Get Updates
Get notified of breaking news, exclusive insights, and must-see stories!

BREAKING: ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ; ಮಠದ ಟ್ರಸ್ಟಿಗಳಿಂದ ನಿರ್ಧಾರ

ದಾವಣಗೆರೆ: ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಕಳೆದ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಸ್ಫೋಟಗೊಂಡಿದೆ. ಸೋಮವಾರ (ಇಂದು) ನಡೆದ ಮಹತ್ವದ ಸಭೆಯಲ್ಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲು ಟ್ರಸ್ಟಿಗಳ ಮಂಡಳಿ ನಿರ್ಣಯ ಕೈಗೊಂಡಿದೆ. 'ಲೆಕ್ಕ ಕೊಡಿ' ಅಭಿಯಾನದ ಬೆನ್ನಲ್ಲೇ ಈ ನಿರ್ಧಾರ ಹೊರಬಂದಿರುವುದು ಭಾರಿ ಸಂಚಲನ ಮೂಡಿಸಿದೆ.

ಮಠದ ಆವರಣದಲ್ಲಿ ನಡೆದ ಧರ್ಮದರ್ಶಿ ಸಮಿತಿಯ ಮಹತ್ವದ ಸಭೆಯಲ್ಲಿ ಸ್ವಾಮೀಜಿಗಳ ಉಚ್ಚಾಟನೆ ಕುರಿತು ಚರ್ಚೆ ನಡೆದಿದೆ. ಒಟ್ಟು 15 ಸದಸ್ಯರಿರುವ ಧರ್ಮದರ್ಶಿ ಮಂಡಳಿಯಲ್ಲಿ 12 ಸದಸ್ಯರು ಸ್ವಾಮೀಜಿಗಳನ್ನು ಪೀಠದಿಂದ ತೆಗೆದುಹಾಕಲು ಸಹಮತ ವ್ಯಕ್ತಪಡಿಸಿದ್ದಾರೆ. ಮಠದ ಆಡಳಿತ ಮತ್ತು ಆರ್ಥಿಕ ವಿಚಾರಗಳ ಕುರಿತು ಭಕ್ತರು ನಡೆಸುತ್ತಿದ್ದ 'ಲೆಕ್ಕ ಕೊಡಿ' ಹೋರಾಟದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Harihara Panchamasali Peetha

ಮಠದ ಆವರಣದಲ್ಲಿ ಬಿಗುವಿನ ವಾತಾವರಣ

ಇಂದು ಬೆಳಿಗ್ಗೆಯಿಂದಲೇ ಮಠದ ಧರ್ಮದರ್ಶಿಗಳು ಮತ್ತು ಭಕ್ತರ ನಡುವೆ ವಾಕ್ಸಮರ ಹಾಗೂ ಸಂಘರ್ಷ ಉಂಟಾಗಿತ್ತು. ಮಠದ ಆಡಳಿತ ವೈಖರಿಯ ವಿರುದ್ಧ ಆಕ್ರೋಶಗೊಂಡ ಭಕ್ತರು ಮಠದ ಒಳಗೆ ಪ್ರವೇಶಿಸಲು ಯತ್ನಿಸಿದಾಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರು ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂಬ ಮುನ್ನೆಚ್ಚರಿಕೆಯಿಂದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಮಠದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಗೇಟ್ ಬಳಿಯೇ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಉಚ್ಚಾಟನೆಗೆ ಕಾರಣವೇನು?

ಕಳೆದ ಕೆಲವು ದಿನಗಳಿಂದ ಮಠದ ಆಸ್ತಿ ಮತ್ತು ದೇಣಿಗೆಯ ಲೆಕ್ಕಪತ್ರಗಳನ್ನು ಬಹಿರಂಗಪಡಿಸಬೇಕೆಂದು ಭಕ್ತರು ಆಗ್ರಹಿಸುತ್ತಿದ್ದರು. ಈ 'ಲೆಕ್ಕ ಕೊಡಿ' ಅಭಿಯಾನವು ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಧರ್ಮದರ್ಶಿ ಮಂಡಳಿಯು ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಪಂಚಮಸಾಲಿ ಸಮುದಾಯದಲ್ಲಿ ಮತ್ತು ಧಾರ್ಮಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿದ್ದು, ಮುಂದಿನ ಪೀಠಾಧಿಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

ವಚನಾನಂದ ಶ್ರೀಗಳು ಹರಿಹರ ಪೀಠಾರೋಹಣ ಮಾಡುವ ಸಂದರ್ಭದಲ್ಲಿ ಬೆಂಗಳೂರಿನ ತಮ್ಮ 'ಶ್ವಾಸ ಯೋಗ ಪೀಠ'ವನ್ನು ತ್ಯಜಿಸುವುದಾಗಿ ಭರವಸೆ ನೀಡಿದ್ದರು. ಈ ಸಂಬಂಧ ಟ್ರಸ್ಟ್ ವತಿಯಿಂದ ಈಗಾಗಲೇ ಸುಮಾರು 6 ಬಾರಿ ಗಡುವು ನೀಡಲಾಗಿತ್ತು. ಆದರೂ ಶ್ರೀಗಳು ಶ್ವಾಸ ಪೀಠವನ್ನು ತ್ಯಜಿಸದ ಕಾರಣ, 15 ಮಂದಿ ಟ್ರಸ್ಟಿಗಳ ಪೈಕಿ 13 ಮಂದಿ ಶ್ರೀಗಳನ್ನು ಪೀಠದಿಂದ ತೆಗೆದುಹಾಕಲು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.

ಶ್ರೀಗಳು ತಿಂಗಳಲ್ಲಿ ಕೇವಲ ಒಂದೆರಡು ದಿನ ಮಾತ್ರ ಮಠದಲ್ಲಿ ಇರುತ್ತಾರೆ. ಮಠವನ್ನು 'ಗೆಸ್ಟ್‌ಹೌಸ್‌' ರೀತಿ ಬಳಸಲು ಬಿಡುವುದಿಲ್ಲ ಎಂದು ಟ್ರಸ್ಟ್‌ನವರು ಆರೋಪಿಸಿದ್ದರು. ಮಠದ ಒಳಗೆ ಟ್ರಸ್ಟಿಗಳ ಸಭೆ ನಡೆಯುತ್ತಿದ್ದರೆ, ಹೊರಗಡೆ ನೂರಾರು ಭಕ್ತರು 'ಲೆಕ್ಕ ಕೊಡಿ' ಅಭಿಯಾನ ನಡೆಸಿದರು. ಮಠದ ಆಸ್ತಿಪಾಸ್ತಿ ಮತ್ತು ದೇಣಿಗೆಯ ಲೆಕ್ಕಪತ್ರಗಳನ್ನು ಬಹಿರಂಗಪಡಿಸಬೇಕೆಂದು ಭಕ್ತರು ಪಟ್ಟು ಹಿಡಿದರು. ಈ ವೇಳೆ ಮಠದ ಆವರಣದಲ್ಲಿ ಭಕ್ತರು ಮತ್ತು ಆಡಳಿತ ಮಂಡಳಿಯ ನಡುವೆ ವಾಕ್ಸಮರ ನಡೆಯಿತು.

ಪರಿಸ್ಥಿತಿ ಕೈಮೀರುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸದ್ಯದ ಮಟ್ಟಿಗೆ ವಚನಾನಂದ ಶ್ರೀಗಳ ಉಚ್ಚಾಟನೆಗೆ ಟ್ರಸ್ಟಿಗಳು ನಿರ್ಣಯ ಕೈಗೊಂಡಿರುವುದು ಸಮುದಾಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+