ಐಪಿಎಸ್ ಅಧಿಕಾರಿ ಭೀಮಾಶಂಕರ್ ಗುಳೇದ್ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು, ಮೇ 17; ಹಿರಿಯ ಐಪಿಎಸ್ ಅಧಿಕಾರಿ ಭೀಮಾಶಂಕರ್ ಎಸ್. ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ, ಅಕ್ರಮ ಹಣ ವರ್ಗಾವಣೆ ಹಾಗೂ ಭ್ರಷ್ಟಾಚಾರ ಆರೋಪದಡಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ದೂರುದಾರರ ಪತ್ನಿಯೇ ತಮ್ಮ ಮೊಬೈಲ್ನಲ್ಲಿದ್ದ ಅಹಿತಕರ ಫೋಟೋ ಹಾಗೂ ವಿಡಿಯೊಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಿರುವಾಗ ಆರೋಪಿ ಗುಳೇದ್ ಅವುಗಳನ್ನು ನಾಶ ಮಾಡಿದ್ದಾರೆ ಎನ್ನಲಾಗದು. ಮೊಬೈಲ್ನಲ್ಲಿದ್ದ ಅಶ್ಲೀಲ ಫೋಟೋಗಳ ಕಾರಣಕ್ಕೆ ದೂರುದಾರ ಮತ್ತವರ ಪತ್ನಿಯ ನಡುವೆ ಕಲಹವಾಗಿದ್ದು, ಅದಕ್ಕೆ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ಒಪ್ಪಲಾಗದು ಎಂದು ಹೇಳಿದೆ.

ಅಲ್ಲದೇ, ಸೂಕ್ತ ದಾಖಲೆಗಳ ಕೊರತೆಯ ನಡುವೆಯೂ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ್ದು, ಪ್ರಕರಣದಲ್ಲಿಐಪಿಸಿ ಸೆಕ್ಷನ್ 201 (ಅಪರಾಧದ ಸಾಕ್ಷ್ಯ ನಾಶಪಡಿಸುವುದು ಅಥವಾ ಅಪರಾಧವನ್ನು ಮುಚ್ಚಿಹಾಕಲು ತಪ್ಪು ಮಾಹಿತಿ ನೀಡುವುದು) ಹಾಗೂ 506 (ಬೆದರಿಕೆ) ಅನ್ವಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣ ರದ್ದುಪಡಿಸಲಾಗುತ್ತಿದೆ; ದೂರುದಾರರ ಪತ್ನಿ ಮತ್ತು ಆರೋಪಿ ಗುಳೇದ್ ದೈಹಿಕ ಸಂಬಂಧ ಹೊಂದಿರುವ ಚಿತ್ರಗಳು ಪತ್ನಿಯ ಮೊಬೈಲ್ನಲ್ಲಿ ಪತ್ತೆಯಾಗಿದ್ದು, ಅವುಗಳನ್ನು ತನ್ನ ಮೊಬೈಲ್ಗೆ ವರ್ಗಾವಣೆ ಮಾಡಿಕೊಂಡಿದ್ದಾಗಿ ದೂರುದಾರರೇ ತಮ್ಮ ದೂರಿನಲ್ಲಿಉಲ್ಲೇಖಿಸಿದ್ದಾರೆ. ಆದ್ದರಿಂದ, ಐಪಿಸಿ ಸೆಕ್ಷ ನ್ 354ಎ (ಲೈಂಗಿಕ ಕಿರುಕುಳ) ಅನ್ವಯಿಸುವುದಿಲ್ಲ.

ಅರ್ಜಿದಾರ ಗುಳೇದ್ ಮತ್ತು ದೂರುದಾರನ ಪತ್ನಿ ಇಬ್ಬರೂ ವಯಸ್ಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಐಪಿಸಿ ಸೆಕ್ಷ ನ್ 354ಎ ಅಡಿ ಮ್ಯಾಜಿಸ್ಪ್ರೇಟ್ ಕಾಗ್ನಿಜೆನ್ಸ್ ತೆಗೆದುಕೊಳ್ಳುವ ಹಾಗೂ ಐಟಿ ಕಾಯ್ದೆ ಅನ್ವಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಇದೇ ವೇಳೆ ಕೋರ್ಟ್ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪಿಎಂಎಲ್ ಕಾಯ್ದೆಯ ಸೆಕ್ಷ ನ್ 45ರ ಅಡಿ ದೂರುದಾರ ಸಲ್ಲಿಸಿರುವ ದೂರು ಊರ್ಜಿತವಲ್ಲ. ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲಹಾಗೂ ಸಾಕ್ಷ್ಯ ದಾಖಲಿಸಲು ಆದೇಶಿಸಲಾಗದು. ಪಿಎಂಎಲ್ ಕಾಯ್ದೆಯ ಸೆಕ್ಷನ್ 3, 4 ಮತ್ತು 5ರ ಅಡಿ ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರು ದೂರು ದಾಖಲಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಭೀಮಾಶಂಕರ್ ಗುಳೇದ್ ವಿರುದ್ಧ ಇಂಜಿನಿಯರ್ ಒಬ್ಬರು ಬೆಂಗಳೂರಿನ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿ, ನಾನು ನನ್ನ ಪತ್ನಿಯ ಹೆಸರಿನಲ್ಲಿ ಫೋಟೋ ಸ್ಟುಡಿಯೋ ಒಂದನ್ನು ಆರಂಭಿಸಿದ್ದೆ. ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮಾಶಂಕರ್ ಗುಳೇದ್ ಕುಟುಂಬದ ಕಾರ್ಯಕ್ರಮವೊಂದಕ್ಕೆ ಫೋಟೋಗ್ರಫಿ ಸೇವೆ ಪಡೆಯಲು ಸ್ಟುಡಿಯೋಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನನ್ನ ಪತ್ನಿಯ ಜತೆ ಸ್ನೇಹಗಳಿಸಿದ್ದರು.
ಕ್ರಮೇಣ ಇಬ್ಬರ ನಡುವೆ ಸಲುಗೆ ಬೆಳೆದು, ನಂತರ ಇಬ್ಬರೂ ಲೈಂಗಿಕ ಸಂಬಂಧ ಬೆಳೆಸಿದ್ದರು. ಪತ್ನಿಯ ನಗ್ನ ಚಿತ್ರಗಳನ್ನು ಆಕೆಯ ಮೊಬೈಲ್ನಲ್ಲೇ ಗುಳೇದ್ ಸೆರೆ ಹಿಡಿದಿದ್ದರು. ಇದು ನನಗೆ ಗೊತ್ತಾಗಿತ್ತು. ಆ ಬಳಿಕ ಫೋಟೋಗಳನ್ನು ಡಿಲೀಟ್ ಮಾಡುವಂತೆ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ, ಗುಳೇದ್ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಆಯೋಗದ (ಕೆಎಸ್ಎಫ್ಸಿ) ಇಬ್ಬರು ಅಧಿಕಾರಿಗಳು ಸೇರಿಕೊಂಡು ಪತ್ನಿಗೆ ಸಾಲ ಕೊಡಿಸಿದ್ದರು. ಈ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದು, ಬೇನಾಮಿ ಹೆಸರಿನಲ್ಲಿ'ನ್ಯೂ ಪೊ ಸ್ಟುಡಿಯೊ ಮತ್ತು ಇವೆಂಟ್ಸ್' ಎಂಬ ಉದ್ಯಮ ಆರಂಭಿಸಿದ್ದರು ಎಂದು ಆಕ್ಷೇಪಿಸಿ ಖಾಸಗಿ ದೂರು ಸಲ್ಲಿಸಿದ್ದರು.
ಈ ಎರಡೂ ದೂರುಗಳನ್ನು ಆಧರಿಸಿ, ಗುಳೇದ್ ಮತ್ತಿತರರ ವಿರುದ್ಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಅಕ್ರಮ ಹಣ ವರ್ಗಾವಣೆ (ಪಿಎಂಎಲ್) ಕಾಯ್ದೆ, ಬೇನಾಮಿ ವ್ಯವಹಾರ (ತಡೆ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ನ ವಿವಿಧ ಸೆಕ್ಷನ್ಗಳ ಅಡಿ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಈ ಎರಡೂ ಪ್ರಕರಣಗಳನ್ನು ರದ್ದು ಕೋರಿ ಗುಳೇದ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications