ಹಬ್ಬದ ಅಡುಗೆ ಮಾಡಿಲ್ಲವೆಂದು ಹೆಂಡ್ತಿ ಕೊಂದಿದ್ದ ಪತಿರಾಯ ಬಿಡುಗಡೆ
ಬೆಂಗಳೂರು, ಅ.17: ಹಬ್ಬದ ದಿನ ಅಡುಗೆ ಮಾಡಿಲ್ಲವೆಂದು ಕೋಪಗೊಂಡು ಕುಡುಕ ಪತ್ನಿಯನ್ನು ಕೊಲೆ ಮಾಡಿದ್ದ ಪತಿರಾಯನ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, ಇದು ಉದ್ದೇಶ ಪೂರ್ವಕ ಕೊಲೆಯಲ್ಲಿ ಆರೋಪಿ ಈಗಾಗಲೇ ಹಲವು ವರ್ಷ ಜೈಲು ವಾಸ ಅನುಭವಿಸಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದ ಹೈಕೋರ್ಟ್, ಆತನನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶ ನೀಡಿದೆ. ಆ ರೀತಿಯ ಬಿಡುಗಡೆಯ ಭಾಗ್ಯ ಪಡೆದಿರುವಾತ ಸದ್ಯ ಜೈಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುರೇಶ.
ಪತ್ನಿ ರಾಧಾಳನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾ, ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
NWKRTC: ದೀಪಾವಳಿ ಹಬ್ಬದ ಪ್ರಯುಕ್ತ 500ಕ್ಕೂ ಹೆಚ್ಚು ವಿಶೇಷ ಬಸ್
ಉದ್ದೇಶಪೂರ್ವಕವಲ್ಲದ ಕೊಲೆ: ಹಬ್ಬದ ದಿನ ಅಡುಗೆ ಮಾಡಿಲ್ಲ, ಮಕ್ಕಳಿಗೆ ಊಟ ಕೊಟ್ಟಿಲ್ಲ. ಪಾನಮತ್ತಳಾಗಿ ಹೆಂಡತಿ ಮಲಗಿರುವುದಕ್ಕೆ ಕೋಪಗೊಂಡ ಪತಿ ದಿಢೀರ್ ಆಗಿ ಆವೇಶದಿಂದ ದೊಣ್ಣೆಯಿಂದ ಹೊಡೆದಿದ್ದಕ್ಕೆ ಸಾವು ಸಂಭವಿಸಿದೆ. ಕೊಲೆ ಮಾಡುವ ಉದ್ದೇಶವಿರಲಿಲ್ಲ. ಹಾಗಾಗಿ, ಆತನು ಮಾಡಿದ್ದು ಕೊಲೆಯೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ 'ಉದ್ದೇಶಪೂರ್ವಕವಲ್ಲದ ನರಹತ್ಯೆ' ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಹಾಗಾಗಿ, ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 302 (ಕೊಲೆ) ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ಆದೇಶವನ್ನು ಮಾರ್ಪಾಡಿಸಿ ಅದನ್ನು 'ಉದ್ದೇಶಪೂರ್ವಕವಲ್ಲದ ನರಹತ್ಯೆ' ಆರೋಪ ಎಂದು ಪರಿಗಣಿಸಿದೆ. ಈಗಾಗಲೇ ಆರೋಪಿ 6 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಆನುಭವಿಸಿರುವ ಕಾರಣ, ಆತನ ಮೇಲೆ ಬೇರೆ ಯಾವುದೇ ಪ್ರಕರಣ ಇಲ್ಲದಿದ್ದರೆ ಆತನನ್ನು ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಸುರೇಶ ತನ್ನ ಮೊದಲ ಪತ್ನಿ ಮೀನಾಕ್ಷಿಯಿಂದ ಪ್ರತ್ಯೇಕವಾಗಿ ವಾಸುತ್ತಿದ್ದ. ಇದೇ ವೇಳೆ ರಾಧ ಅವರ ಪತಿ ಅಗಲಿದ್ದರು. ಹೀಗಾಗಿ ಸುರೇಶ ಮತ್ತು ರಾಧಾ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. 2016ರಲ್ಲಿ ಗಣೇಶ ಹಬ್ಬದ ದಿನ ಸುರೇಶ ಮನೆಗೆ ಬಂದಾಗ ಹಬ್ಬವನ್ನೂ ಆಚರಿಸದೆ, ಅಡುಗೆ ಮಾಡದೆ, ಮಕ್ಕಳಿಗೂ ಊಟ ಕೊಡದೆ ರಾಧಾ ಕುಡಿದು ಮಲಗಿದ್ದಳು. ಕೋಪಗೊಂಡ ಸುರೇಶ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. 2017ರಲ್ಲಿ ವಿಚಾರಣಾ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸುರೇಶ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರರ ಹಾಜರಿ ಅನಗತ್ಯ: ಈ ಮಧ್ಯೆ, ಹೈಕೋರ್ಟ್ ಚೆಕ್ಬೌನ್ಸ್ ಪ್ರಕರಣದಲ್ಲಿ ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ದೂರುದಾರರು ಖುದ್ದು ಹಾಜರಿರುವುದು ಅನಿವಾರ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಚೆಕ್ಬೌನ್ಸ್ ಪ್ರಕರಣದಲ್ಲಿ ದೂರುದಾರಾದ ತಾವು ಖುದ್ದು ಹಾಜರಿರದ್ದಕ್ಕೆ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಲಬುರಗಿಯ ಸುಭಾಷ್ ಚೌಕದ ನಿವಾಸಿ ನಾಗರಾಜ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ಏನು ಹೇಳಿದೆ?: ಚೆಕ್ಬೌನ್ಸ್ ಪ್ರಕರಣದ ವಿಚಾರಣೆಗೆ ದೂರುದಾರರು ಹಾಜರಾಗಿಲ್ಲ ಎಂಬ ಕಾರಣ ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸಲು ಸಾಧ್ಯವಿಲ್ಲ. ಆರೋಪಿ ಹೇಳಿಕೆ ದಾಖಲಿಸಿಕೊಳ್ಳುವಾಗ ದೂರುದಾರರು ಖುದ್ದು ಹಾಜರಿರಬೇಕೆಂಬುದೂ ಅನಿವಾರ್ಯವಲ್ಲ. ಆರೋಪಿಯ ಹೇಳಿಕೆ ದಾಖಲಿಸಿಕೊಳ್ಳುವುದು ನ್ಯಾಯಾಲಯದ ಜವಾಬ್ದಾರಿಯಾಗಿರುತ್ತದೆ ಎಂದು ಅಭಿಪ್ರಾಯಟ್ಟಿದೆ.
ಅಲ್ಲದೆ, ಪ್ರಕರಣ ಇತ್ಯರ್ಥಪಡಿಸಬೇಕೆಂಬ ಉದ್ದೇಶದಿಂದ ದೂರುದಾರ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣ ಮುಂದಿಟ್ಟು ದೂರುಗಳನ್ನು ವಜಾಗೊಳಿಸಬಾರದು. ಆದೇಶ ಹೊರಡಿಸುವ ಮುನ್ನ ಪ್ರಕರಣ ಯಾವ ಹಂತದಲ್ಲಿದೆ? ದೂರುದಾರರು ಮತ್ತು ಆರೋಪಿ ಯಾವಾಗ ಹಾಜರಾಗಿದ್ದರು? ದೂರು ಎಷ್ಟು ವರ್ಷಗಳಿಂದ ಬಾಕಿಯಿದೆ? ಪ್ರಕರಣದ ಯಾವ ಸ್ವರೂಪದ್ದಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಅಲ್ಲದೆ, ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಇದೇ ವೇಳೆ ರದ್ದುಪಡಿಸಿದೆ. ಹಾಗೆಯೇ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ದೂರು ರದ್ದುಪಡಿಸಿದ ಹಂತದಿಂದಲೇ ಮತ್ತೆ ವಿಚಾರಣೆ ನಡೆಸಬೇಕು. 2022ರ ಅ.21ರಂದು ಆರೋಪಿ ಮತ್ತು ದೂರುದಾರರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ, ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ನಿರ್ದೇಶಿಸಿದೆ.
2013ರಲ್ಲಿ ಈಶ್ವರ್ ಅವರು ನಾಗರಾಜ್ ಅವರಿಂದ 4.5 ಲಕ್ಷ ರು. ಸಾಲ ಪಡೆದುಕೊಂಡು ಭದ್ರತಾ ಖಾತರಿಯಾಗಿ ಚೆಕ್ ನೀಡಿದ್ದರು. ಆದರೆ, ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ಸಂಬಂಧ ನಾಗರಾಜ್ ದೂರು ದಾಖಲಿಸಿದ್ದರು.