'ನಮೋ' ಯೋಜನೆಯಡಿ ವಿದ್ಯಾರ್ಥಿವೇತನ ವಿತರಿಸಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ- ಊಹಾಪೋಹಗಳಿಗೆ ರೆಕ್ಕೆ ಪುಕ್ಕ
ಬೆಂಗಳೂರು, ಜೂನ್ 15: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ಕಾರ್ಯಕ್ರಮದಡಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು 10 ಮಕ್ಕಳಿಗೆ 10 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ಬುಧವಾರ ವಿತರಿಸಿದರು.
ತೇಜಸ್ವಿ ಸೂರ್ಯ ಅವರು ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾದರು.
ನಮೋ ವಿದ್ಯಾನಿಧಿ ಕಾರ್ಯಕ್ರಮದ ಅಡಿಯಲ್ಲಿ, ದುರ್ಬಲ ವರ್ಗದ 10,000 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 10,000 ರೂ.ಗಳ ವಿದ್ಯಾರ್ಥಿ ವೇತನವನ್ನು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಹಣವನ್ನು ನೇರವಾಗಿ ಮಕ್ಕಳ ಶಾಲೆಗಳಿಗೆ ಪಾವತಿಸಲಾಗುವುದು. ಪ್ರಸ್ತುತ, 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.

'ದೇವೇಗೌಡ ಅವರಂತಹ ಉನ್ನತ ವ್ಯಕ್ತಿಯಿಂದ ಅನೇಕ ಹಿಂದುಳಿದ ವಿದ್ಯಾರ್ಥಿಗಳಿಗೆ ಚೆಕ್ಗಳನ್ನು ಸ್ವೀಕರಿಸುವುದು ಸ್ಮರಣೀಯ ಅನುಭವವಾಗಿದೆ. ಈ ಮಕ್ಕಳಿಗೆ ಚೆಕ್ಗಳನ್ನು ನೀಡಲು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರು ಚೆನ್ನಾಗಿ ಅಧ್ಯಯನ ಮಾಡಲು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು' ಎಂದು ತೇಜಸ್ವಿ ಸೂರ್ಯ ಹೇಳಿದರು.
ಊಹಾಪೋಹಗಳಿಗೆ ರೆಕ್ಕೆಪುಕ್ಕ
ಕರ್ನಾಟಕದಲ್ಲಿ ನೆಲಕಚ್ಚಿರುವ ಬಿಜೆಪಿಗೆ ಲೋಕಸಭೆ ಚುನಾವಣೆ ಬಗ್ಗೆ ಆತಂಕ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ರಾಜ್ಯದಲ್ಲಿ ಜೆಡಿಎಸ್ ಶಕ್ತಿಯೂ ಕುಗ್ಗುತ್ತಿದೆ ಎಂಬುದು ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಗೊತ್ತಾಗಿದೆ. ಕೇವಲ 19 ಸೀಟುಗಳಿಗೆ ಸೀಮಿತವಾಗಿರುವ ಜೆಡಿಎಸ್ಗೆ ರಾಜಕೀಯ ಆಸರೆ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಮಾತುಗಳು ಕೇಳಿಬಂದಿವೆ.

ದೇವೇಗೌಡರು ಹಾಗೂ ಪ್ರಧಾನಿ ಮೋದಿ ನಡುವಿನ ಸ್ನೇಹ ಚೆನ್ನಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೋದಿ ಅವರು ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾಗ, ದೇವೇಗೌಡರ ಬಗ್ಗೆಯಾಗಲಿ, ಜೆಡಿಎಸ್ ಬಗ್ಗೆಯಾಗಲಿ ಗಟ್ಟಿಯಾಗಿ ಮಾತನಾಡಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಇದಾದ ಬಳಿಕ ಸಂಸತ್ ಭವನದ ಉದ್ಘಾಟನೆಗೆ ಪ್ರಮುಖ ವಿರೋಧ ಪಕ್ಷಗಳು ಗೈರಾಗಿದ್ದರೂ, ದೇವೇಗೌಡರು ಹಾಜರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೈತ್ರಿ ವಿಚಾರವನ್ನು ಅಲ್ಲಗಳೆದಿರುವ ಕುಮಾರಸ್ವಾಮಿ ತಮ್ಮ ಜೊತೆ ಯಾರೂ ಮಾತನಾಡಿಲ್ಲವೆಂದು ಹೇಳಿದ್ದಾರೆ. ಆದರೆ, ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಸ್ವರೂಪಗಳು ಯಾವ ರೀತಿ ಬದಲಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications