ಶಾಸಕ ಅರಕಲಗೂಡು ಮಂಜು ಪರಿಚಯ
ಹಾಸನ, ಅ.29: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟಕ್ಕೆ ಶಾಸಕರಾದ ಅರಕಲಗೂಡು ಮಂಜು ಅವರು ಮೊದಲ ಬಾರಿಗೆ ಸಚಿವರಾಗಿ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ವಿರುದ್ಧ ಕಳೆದ ಲೋಕಸಭೆ ಚುನಾವಣೆಯಲ್ಲಿಸೋಲು ಕಂಡಿದ್ದ ಎ. ಮಂಜು ಅವರು ರಾಜ್ಯ ಸಚಿವರಾಗಿ ಸಂಪುಟ ಸೇರಲಿದ್ದಾರೆ.
ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸೇರ್ಪಡೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಎ. ಮಂಜು ಅವರು, ಹಾಸನದಲ್ಲಿ ಪಕ್ಷವನ್ನು ಸಂಘಟಿಸುವುದು ಸವಾಲಿನ ಕೆಲಸ. ಅದನ್ನು ಸಮರ್ಥವಾಗಿ ಸಾಧಿಸಿ ಮುನ್ನಡೆಸಿದ್ದೇನೆ. ಜನ ಸ್ನೇಹಿಯಾಗಿ ಸತತವಾಗಿ ಶಾಸಕನಾಗಿ ಆಯ್ಕೆಯಾಗಿ ಜನರಿಗಾಗಿ ದುಡಿದಿದ್ದು, ಈಗ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಸ್ವಾಭಾವಿಕವಾಗಿ ನನಗೆ ಖುಷಿಯಾಗಿದೆ ಎಂದಿದ್ದಾರೆ.

ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಿಷ್ಠೆಯಿಂದ ದುಡಿಯುತ್ತೇನೆ. ನಾನು ಮಂತ್ರಿಯಾಗುವ ಕ್ಷಣಗಳನ್ನು ನೋಡುವ ಭಾಗ್ಯ ನನ್ನ ತಾಯಿಗೆ ಸಿಗಲಿಲ್ಲ ಎಂಬ ಕೊರಗು ನನಗಿದೆ ಎಂದು ಮಂಜು ಭಾವುಕರಾದರು. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಹಾಸನ ಜಿಲ್ಲಾ ಉಸ್ತುವಾರಿ ನೀಡಿದರೆ ಇನ್ನಷ್ಟು ಖುಷಿಯಾಗುತ್ತದೆ ಎಂದರು. [ಶಾಸಕ ಮನೋಹರ್ ತಹಶೀಲ್ದಾರ್ ಪರಿಚಯ]
ಹಾಸನದ ಪ್ರಭಾವಿ ರಾಜಕಾರಣಿ ನಂಜೇಗೌಡರ ಸಂಬಂಧಿಯಾಗಿರುವ ಎ.ಮಂಜು ವಿದ್ಯಾರ್ಥಿ ಸಂಘಟನೆಗಳಲ್ಲಿ ಕೆಲಸ ಮಾಡಿ ಸಿಂಡಿಕೇಟ್ ಸದಸ್ಯರಾಗಿ ಮೂಲತಃ ಬಿಜೆಪಿಯಿಂದ ರಾಜಕೀಯ ಪ್ರವೇಶ ಮಾಡಿದವರು. [ಶಾಸಕ ವಿನಯ್ ಕುಲಕರ್ಣಿ ಪರಿಚಯ]
1999ರಲ್ಲಿ ಅರಕಲಗೂಡು ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆ ನಂತರ ಪಕ್ಷದಿಂದ ವಿರೋಧಿ ಚಟುವಟಿಕೆ ಆರೋಪದ ಮೇಲೆ ಉಚ್ಚಾಟನೆಗೊಂಡಿದ್ದರು. ನಂತರ ಕಾಂಗ್ರೆಸ್ ಸೇರಿ 2004ರಲ್ಲಿ ಸೋಲು ಅನುಭವಿಸಿದ್ದರು. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಸ್ಪರ್ಧಿಸಿ ಸೋತಿದ್ದರು. [ಡಾ.ಜಿ.ಪರಮೇಶ್ವರ ಪರಿಚಯ]

* ಹಾಸನ ಜಿಲ್ಲೆಯ ಕೊಣನೂರಿನಲ್ಲಿ 1958ರ ನವೆಂಬರ್ 1 ರಂದು ಜನನ
* ವಯಸ್ಸು - 57
* ದೇವರಹಟ್ಟಿ ಅಣ್ಣೇಗೌಡ ಹಾಗೂ ಮಂಜುಳಾ ಅವರ ಪುತ್ರ.
* ವಿದ್ಯಾರ್ಹತೆ - ಬಿ.ಎ,ಎಲ್ಎಲ್ ಬಿ
* ಜಾತಿ - ಒಕ್ಕಲಿಗ
* 3 ಬಾರಿ ವಿಧಾನ ಸಭೆಗೆ ಆಯ್ಕೆ(1999, 2008 ಹಾಗೂ 2013)
* 1993ರಲ್ಲಿ ತಂಬಾಕು ಮಂಡಳಿ ಉಪಾಧ್ಯಕ್ಷರಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರಾಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
* ಅರಕಲಗೂಡು ಕ್ಷೇತ್ರದ ಹಾಲಿ ಶಾಸಕ
* ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕಾರ
* ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಮಂಜು ಅವರ ವಿರುದ್ಧ ಐಪಿಸಿ ಸೆಕ್ಷನ್ 354,341, 504 ಹಾಗೂ 506 ರ ಅನ್ವಯ ಪ್ರಕರಣ ದಾಖಲಾಗಿತ್ತು.
* 2008ರ ಅಫಿಡವಿಟ್ ನಂತೆ ಚರಾಸ್ತಿ 60,96,394 ರು, ಸ್ಥಿರಾಸ್ತಿ : 5,40,00,000 ರು, ಸಾಲ : 1,03,89,730 ರು
* 2014ರ ಅಫಿಡವಿಟ್ ನಂತೆ ಮಾರುತಿ ಓಮ್ನಿ, ಟೊಯೋಟಾ ಇನ್ನೋವಾ, ಫೋರ್ಡ್ ಐಕಾನ್, ಟ್ರ್ಯಾಕ್ಟರ್ ಹಾಗೂ ಒಂದು ದ್ವಿಚಕ್ರ ವಾಹನ ಹೊಂದಿದ್ದಾರೆ. 5.5 ಲಕ್ಷ ರು ಬೆಲೆಯ ಚಿನ್ನಾಭರಣ, ಪತ್ನಿ ಬಳಿ 16 ಲಕ್ಷ ರು ಬೆಲೆ ಬಾಳುವ ಚಿನ್ನಾಭರಣ, 75,000 ರು ಮೌಲ್ಯದ ಬೆಳ್ಳಿ ಪದಾರ್ಥಗಳಿವೆ.
* ಅರಕಲಗೂಡಿನ ಹನ್ಯಾಳು ಗ್ರಾಮ, ಬೆಂಗಳೂರಿನ ಲಾವೆಲ್ಲೆ ರಸ್ತೆ, ಸೋಮವಾರ ಪೇಟೆ ತಾಲೂಕಿನಲ್ಲಿ ಮನೆ, ನಿವೇಶನ ಹೊಂದಿದ್ದಾರೆ.
* ಒಟ್ಟಾರೆ ಮಂಜು ಅವರು 7.71 ಕೋಟಿ ರು ಹೊಂದಿದ್ದಾರೆ. ಅವರ ಪತ್ನಿ ಬಳಿ 8.81 ಕೋಟಿ ರು ಆಸ್ತಿ ಇದೆ.
ಪರಿಷತ್ ಸದಸ್ಯ ಜಿ.ಪರಮೇಶ್ವರ್, ಶಾಸಕರಾದ ಮನೋಹರ್ ತಹಶೀಲ್ದಾರ್, ಎ.ಮಂಜು, ವಿನಯ್ ಕುಲಕರ್ಣಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಲ್ವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಈ ನಾಲ್ವರಿಗೂ ರಾಜ್ಯಪಾಲ ವಿ.ಆರ್.ವಾಲಾ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.












Click it and Unblock the Notifications