ದೇವೇಗೌಡರಲ್ಲಿ ನರೇಂದ್ರ ಮೋದಿಯನ್ನು ಕಾಣಿ!
ಬೆಂಗಳೂರು, ಜ.18 : ದೂರದಲ್ಲಿರುವ ನರೇಂದ್ರ ಮೋದಿಯತ್ತ ಏಕೆ ಕಣ್ಣು ಹಾಯಿಸುತ್ತೀರಿ? ದೇವೇಗೌಡರಲ್ಲೇ ನರೇಂದ್ರ ಮೋದಿಯನ್ನು ಕಾಣಿ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ದೇವೇಗೌಡರನ್ನು ಬೆಂಬಲಿಸಿ, ನಿಮಗೆ ಏನಾದರೂ ಆದರೆ, ಗೌಡರು ಬರುತ್ತಾರೆ. ಮೋದಿ ಬರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಜೆಡಿಎಸ್ ಪಕ್ಷದ ಬೃಹತ್ 'ಜನ ಪ್ರತಿನಿಧಿಗಳ ಸಮಾವೇಶ' ನಡೆಯಿತು. ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ, ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ಮುಖಂಡರಾದ ಚೆಲುವರಾಯಸ್ವಾಮಿ, ಬಸವರಾಜ ಹೊರಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ದೂರದ ನರೇಂದ್ರ ಮೋದಿಗೆ ಒಂದು ಅವಕಾಶ ಕೊಡೋಣ ಎಂದು ಹೇಳುವ ಯುವಕರು, ಇಲ್ಲೇ ಇರುವ ಕನ್ನಡಿಗ ದೇವೇಗೌಡರನ್ನು ನೋಡಿ ಎಂದರು. ಗೌಡರು ಕರ್ನಾಟಕದ ಅಭಿವೃದ್ಧಿಗಾಗಿ ಐವತ್ತು ವರ್ಷಗಳಿಂದ ರಾಜ್ಯದ ಹಿತಾಸಕ್ತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಬಣ್ಣಿಸಿದರು.
ತಮಗೆ ಅಧಿಕಾರ ದೊರೆತಾಗ ನಿಷ್ಕಳಂಕ ಆಡಳಿತವನ್ನು ದೇವೇಗೌಡರು ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಮುಲಾಯಂ, ಮಾಯಾವತಿ, ತಮಿಳುನಾಡಿನಲ್ಲಿ ಜಯಲಲಿತಾ, ಆಂಧ್ರದಲ್ಲಿ ಜಗನ್ಮೋಹನ್ರೆಡ್ಡಿಗೆ 20, 30, 50 ಸ್ಥಾನ ಜನರು ಕೊಡುತ್ತಾರೆ. ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ ನಾವು ಮಾಡಿದ ತಪ್ಪೇನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. [ಸಮಾವೇಶದಲ್ಲಿ ಹೇಳಿದ್ದಿಷ್ಟು]

ಗೌಡರಲ್ಲಿ ಮೋದಿಯಲ್ಲಿ ಕಾಣಿರಿ
ದೂರದಲ್ಲಿರುವ ನರೇಂದ್ರ ಮೋದಿಯತ್ತ ಏಕೆ ಕಣ್ಣು ಹಾಯಿಸುತ್ತೀರಿ? ದೇವೇಗೌಡರಲ್ಲೇ ನರೇಂದ್ರ ಮೋದಿಯನ್ನು ಕಾಣಿ ಎಂದು ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ದೇವೇಗೌಡರನ್ನು ಬೆಂಬಲಿಸಿ, ನಿಮಗೆ ಏನಾದರೂ ಆದರೆ, ಗೌಡರು ಬರುತ್ತಾರೆ. ಮೋದಿ ಬರುವುದಿಲ್ಲ ಎಂದು ಕುಮಾರಸ್ವಾಮಿ ವಿವರಣೆ ನೀಡಿದರು.

ಗೌಡರನ್ನು ಏಕೆ ಬೆಂಬಲಿಸಬೇಕು?
50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ದೇವೇಗೌಡರು ವೈಯಕ್ತಿಕ ಆಸೆಗಳಿಗೆ ಎಂದೂ ಬಲಿಯಾದವರಲ್ಲ. ದಿನದ 24 ಗಂಟೆಯೂ ಜನ, ನಾಡು, ನುಡಿ ವಿಚಾರವಾಗಿಯೇ ಆಲೋಚನೆ ಮಾಡುತ್ತಿರುತ್ತಾರೆ. ಈ ವಯಸ್ಸಿನಲ್ಲೂ ಅಷ್ಟೇ ಉತ್ಸಾಹದಿಂದ ಜನಸೇವೆಯಲ್ಲಿ ತೊಡಗಿಕೊಂಡಿರುವ ದೇವೇಗೌಡರನ್ನು ಜನರು ಏಕೆ ಬೆಂಬಲಿಸಬಾರದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅಧಿವೇಶನದಲ್ಲಿ ಸರ್ಕಾರಕ್ಕೆ ತರಾಟೆ
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ 2,500 ರೂ. ಬೆಂಬಲ ಬೆಲೆಯನ್ನು ಪ್ರಕಟಿಸಿತು. ಆದರೆ, ಅದನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡುತ್ತಿಲ್ಲ. ಕೇವಲ 1,700- 1,800 ರೂ. ನೀಡುತ್ತಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಸರ್ಕಾರ ಇದಕ್ಕೆ ಉತ್ತರ ನೀಡಬೇಕು. ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.

ಸಿದ್ದರಾಮಯ್ಯ ಸರ್ಕಾರ ಸಮಾಜವನ್ನು ಒಡೆಯುತ್ತಿದೆ
ಸಿಎಂ ಸಿದ್ದರಾಮಯ್ಯ ಸರ್ಕಾರ ದಿನಕ್ಕೊಂದು ಜಾತಿ ಸಮಾವೇಶವನ್ನು ಮಾಡುವ ಮೂಲಕ ಧರ್ಮ, ಜಾತಿ ಹೆಸರಿನಲ್ಲಿ ದಿನಕ್ಕೊಂದು ಸಮಾವೇಶ ಹಮ್ಮಿಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ನೀವೇ ಇಟ್ಟುಕೊಳ್ಳಿ ನಮಗೆ ಜನಭಾಗ್ಯ ನೀಡಿ ಎಂದರು.

ಸಂತೋಷ್ ಹೆಗ್ಡೆ ಮಾತಿಗೆ ಪ್ರತಿಕ್ರಿಯೆ ನೀಡಿ
ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಿದ್ದರಾಮಯ್ಯ ಮತ್ತು ಹಿಂದಿನ ಬಿಜೆಪಿ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ನೀಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.[ಸಂತೋಷ್ ಹೆಗ್ಡೆ ಹೇಳಿದ್ದೇನು]

ಕಾರ್ಯಕರ್ತರೇ ನಮ್ಮ ಆಸ್ತಿ
ಲೋಕಸಭೆ ಚುನಾವಣೆಗೆ 100 ದಿನ ಬಾಕಿ ಇದೆ. ಕುಮಾರಸ್ವಾಮಿ ರಾಜ್ಯದ ಕ್ಷೇತ್ರಗಳಲ್ಲೂ ಒಬ್ಬರೇ ಸಂಚರಿಸಿ ಪ್ರಚಾರ ಮಾಡುವುದು ಸಾಧ್ಯವಿಲ್ಲ. ಜೆಡಿಎಸ್ ಪಕ್ಷದ ಆಸ್ತಿ ಕಾರ್ಯಕರ್ತರು. ನೀವು ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಲೋಕಸಭೆ ಚುನಾವಣೆ ನಮ್ಮ ಪಾಲಿನ ಅಗ್ನಿಪರೀಕ್ಷೆ. ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಒಟ್ಟಾಗಿ ದುಡಿಯಬೇಕು ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.

ಹೆಂಡತಿಯನ್ನು ಚುನಾವಣೆಗೆ ನಿಲ್ಲಿಸಿ
ಚುನಾವಣೆಗೆ ಸ್ಪರ್ಧಿಸಲು ತಮಗೆ ಆಸೆ ಇಲ್ಲ. ಆದರೆ, ಅಖಾಡಕ್ಕೆ ಇಳಿಯುವುದು ಅನಿವಾರ್ಯ ಎಂದ ಗೌಡರು, ಲೋಕಸಭೆ ಚುನಾವಣೆಯಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಗೆ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಕೊಟ್ಟರು. ಮಂಡ್ಯದಲ್ಲಿ ಚೆಲವರಾಯಸ್ವಾಮಿ ಸಹ ತಮ್ಮ ಪತ್ನಿಯನ್ನು ಕಣಕ್ಕೆ ಇಳಿಸಲಿ ಎಂದು ದೇವೇಗೌಡರು ಹೇಳಿದರು.

ಜಮೀರ್ ಅಹಮದ್ ಗೈರು
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಜೆಡಿಎಸ್ ಸಮಾವೇಶಕ್ಕೆ ಗೈರು ಹಾಜರಾಗಿದ್ದರು. ಕೆಲವು ದಿನಗಳಿಂದ ಜೆಡಿಎಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಅವರು ಸಮಾವೇಶಕ್ಕೆ ಗೈರು ಹಾಜರಾಗುವ ಮೂಲಕ ಮತ್ತೊಮ್ಮೆ ನಾಯಕರಿಗೆ ಸಂಕಷ್ಟ ತಂದೊಡ್ಡಿದ್ದಾರೆ.












Click it and Unblock the Notifications