ಆದೇಶ ಪಾಲಿಸಿದ ಸರ್ಕಾರಕ್ಕೆ 5 ಲಕ್ಷ ದಂಡ, ಛೀಮಾರಿ ಹಾಕಿದ ಹೈಕೋರ್ಟ್
ಬೆಂಗಳೂರು, ಜನವರಿ 17: ನ್ಯಾಯಾಲಯದ ಎಲ್ಲ ಆದೇಶಗಳನ್ನು ಪಾಲಿಸದ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್, 5 ಲಕ್ಷ ರೂ. ದಂಡವನ್ನೂ ಸಹ ವಿಧಿಸಿದೆ. ಕೋರ್ಟ್ ಆದೇಶಗಳನ್ನು ಪಾಲಿಸದೆ ಸರ್ಕಾರಿ ಅಧಿಕಾರಿಗಳು ತಮಾಷೆ ಮಾಡುತ್ತಿದ್ದಾರೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ದಾಖಲಾಗಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ದಂಡ ವಿಧಿಸಿದೆ.

ಸರ್ಕಾರದ ಆದೇಶ ಪಾಲನೆ ಮಾಡದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ತಪ್ಪೆಸಗಿದ 6 ಜನ ಅಧಿಕಾರಿಗಳಿಗೆ ದಂಡ ವಿಧಿಸಿ ಮುಂದಿನ ಎರಡು ವಾರಗಳಲ್ಲಿ ದಂಡ ವಸೂಲು ಮಾಡುವಂತೆ ಆದೇಶಿಸಿದೆ.
ತಮಾಷೆ ಸಂಗತಿಯೇ?: ಕಾಲಾವಕಾಶ ಕೋರಿದ ಸರ್ಕಾರಿ ವಕೀಲರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರತಿಯೊಂದು ಪ್ರಕರಣದಲ್ಲಿಯೂ ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಮೂರೂವರೆ ವರ್ಷಗಳಾದರೂ ಒಂದು ಹೈಕೋರ್ಟ್ ಆದೇಶ ಪಾಲನೆ ಮಾಡಲು ಆಗುತ್ತಿಲ್ಲ ಎಂದರೆ ಏನರ್ಥ?. ಸರ್ಕಾರದಲ್ಲಿ ಯಾವ ತಮಾಷೆ ಜರುಗುತ್ತಿದೆ? ಎಂದು ಪ್ರಶ್ನಿಸಿತು.
ಅಲ್ಲದೆ, ಕೋರ್ಟ್ಗಳ ಬಗ್ಗೆ ಸಾಮಾನ್ಯ ಜನರು ಏನು ಮಾತನಾಡುತ್ತಾರೆ? ಎಂಬುದನ್ನು ನೀವು ಯಾವತ್ತಾದರೂ ಕಿವಿಗೊಟ್ಟು ಕೇಳಿದ್ದೀರಾ?. ಕೇಳಿಲ್ಲ ಎಂದಾದರೆ ಹೋಗಿ ಪಾರ್ಕ್ಗಳಲ್ಲಿ ಕೂತು ಕೇಳಿಸಿಕೊಂಡು ಬನ್ನಿ. ಆಗ ನಿಮಗೆ ಗೊತ್ತಾಗುತ್ತದೆ.
ಕೋರ್ಟ್ ಇರುವುದು ಜನರ ಹಕ್ಕುಗಳನ್ನು ಎತ್ತಿ ಹಿಡಿಯಲು ಮತ್ತು ಅವರಿಗೆ ಪರಿಹಾರ ಕೊಡಲು. ಅವರೇನೂ ಬಯಸಿ ಬಯಸಿ ಕೋರ್ಟ್ ಮೆಟ್ಟಿಲೇರುವುದಿಲ್ಲ. ಅಂತಹುದರಲ್ಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಪೀಠ ನೀಡಿದ ಆದೇಶ ಪಾಲನೆ ಮಾಡಲು ನಿಮಗೆ ಆಗುತ್ತಿಲ್ಲ? ಎಂದರೆ ಜನ ಯಾವ ರೀತಿ ನಮ್ಮನ್ನು ಗೌರವಿಸುತ್ತಾರೆ? ಎಂಬುದರ ಕಿಂಚಿತ್ತು ಅರಿವಾದರೂ ನಿಮಗೆ ಇದೆಯಾ? ಎಂದು ತರಾಟೆಗೆ ತೆಗೆದುಕೊಂಡರು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಆದೇಶ ಪಾಲನೆ ಮಾಡಲು ಇನ್ನೂ ಎರಡು ವಾರಗಳ ಸಮಯಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ಪೀಠ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕೋನೇನ ಅಗ್ರಹಾರದ ಅನುದಾನಿತ ಸರ್. ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ ಗ್ರಂಥಪಾಲಕಿ ವಿ. ಎ. ನಾಗಮ್ಮ ತಮಗೆ ಗ್ರಂಥಪಾಲಕರ ದರ್ಜೆಯ ವೇತನ ಮಂಜೂರು ಮಾಡಲು ಕೋರಿದ್ದರು. ರಾಜ್ಯದಲ್ಲಿನ ದ್ವಿತೀಯ ದರ್ಜೆ ಸಹಾಯಕರಾಗಿದ್ದ 250ಕ್ಕೂ ಹೆಚ್ಚು ನೌಕರರು ಗ್ರಂಥಪಾಲಕರ ಹುದ್ದೆಯ ವೇತನ ಶ್ರೇಣಿ ಹೊಂದಿದ್ದು ನನಗೂ ಇದೇ ವೇತನ ಶ್ರೇಣಿ ಅನ್ವಯಿಸಬೇಕು ಎಂದು ಕೋರಿದ್ದರು.
ಈ ಅರ್ಜಿ ಮಾನ್ಯ ಮಾಡಿದ್ದ ಏಕ ಸದಸ್ಯ ಪೀಠ ಅರ್ಜಿದಾರರಾದ ವಿ. ಎ. ನಾಗಮಣಿ ಅವರ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಈ ಆದೇಶ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ನಾಗಮಣಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಹೂಡಿದ್ದರು.












Click it and Unblock the Notifications