ಸುಳ್ಳು ದಾವೆ ಹೂಡಿದ್ದ ಶಿಕ್ಷಕನಿಂದ 1.5 ಲಕ್ಷ ವಸೂಲಿಗೆ ಆದೇಶ
ಬೆಂಗಳೂರು, ಅಕ್ಟೋಬರ್ 15; ಅನಗತ್ಯವಾಗಿ ಸುಳ್ಳು ದೂರು ದಾಖಲಿಸಿದ್ದ ಶಿಕ್ಷಕನಿಂದ 1.5 ಲಕ್ಷ ರೂ. ವಸೂಲಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಬಾಗಲಕೋಟೆಯ ಮುಖ್ಯೋಪಾಧ್ಯಾಯರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್ಸಿ, ಎಸ್ಟಿ) ದೌರ್ಜನ್ಯ ತಡೆ ಕಾಯಿದೆ ಸೇರಿದಂತೆ ಹಲವು ಆರೋಪಗಳಡಿ ದೂರುಗಳನ್ನು ಸಲ್ಲಿಸಿದ್ದ ಚಂದ್ರು ರಾಥೋಡ್ಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ.
ಆತ ಕಾನೂನು ಹೋರಾಟಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 1.5 ಲಕ್ಷ ರೂ. ನೆರವು ಪಡೆದಿದ್ದು, ಇದೀಗ ದೂರುಗಳು ಕ್ಷುಲ್ಲಕ, ಹುರುಳಿಲ್ಲವೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಣ ವಾಪಸ್ ಪಡೆಯವಂತೆ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ.

ಅಲ್ಲದೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಬಾಗಲಕೋಟೆ ಜಿಲ್ಲೆಯ ಮರಡಿ ಮಲ್ಲೇಶ್ವರ ಹೈಸ್ಕೂಲ್ನ ಮುಖ್ಯೋಪಾಧ್ಯಾಯರಾದ ಶಿವಲಿಂಗಪ್ಪ ಬಿ. ಕೆರಕಲಮಟ್ಟಿ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಿದೆ.
ಕೋರ್ಟ್ ಆದೇಶವೇನು?; ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ 1989ರಡಿ ಮುಖ್ಯೋಪಾಧ್ಯಾಯರ ವಿರುದ್ಧ ಶಿಕ್ಷಕರು ಪ್ರಕರಣ ಹೂಡಿದ್ದಾರೆ. ಆದಕ್ಕೆ ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ನೆರವು ನೀಡಿದೆ. ಆದರೆ ಅಂತಹ ನೆರವು ನೀಡುವ ಮೊದಲು ಸರ್ಕಾರ ಯಾರು ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ?. ಏನು?, ಎತ್ತ? ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು ಎಂದು ನ್ಯಾಯಪೀಠ ಆದೇಶಿಸಿದೆ.
ಜತೆಗೆ ಅರ್ಜಿದಾರರ ವಿರುದ್ಧ ಶಿಕ್ಷಕರು ಕ್ರಿಮಿನಲ್ ದೂರು ದಾಖಲಿಸಿರುವುದು ಆನಂತರ ಸಮಾಜ ಕಲ್ಯಾಣ ಇಲಾಖೆಯಿಂದ ನೆರವು ಕೋರಿರುವುದು ದೃಢಪಟ್ಟಿದೆ. ಆದರೆ ಆ ದೂರುಗಳು ನಕಲಿ, ಸುಳ್ಳಿನಿಂದ ಕೂಡಿರುವುದು, ಅವುಗಳು ದುರುದ್ದೇಶದಿಂದ ಕೂಡಿವೆ ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿಸಾರ್ವಜನಿಕ ಹಣದಿಂದ ಪಾವತಿ ಮಾಡಿರುವ 1.5 ಲಕ್ಷ ರೂ.ಗಳನ್ನು ವಾಪಸ್ ಪಡೆಯಲೇಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಕೀಲರು, ರಾಥೋಡ್ಗೆ ಸುಳ್ಳು ಕೇಸುಗಳನ್ನು ದಾಖಲಿಸುವುದೇ ಒಂದು ಪ್ರವೃತ್ತಿಯಾಗಿದೆ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡು ಕೇಸು ದಾಕಲಿಸಿದ್ದಾರೆ ಮತ್ತು ಆ ಸುಳ್ಳು ಕೇಸುಗಳನ್ನು ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ಅದನ್ನು ಮತ್ತೆ ವಸೂಲಿ ಮಾಡಲು ಆದೇಶಿಸಬೇಕೆಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ ಏನು?; ರಾಥೋಡ್ 1988ರ ಡಿಸೆಂಬರ್ 12ರಂದು ಶಿಕ್ಷಕರಾಗಿ ಸೇವೆಗೆ ಸೇರ್ಪಡೆಯಾಗಿದ್ದರು. ಕೆಲವು ದುರ್ನಡತೆಗಳ ಹಿನ್ನೆಲೆಯಲ್ಲಿಅವರನ್ನು 2012 ಸೇವೆಯಿಂದ ವಜಾಗೊಳಿಸಲಾಗಿತ್ತು. 2020ರಲ್ಲಿಹೈಕೋರ್ಟ್ ರಾಥೋಡ್ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಬೇಕು ಹಾಗೂ ಹಿಂಬಾಕಿ ನೀಡಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಿತ್ತು.
ಆದರೆ ಮುಖ್ಯೋಪಾಧ್ಯಾಯರು ತನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು. ಆನಂತರ ತನ್ನಿಂದ 50 ಸಾವಿರ ರೂ. ಕೇಳಿದ್ದರು ಎಂದು ಮತ್ತೊಂದು ದೂರು ನೀಡಿದ್ದರು. ಬಳಿಕ ಜೂನ್ 2020ರಲ್ಲಿಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ತಮ್ಮ ಮೆಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮೂರನೇ ದೂರು ದಾಖಲಿಸಿದ್ದರು. ಈ ಮೂರು ದೂರುಗಳನ್ನು ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ್ದರು ಮತ್ತು ಬೇರೆ ಬೇರೆಯವರನ್ನು ತನ್ನ ಪರ ಸಾಕ್ಷಿಗಳೆಂದು ನಮೂದಿಸಿದ್ದರು.












Click it and Unblock the Notifications