ಅಖಾಡಕ್ಕಿಳಿದ ಗೌಡರು; ಭಾವುಕರಾಗಿ ಮಹತ್ವದ ಘೋಷಣೆ ಮಾಡಿದ ಜಿಟಿಡಿ!
ಬೆಂಗಳೂರು, ಅಕ್ಟೋಬರ್ 20; ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳಿಗೆ ದೀಪಾವಳಿ ಹಬ್ಬಕ್ಕೂ ಮುನ್ನವೇ ಸ್ಪಷ್ಟನೆ ಸಿಕ್ಕಿದೆ. ಅಖಾಡಕ್ಕೆ ಇಳಿದ ದೊಡ್ಡ ಗೌಡರು ಜಿ. ಟಿ. ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಗುರುವಾರ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಜಿ. ಟಿ. ದೇವೇಗೌಡರ ನಿವಾಸಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಭೇಟಿ ನೀಡಿದ್ದರು. ಬಳಿಕ ಪಕ್ಷದ ನಾಯಕರು ಅಲ್ಲಿಯೇ ಮಧ್ಯಾಹ್ನದ ಭೋಜನ ಸವಿದರು. ಬಳಿಕ ಭಾವುಕರಾಗಿ ಜಿ. ಟಿ. ದೇವೇಗೌಡರು ದೊಡ್ಡ ಘೋಷಣೆ ಮಾಡಿದರು.
ಜಿಡಿಟಿ ಕಾಂಗ್ರೆಸ್ಗೆ; ಸಿದ್ದರಾಮಯ್ಯ ಮಹತ್ವದ ಟ್ವೀಟ್!
ಮುಂದಿನ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಬೇಕು ಎಂಬುದು ಜೆಡಿಎಸ್ ಗುರಿ. ಅದಕ್ಕಾಗಿ ಪಕ್ಷ ಹಲವಾರು ಕಾರ್ಯಕ್ರಮ ರೂಪಿಸಿದೆ. ಇದರ ಭಾಗವಾಗಿಯೇ ತನ್ನ ಪ್ರಭಾವ ಹೆಚ್ಚಿರುವ ಜಿಲ್ಲೆಯಲ್ಲಿ ಕ್ಷೇತ್ರ, ನಾಯಕರನ್ನು ಉಳಿಸಿಕೊಳ್ಳುವ ಕಾರ್ಯ ಮಾಡುತ್ತಿದೆ.
ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಎಂಟ್ರಿ, ಕಾದು ನೋಡುವ ತಂತ್ರದಲ್ಲಿ ಜಿಟಿಡಿ!
ಜಿ. ಟಿ. ದೇವೇಗೌಡರ ಮನವೊಲಿಕೆಗೆ ಎಚ್. ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮಾಡಿದ ಪ್ರಯತ್ನಗಳು ಫಲ ಕೊಟ್ಟಿರಲಿಲ್ಲ. ಅಂತಿಮವಾಗಿ ದೇವೇಗೌಡರು ಉರುಳಿಸಿದ ದಾಳ ಫಲ ಕೊಟ್ಟಿದೆ. ಜಿ. ಟಿ. ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ದೊಡ್ಡ ಗೌಡರು ಯಶಸ್ವಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ತಂತ್ರ ಹೇಗೆ ಫಲ ಕೊಡಲಿದೆ? ಎಂದು ಕಾದು ನೋಡಬೇಕು.
ಜಿಟಿ ದೇವಗೌಡ ಬಿಜೆಪಿಗೆ ಬಂದರೆ ಕ್ಷೇತ್ರ ತ್ಯಾಗಕ್ಕೆ ಸಿದ್ಧ: ಶಾಸಕ ನಾಗೇಂದ್ರ
ಭಾವುಕರಾದ ಜಿ. ಟಿ. ದೇವೇಗೌಡರು
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಮನೆಗೆ ಆಗಮಿಸುತ್ತಲೇ ಜಿ. ಟಿ. ದೇವೇಗೌಡರು ಭಾವುಕರಾಗಿದ್ದರು. ಎಚ್. ಡಿ. ಕುಮಾರಸ್ವಾಮಿ ಜೊತೆ ಕೆಲವು ವಿಚಾರದಲ್ಲಿ ಜಿ. ಟಿ. ದೇವೇಗೌಡರು ಅಸಮಾಧಾನ ಹೊಂದಿದ್ದರೂ ಸಹ ದೇವೇಗೌಡ ಮಾತಿಗೆ ಇಲ್ಲ ಎಂದು ಜಿಟಿಡಿ ಹೇಳಲು ಸಾಧ್ಯವೇ ಇರಲಿಲ್ಲ.
ದೇವೇಗೌಡ, ಕುಮಾರಸ್ವಾಮಿ, ಸಿ. ಎಂ. ಇಬ್ರಾಹಿಂ ಸೇರಿದಂತೆ ಪಕ್ಷದ ನಾಯಕರು ಮನೆ ಬಾಗಿಲಿಗೆ ಬಂದಾಗ ಜಿ. ಟಿ. ದೇವೇಗೌಡ ಎಲ್ಲಾ ಅಸಮಾಧಾನಗಳನ್ನು ಮರೆತರು. ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಎಚ್. ಡಿ. ಕುಮಾರಸ್ವಾಮಿ ಹಾರ ಹಾಕಲು ಬಂದಾಗ ಭಾವುಕರಾದರು.
ಕಣ್ಣೀರು ಹಾಕಿದ ಜಿ. ಟಿ. ದೇವೇಗೌಡ
ದೇವೇಗೌಡರೊಂದಿಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಜಿ. ಟಿ. ದೇವೇಗೌಡ ಕಣ್ಣೀರು ಹಾಕಿದರು. "ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ಅವರು ನನ್ನನ್ನು ಮರಿ ದೇವೇಗೌಡ ಎಂದೇ ಕರೆಯುತ್ತಿದ್ದರು. ಹಿಂದೆ ಹಲವು ಸ್ಥಾನವನ್ನು ಕೊಟ್ಟಿದ್ದರು. ಮೂರು ವರ್ಷಗಳಿಂದ ದೂರವಿದ್ದರೂ ನನ್ನ ಬಗ್ಗೆ ಪ್ರೀತಿ ಕಡಿಮೆಯಾಗಿಲ್ಲ" ಎಂದರು.
"ನಾನು ಜೆಡಿಎಸ್ ಬಿಡುವುದಿಲ್ಲ. ಇಲ್ಲೇ ಇರುತ್ತೇನೆ. ದೇವೇಗೌಡರು ಪ್ರಾದೇಶಿಕ ಪಕ್ಷ ಉಳಿಸಿದರು. ಅವರ ಕನಸು ನನಸು ಮಾಡುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ" ಎಂದು ಜಿ. ಟಿ. ದೇವೇಗೌಡರು ಭಾವುಕರಾಗಿ ಘೋಷಣೆ ಮಾಡಿದರು.
ಜೆಡಿಎಸ್ ಚಟುವಟಿಕೆಗಳಿಂದ ದೂರ
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ 2019ರಲ್ಲಿ ಪತನಗೊಂಡ ಬಳಿಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿದ್ದವು. ಕಾಂಗ್ರೆಸ್ ನಾಯಕರನ್ನು ಅವರು ಭೇಟಿಯಾಗಿದ್ದರು.
2021ರ ಆಗಸ್ಟ್ 31ರಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 'ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಜತೆ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ' ಎಂದು ಟ್ವೀಟ್ ಮಾಡಿದ್ದರು.
ಪ್ರಭಾವ ಉಳಿಸಿಕೊಳ್ಳಲು ಕಸರತ್ತು
2023ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ತನ್ನ ಪ್ರಭಾವ ಹೆಚ್ಚಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದೆ. ಇದಕ್ಕಾಗಿ ಈ ಭಾಗದಲ್ಲಿ ಮುನಿಸಿಕೊಂಡಿರುವ ನಾಯಕರ ಮನವೊಲಿಕೆಗೆ ದೇವೇಗೌಡರೇ ಮುಂದಾಗಿದ್ದಾರೆ. ಅದರ ಭಾಗವಾಗಿಯೇ ಮೈಸೂರಿನಲ್ಲಿ ಎರಡು ದಿನಗಳ ಪಕ್ಷದ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು.
ಜಿ. ಟಿ. ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿ, "ಕಾಂಗ್ರೆಸ್ ಸೇರುವಂತೆ ನನ್ನನ್ನು ಸಿದ್ದರಾಮಯ್ಯ ಕರೆದಿದ್ದರು, ಬಿಜೆಪಿಯವರು ನನ್ನನ್ನು ಕರೆದಿದ್ದರು. ನಾನು ಅವರ ಕ್ಷಮೆ ಕೇಳುತ್ತೇನೆ" ಎಂದು ಹೇಳಿದರು.