'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ
ಕನ್ನಡ ಚಿತ್ರರಂಗದ ಅಪ್ರತಿಮ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ 'ಕೋಟಿಗೊಬ್ಬ' ಈಗ ಮತ್ತೆ ಬೆಳ್ಳಿಪರದೆಗೆ ಮರಳಿದೆ. ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದಿದ್ದರೂ, ಅಭಿಮಾನಿಗಳಲ್ಲಿ ಅಂದಿನ ಅದೇ ಉತ್ಸಾಹ ಮತ್ತು ಕ್ರೇಜ್ ಮನೆಮಾಡಿದೆ. ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆಯಾಗಿದ್ದು, ಥಿಯೇಟರ್ಗಳ ಎದುರು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕಟೌಟ್ಗಳಿಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ.
10 ಸಾವಿರ ಜನರಿಗೆ ಅನ್ನದಾನದ ವ್ಯವಸ್ಥೆ
ಕೇವಲ ಸಿನಿಮಾ ನೋಡಿ ಸಂಭ್ರಮಿಸುವುದು ಮಾತ್ರವಲ್ಲದೆ, ವಿಷ್ಣುದಾದ ಅವರ ಮೇಲಿರುವ ಅಭಿಮಾನಕ್ಕಾಗಿ ಅಭಿಮಾನಿಗಳು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮರು ಬಿಡುಗಡೆಯ ಖುಷಿಯಲ್ಲಿ ಭಾನುವಾರ (ಏಪ್ರಿಲ್ 12) ಸುಮಾರು 10 ಸಾವಿರ ಜನರಿಗೆ ಬೃಹತ್ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶೇಷವೆಂದರೆ, ಅಭಿಮಾನಿಗಳಿಗಾಗಿ ವೆಜ್ (ಸಸ್ಯಹಾರಿ) ಮತ್ತು ನಾನ್ ವೆಜ್ (ಮಾಂಸಹಾರಿ) ಎರಡೂ ವಿಧದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

'ಕೋಟಿಗೊಬ್ಬ' ಮರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ, ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳು ಹಬ್ಬದಂತಹ ವಾತಾವರಣ ನಿರ್ಮಿಸಿದ್ದಾರೆ. ಕೇವಲ ಸಿನಿಮಾ ಪ್ರದರ್ಶನ ಮಾತ್ರವಲ್ಲದೆ, ನೆಚ್ಚಿನ ನಟನ ಸ್ಮರಣಾರ್ಥವಾಗಿ ಅಭಿಮಾನಿಗಳಿಗೆ ವಿಶೇಷ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಚಿತ್ರದ ಮರು ಬಿಡುಗಡೆಯ ಪ್ರಯುಕ್ತ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿ ಸಂಘಟನೆಗಳ ವತಿಯಿಂದ ಅನ್ನದಾನ ಸೇವೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರವೂ ಅಭಿಮಾನಿಗಳಿಗೆ ಚಿಕನ್ ಊಟ ಮತ್ತು ಲಾಡು ವಿತರಣೆ ನಡೆದಿದ್ದು, ಭಾನುವಾರ ಮಧ್ಯಾಹ್ನ 12:30ಕ್ಕೆ ವಿಶೇಷವಾಗಿ ಗೀ ರೈಸ್, ಮಟನ್ ಕುರ್ಮಾ ಮತ್ತು ಲಾಡು ಹಂಚಲಾಗುವುದು.
ಈ ಬೃಹತ್ ಕಾರ್ಯಕ್ರಮದ ಉಸ್ತುವಾರಿಯನ್ನು ಎಸ್ ರಘು, ಅಜಯ್ ಕುಮಾರ್, ಜಿ.ವಿ. ಮೂರ್ತಿ (ಮೀಸೆ), ಜಾನಕಿವರ್ಧನ್ ಮತ್ತು ರಂಗಸ್ವಾಮಿ ಕೆ. ಅವರು ವಹಿಸಿಕೊಂಡಿದ್ದಾರೆ. ಸಕಲ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ವಿನಂತಿಸಿದ್ದಾರೆ. ವಿಷ್ಣುವರ್ಧನ್ ಅವರ ಮೇಲಿರುವ ಪ್ರೀತಿ ಮತ್ತು ಗೌರವಕ್ಕಾಗಿ ನಾವು ಈ ಕಾರ್ಯ ಮಾಡುತ್ತಿದ್ದೇವೆ. ಅವರ ನೆನಪು ನಮಗೆ ಯಾವಾಗಲೂ ಶಕ್ತಿ ನೀಡುತ್ತದೆ ಎಂದು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, 'ಕೋಟಿಗೊಬ್ಬ' ಮರು ಬಿಡುಗಡೆಯು ಕನ್ನಡ ಚಿತ್ರರಂಗದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಬೃಹತ್ ಕಟೌಟ್ ನಿಲ್ಲಿಸಿ ಸಂಭ್ರಮ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದ್ದ ಡಾ. ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಸಿನಿಮಾ ಏಪ್ರಿಲ್ 10ರಂದು ಮರು ಬಿಡುಗಡೆಯಾಗಿದ್ದು, ರಾಜಧಾನಿಯ ಪ್ರಸನ್ನ ಚಿತ್ರಮಂದಿರದ ಎದುರು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೆಚ್ಚಿನ ನಟನನ್ನು ಮತ್ತೆ ಬೆಳ್ಳಿಪರದೆಯ ಮೇಲೆ ನೋಡಲು ಅಭಿಮಾನಿಗಳು, ಚಿತ್ರಮಂದಿರದ ಆವರಣದಲ್ಲಿ ಸಾಹಸಸಿಂಹನ ಬೃಹತ್ ಕಟೌಟ್ ನಿಲ್ಲಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.
ಮರು ಬಿಡುಗಡೆಯ ಮೊದಲ ದಿನವೇ ಚಿತ್ರಮಂದಿರದ ಎದುರು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಗಳು ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾದರೂ ವಿಷ್ಣುದಾದಾ ಅವರ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಪ್ರಸನ್ನ ಚಿತ್ರಮಂದಿರದ ಎದುರು ನೆರೆದಿದ್ದ ಜನಸಾಗರವೇ ಸಾಕ್ಷಿಯಾಗಿತ್ತು. ಕೇವಲ ಸಿನಿಮಾ ಪ್ರದರ್ಶನ ಮಾತ್ರವಲ್ಲದೆ, ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಇಂದು ಪ್ರಸನ್ನ ಚಿತ್ರಮಂದಿರದಲ್ಲಿ ಏಪ್ರಿಲ್ ಹತ್ತರಂದು ಮರು ಬಿಡುಗಡೆಯಾಗುತ್ತಿರುವ ಕೋಟಿಗೊಬ್ಬ ಚಿತ್ರಕ್ಕೆ ಬೃಹತ್ ಕಟೌಟ್ ನಿಲ್ಲಿಸಿ ಸಂಭ್ರಮಿಸಿದ ಅಭಿಮಾನಿಗಳು.
— 𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@DrVssOfficial) April 6, 2026
ಕೋಟಿಗೊಬ್ಬನ ಅಭಿಮಾನಿಗಳ ಸಂಭ್ರಮ pic.twitter.com/xs20PnSd0M












Click it and Unblock the Notifications