈ ಮೂಲಕ ಕ್ಷೇತ್ರದಲ್ಲಿ ಚುನಾವಣೆಯ ಕಾವನ್ನು ಹೆಚ್ಚಿಸಿದ್ದಾರೆ.
ಟಾರ್ಗೆಟ್ 28: ಬೆಂಗಳೂರಿನಲ್ಲಿ 'ಮನೆ ಮನೆಗೆ ಕುಮಾರಣ್ಣ'
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ದೊಡ್ಡಬಳ್ಳಾಪುರ ಕ್ಷೇತ್ರ ಒಳಪಡುತ್ತದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ವೆಂಕಟರಮಣಯ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಕುಮಾರಸ್ವಾಮಿ ಅಭ್ಯರ್ಥಿ ಘೋಷಿಸಿರುವುದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಶಾಸಕ ಪಿಳ್ಳಮುನಿಶಾಮಪ್ಪ ಯೂಟರ್ನ್, ರಾಜೀನಾಮೆ ವಾಪಸ್
ಇದೇ ಸಂದರ್ಭದಲ್ಲಿ ದೇವನಹಳ್ಳಿಯ ಜೆಡಿಎಸ್ ಶಾಸಕ ಪಿಳ್ಳ ಮುನಿಸ್ವಾಮಪ್ಪ ಅವರು ಜೊತೆಗಿದ್ದರು. ಆದರೆ, ಕ್ಷೇತ್ರಕ್ಕೆ ಕುಮಾರಸ್ವಾಮಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಒಮ್ಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮನವೊಲಿಕೆ ಬಳಿಕ ವಾಪಸ್ ಪಡೆದಿದ್ದ ಪಿಳ್ಳ ಮುನಿಸ್ವಾಮಪ್ಪ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಹೇಳಿದ್ದೇನು?
'ಮೂರು ವರ್ಷಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರು ಕೊಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅದು ಕೇವಲ ಹೇಳಿಕೆಯಾಗೇ ಉಳಿದಿದೆ' ಎಂದು ಕುಮಾರಸ್ವಾಮಿ ಟೀಕಿಸಿದರು.
ಬಿ.ಮುನೇಗೌಡಗೆ ಟಿಕೆಟ್
'ದೊಡ್ಡ ಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಮುನೇಗೌಡ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಅವರನ್ನು ಗೆಲ್ಲಿಸುವ ಹೊಣೆ ನಿಮ್ಮದು' ಎಂದು ಎಚ್.ಡಿ.ಕುಮಾರಸ್ವಾಮಿ ಸಮಾವೇದಲ್ಲಿ ಹೇಳಿದರು.
ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರ
ದೊಡ್ಡಬಳ್ಳಾಪುರ ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಟಿ.ವೆಂಕಟರಮಣಯ್ಯ 2013ರ ಚುನಾವಣೆಯಲ್ಲಿ 38,877 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸಿದ್ದರು
ಬಿ.ಮುನೇಗೌಡ ಅವರು ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 37,430 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಚನ್ನಿಗಪ್ಪ ಸ್ಪರ್ಧಿಸಿದ್ದರು 34,628 ಮತಗಳನ್ನು ಪಡೆದು ಸೋತಿದ್ದರು.
ಕ್ಷೇತ್ರದ ರಾಜಕೀಯ ಚಿತ್ರಣ
ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ. ನೆಲಮಂಗಲ ಶ್ರೀನಿವಾಸಮೂರ್ತಿ (ಜೆಡಿಎಸ್), ದೇವನಹಳ್ಳಿ (ಪಿಳ್ಳ ಮುನಿಶಾಮಪ್ಪ (ಜೆಡಿಎಸ್), ಹೊಸಕೋಟೆ ಎಂ.ಟಿ.ಬಿ.ನಾಗರಾಜ್ (ಕಾಂಗ್ರೆಸ್), ದೊಡ್ಡಬಳ್ಳಾಪುರ ವೆಂಕಟರಮಣಪ್ಪ (ಕಾಂಗ್ರೆಸ್) ಶಾಸಕರು.