ಹಾನಗಲ್ ನಲ್ಲಿ ಮನುಷ್ಯನ ದುರಾಸೆಗೆ ಕಾಡು ಪ್ರಾಣಿಗಳು ಬಲಿ
ಹಾವೇರಿ, ಅಕ್ಟೋಬರ್ 10: ಕಳೆದ ನಾಲ್ಕು ದಿನಗಳ ಹಿಂದೆ ದುಡ್ಡಿನ ಆಸೆಗಾಗಿ ಚಿರತೆಯ ರುಂಡ ಕತ್ತರಿ ಕಳ್ಳರು ಪರಾರಿಯಾಗಿರುವುದು ವರದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಾಣಿಯನ್ನು ಬೇಟೆಗಾರರು ಬೇಟೆ ಆಡಿದ್ದಾರೆ. ಅದೂ ಮಾಂಸಕ್ಕಾಗಿ!
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೊಂಡೋಜಿ-ವಡ್ಡಗೇರಿ ಅರಣ್ಯ ಪ್ರದೇಶದಲ್ಲಿ ನಾಲ್ಕು ಜನ ಸೇರಿ ಜಿಂಕೆಯನ್ನು ಬೇಟೆಯಾಡಿದ್ದರು. ಖಚಿತ ಮಾಹಿತಿ ಮೇರೆಗೆ ಈ ಬೇಟೆಯ ಬೆನ್ನತ್ತಿದ ಅರಣ್ಯ ಅಧಿಕಾರಿಗಳು ಒಬ್ಬ ಬೇಟಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ದೇವೇಂದ್ರಪ್ಪ 35 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ಇನ್ನುಳಿದ ಮೂವರು ಆರೋಪಿಗಳಾದ ಹನುಮಂತಪ್ಪ, ರವಿ ಮತ್ತು ಸುರೇಶ ಎಂಬುವರು ಪರಾರಿಯಾಗಿದ್ದಾರೆ.
ಜಿಂಕೆಯ ಕೊರಳಿಗೆ ಕೇಬಲ್ ವೈಯರ್ ನಿಂದ ಉರುಳು ಹಾಕಿ ದುಷ್ಕರ್ಮಿಗಳು ಜಿಂಕೆಯನ್ನು ಹತ್ಯೆ ಮಾಡಿದ್ದಾರೆ. ಜಿಂಕೆ ಹತ್ಯೆ ಮಾಡಿ ಚರ್ಮ ಸುಲಿಯುತ್ತಿದ್ದ ವೇಳೆ ಅರಣ್ಯ ಪ್ರದೇಶದಲ್ಲಿ ಆರಣ್ಯಾಧಿಕಾರಿಗಳ ಕೈಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ತಲೆಮರೆಸಿಕೊಂಡ ಮೂರು ಆರೋಪಿಗಳಿಗೆ ಅರಣ್ಯಾಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಹಾನಗಲ್ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ಈ ಪ್ರದೇಶದಲ್ಲಿ ನಿರಂತರವಾಗಿ ಮನುಷ್ಯನ ದುರಾಸೆಗಾಗಿ ಪ್ರಾಣಿಗಳ ಹತ್ಯೆ ನಡೆಯುತಿದೆ. ಇನ್ನಾದರೂ ಅಧಿಕಾರಿಗಳು ಮುಂಜಾಗ್ರತೆಯ ಕ್ರಮ ಕೈಗೊಳ್ಳಲಿ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.