ಪವರ್ ಟಿವಿ ಪ್ರಸಾರ ಆರಂಭಕ್ಕೆ ಅನುಮತಿ ನೀಡದ ಕೋರ್ಟ್
ಬೆಂಗಳೂರು, ಜುಲೈ 04: ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರ ಮತ್ತೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿಲ್ಲ. ಪರವಾನಿಗೆ ನವೀಕರಿಸುವವರೆಗೂ ಪ್ರಸಾರ ರದ್ದು ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಲಾಗಿದೆ.
ಪವರ್ ಟಿವಿ ಕಡೆಯಿಂದ ಶೋಕಾಸ್ ನೋಟಿಸ್ಗೆ ಸಲ್ಲಿಸಿರುವ ಉತ್ತರವನ್ನು ಪರಿಗಣಿಸಿ ಪರವಾನಿಗೆ ನವೀಕರಿಸುವ ಕುರಿತು 6 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಕರಣ ಸ್ಥಗಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ದಬ್ಬೇಗಟ್ಟ ಮಧು ಲಕ್ಷ್ಮಣ, ಮೆಸರ್ಸ್ ಮಿಟ್ಕಾನ್ ಇನ್ಫ್ರಾಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಶ್ರೀಕಾಂತ್ ಮಿಥೇಶ್ ಬಾಂಗ್ಡಿಯಾ, ಪವರ್ ಸ್ಮಾರ್ಟ್ ಮೀಡಿಯಾದ ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ರಾಕೇಶ್ ಶೆಟ್ಟಿ ಮೇಲ್ಮನವಿ ಸಲ್ಲಿಸಿದ್ದರು.
ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ಕೆ. ವಿ. ಅರವಿಂದ ಅವರ ವಿಭಾಗೀಯ ನ್ಯಾಯಪೀಠ ಬುಧವಾರ ತೀರ್ಪು ಪ್ರಕಟಿಸಿದ್ದು, ಸ್ಥಗಿತವನ್ನು 6 ವಾರಗಳ ಕಾಲ ಮುಂದುವರೆಸಿದೆ. ಜತೆಗೆ ಕೇಂದ್ರ ಸರ್ಕಾರ ಪರವಾನಿಗೆ ವಿಸ್ತರಣೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೇಂದ್ರ ಸರ್ಕಾರವು ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಪವರ್ ಟಿವಿ ಉತ್ತರವನ್ನೂ ನೀಡಿದೆ. ಅದರೆ, ಈ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಮೇಲ್ಮನವಿ ಸಲ್ಲಿಸಿರುವ ಕಂಪನಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಸ್. ಎಸ್. ನಾಗಾನಂದ್, ಸಚಿವಾಲಯ ಹೊರಡಿಸಿರುವ ಶೋಕಾಸ್ ನೋಟಿಸ್ ಆಧರಿಸಿ ಚಾನಲ್ ಬಂದ್ ಮಾಡಲು ಏಕಸದಸ್ಯಪೀಠ ಆದೇಶ ನೀಡಬಾರದಿತ್ತು. ಶೋಕಾಸ್ ನೋಟಿಸ್ಗೆ ವಿವರವಾದ ಉತ್ತರವನ್ನು ನೀಡಲಾಗಿದೆ. ಏಕಸದಸ್ಯ ಪೀಠದ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗಿದೆ ಎಂದರು.
ಏಕಸದಸ್ಯ ಪೀಠದ ಆದೇಶವೇನು?: ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಎಎಸ್ಜಿ ಅರವಿಂದ್ ಕಾಮತ್, 2021ರ ಅ.12ರಿಂದ ಅನ್ವಯವಾಗುವಂತೆ ಮೆಸರ್ಸ್ ಮಿಟ್ಕಾನ್ ಇನಾಧ್ರಿ ಪ್ರಾಜೆಕ್ಟ್ಗೆ ಲೈಸನ್ ಇಲ್ಲ, ಅದು ಕಾನೂನು ಬಾಹಿರವಾಗಿ ಪ್ರಸಾರ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರ ವಲಯದ ಐಜಿ ಬಿ. ಆರ್. ರವಿಕಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಎಂ. ರಮೇಶ್ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಚಾನಲ್ ಪ್ರಸಾರಕ್ಕೆ ನಿಷೇಧ ಹೇರಿತ್ತು.
ಅಲ್ಲದೆ, ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ (ನಿಯಂತ್ರಣ) ಕಾಯಿದೆ-1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷ ಣದಿಂದಲೇ ತಮ್ಮ ಚಾನಲ್ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು ಎಂದು ಪ್ರಕರಣದ ಪ್ರತಿವಾದಿಯಾದ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿಯಾಗಿರುವ ಹೆಚ್ಚುವರಿ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅಲಿಯಾಸ್ ರಾಕೇಶ್ ಶೆಟ್ಟಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿತ್ತು.












Click it and Unblock the Notifications