ರಾಜಕೀಯ ದಂಗೆಯಲ್ಲಿ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ಅಕ್ಷರಶಃ ದುರಂತ ನಾಯಕ
ಆಪರೇಷನ್ ಕಮಲದ ಮೂಲಕ, ಗೆದ್ದ ಪಕ್ಷಕ್ಕೆ ನಿಯತ್ತು ತೋರದೇ, ಬಿಜೆಪಿ ಸೇರಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣರಾದ ಎಲ್ಲಾ ಮುಖಂಡರ ಪೈಕಿ, ಒಬ್ಬರನ್ನು ಬಿಟ್ಟು, ಎಲ್ಲರೂ ದಡ ಸೇರಿದ್ದಾಗಿದೆ.
ಸಿಎಂ ಬಿಎಸ್ವೈ ಏನು ಭರವಸೆಯನ್ನು ನೀಡಿದ್ದರೋ ಅದನ್ನು ಈಡೇರಿಸಿದ್ದಾರೆ ಎನ್ನುವ ಖುಷಿಯಲ್ಲಿದ್ದಾರೆ ಈ ಮುಖಂಡರುಗಳು. ಆದರೆ, ಉಪಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್ತಿಗೂ ಟಿಕೆಟ್ ಸಿಗದೇ, ಅಕ್ಷರಸಃ ಮೂಲೆಗುಂಪು ಆಗುವತ್ತ ಸಾಗುತ್ತಿದ್ದಾರೆ ಹಳ್ಳಿಹಕ್ಕಿ ಎಚ್.ವಿಶ್ವನಾಥ್.
ದೇವೇಗೌಡರನ್ನು ಗೌರವಿಸುತ್ತಾ, ಎಚ್.ಡಿ.ಕುಮಾರಸ್ವಾಮಿಯವರನ್ನು ಜರಿಯುತ್ತಾ ಎಚ್.ವಿಶ್ವನಾಥ್, ಜೆಡಿಎಸ್ ತೊರೆದಾಗ, ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಯಡಿಯೂರಪ್ಪನವರಿಗೆ ಆಶಾಕಿರಣವಾಗಿ ಕಂಡಿದ್ದು ವಿಶ್ವನಾಥ್.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿರುದ್ದ ಬಂಡಾಯ ಎದ್ದಿದ್ದ ಎಲ್ಲಾ ಅತೃಪ್ತ ಶಾಸಕರಿಗೆ ಲೀಡರ್ ನಂತೆ ಇದ್ದಿದ್ದ ಎಚ್.ವಿಶ್ವನಾಥ್, ಈಗ ಪರಿಷತ್ ಸ್ಥಾನಕ್ಕೆ ಕಾಡಿಬೇಡುವಂತ ಪರಿಸ್ಥಿತಿ ಬಂದಿರುವುದು ಅವರ ಸ್ವಯಂಕೃತ ಅಪರಾಧವೇ?

ಎಂ.ಟಿ.ಬಿ ನಾಗರಾಜ್ ಮತ್ತು ಆರ್.ಶಂಕರ್
ಉಪಚುನಾವಣೆಯಲ್ಲಿ ಸೋತ ಎಂ.ಟಿ.ಬಿ ನಾಗರಾಜ್ ಮತ್ತು ಚುನಾವಣೆ ತ್ಯಾಗ ಮಾಡಿದ್ದ ಆರ್.ಶಂಕರ್ ಅವರಿಗೆ ಬಿಜೆಪಿಯ ಟಿಕೆಟ್ ಒಲಿದಿದೆ. ಅವರು ಸದಸ್ಯರಾಗುವುದು ಗ್ಯಾರಂಟಿ, ಸಚಿವರಾಗುವುದೂ ನಿಶ್ಚಯ. ಆದರೆ, ಎಚ್.ವಿಶ್ವನಾಥ್ ಗೆ ಮತ್ತೆ ನಿರಾಸೆಯಾಗಿದೆ. ನಾಮನಿರ್ದೇಶನದ ಮೂಲಕವಾದರೂ ನನ್ನನ್ನು ಪರಿಷತ್ತಿಗೆ ಆರಿಸಿ ಎಂದು ಅವಲತ್ತು ತೋಡಿಕೊಂಡಿದ್ದಾರೆ. ನಾನೊಬ್ಬ ಸಾಹಿತಿ ಆ ಕೋಟಾದಲ್ಲಾದರೂ ನನ್ನನ್ನು ಪರಿಗಣಿಸಿ ಎಂದು ಯಡಿಯೂರಪ್ಪನವರ ಬಳಿ ಮನವಿ ಮಾಡಿದ್ದಾರೆ. ಆದರೆ, ಬಿಎಸ್ವೈ ಕೈಯಲ್ಲಿ ಏನಿದೆ?

ಬಿಜೆಪಿ ಅಧಿಕಾರಕ್ಕೆ ಬರಲು ಕಾರಣೀಕರ್ತರಲ್ಲಿ ಒಬ್ಬರಾದ ಎಚ್.ವಿಶ್ವನಾಥ್
ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಕರ್ತರಲ್ಲಿ ಒಬ್ಬರಾದ ಎಚ್.ವಿಶ್ವನಾಥ್ ವಿರುದ್ದ, ಬಿಜೆಪಿ ಹೈಕಮಾಂಡ್ ಇಷ್ಟು ಕಠಿಣ ನಿಲುವು ತಾಳಲು ಕಾರಣವಾದ ಅಂಶ ಯಾವುದು? ಮಂತ್ರಿ ಸ್ಥಾನ ಸಿಗದಿದ್ದರೂ, ತಾಳ್ಮೆಯಿಂದ ಕಾಯುತ್ತಿದ್ದ ಎಂಟಿಬಿ ಮತ್ತು ಆರ್.ಶಂಕರ್ ಏನು ಬೇಕೋ ಅದನ್ನು ಸಾಧಿಸಿ ಕೊಂಡಿದ್ದಾರೆ. ಆದರೆ, ವಿಶ್ವನಾಥ್ ಬಹಿರಂಗವಾಗಿ ನೀಡುತ್ತಿದ್ದ ಹೇಳಿಕೆಗಳು ಅವರಿಗೆ ಮುಳುವಾಯಿತು ಎನ್ನುವ ಮಾತೂ ಕೇಳಿ ಬರುತ್ತಿದೆ.

ನನ್ನ ಜೊತೆಗೆ ಬಂದವರು ಎಲ್ಲರೂ ಈಜಿ ದಡ ಸೇರಿದ್ದಾರೆ
"ನಾನು ಬಿಜೆಪಿಗೆ ಹೊಸಬ, ನನಗೆ ಬಿಜೆಪಿಯ ಆಳ ಅಗಲ ಗೊತ್ತಿಲ್ಲ. ನನ್ನ ಜೊತೆಗೆ ಬಂದವರು ಎಲ್ಲರೂ ಈಜಿ ದಡ ಸೇರಿದ್ದಾರೆ. ನಾನು ಇನ್ನು ಸೇರಿಲ್ಲ. ನಾನು ಹಿಂದುಳಿದ ವರ್ಗದ ಹಿರಿಯ ನಾಯಕ. ಯಾಕೆ ಟಿಕೆಟ್ ತಪ್ಪಿಸಿದ್ದಾರೆ ಗೊತ್ತಿಲ್ಲ. ಇದರಿಂದ ನಾನು ಹತಾಶನಾಗಿಲ್ಲ. ನನಗೆ, ಈಗಲೂ ಯಡಿಯೂರಪ್ಪನವರ ಮೇಲೆ ಭರವಸೆ ಇದೆ" ಎನ್ನುವ ವಿಶ್ವಾಸವನ್ನೇನೋ ಎಚ್.ವಿಶ್ವನಾಥ್ ವ್ಯಕ್ತ ಪಡಿಸಿದ್ದಾರೆ. ಆದರೆ?

ಡಿಸಿಎಂ ಡಾ. ಅಶ್ವಥ್ ನಾರಾಯಣ್ ಸೂಕ್ಷ್ಮವಾಗಿ ಹೇಳಿದ್ದರು
ವಿಶ್ವನಾಥ್ ಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ವಿಚಾರ ಬಿಜೆಪಿಯ ಕೋರ್ ಕಮಿಟಿಯ ಸದಸ್ಯರಿಗೂ ಗೊತ್ತಿತ್ತು. ಆದರೆ, ರಾಜ್ಯ ಘಟಕದಿಂದ ಎಡವಟ್ಟು ಆಗಬಾರದು ಎನ್ನುವ ಕಾರಣಕ್ಕಾಗಿ, ದೆಹಲಿಗೆ ವಿಶ್ವನಾಥ್ ಹೆಸರನ್ನೂ ಸೇರಿ ಶಿಫಾರಸು ಕಳುಹಿಸಿತ್ತು. ಡಿಸಿಎಂ ಡಾ. ಅಶ್ವಥ್ ನಾರಾಯಣ್, ಆಪರೇಷನ್ ಕಮಲದಿಂದ ಬಂದ ಎಲ್ಲರಿಗೂ ಟಿಕೆಟ್ ಭರವಸೆಯನ್ನು ನೀಡಿರಲಿಲ್ಲ ಎಂದು ಸೂಕ್ಷ್ಮವಾಗಿ ಮುನ್ಸೂಚನೆಯನ್ನೂ ನೀಡಿದ್ದರು.

ರಾಜಕೀಯ ದಂಗೆಯಲ್ಲಿ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ಏಕಾಂಗಿ
ಆದರೆ, ಯಡಿಯೂರಪ್ಪ ಅಧಿಕಾರಕ್ಕೆ ಬರಲು ಕಾರಣವಾದ ರಾಜಕೀಯ ದಂಗೆಯಲ್ಲಿ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ಏಕಾಂಗಿಯಾಗಿದ್ದಾರೆ. ಗೌರವಯುತವಾಗಿ ತಮ್ಮ ರಾಜಕೀಯ ಜೀವನ ಮುಗಿಸಲು ಬಯಸಿದ್ದ ಎಚ್.ವಿಶ್ವನಾಥ್ ಈಗ ನಾಮ ನಿರ್ದೇಶನದ ಮೂಲಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಎಂದು ಬಿಎಸ್ವೈ ಹಿಂದೆ ಬಿದ್ದಿದ್ದಾರೆ. ಸದ್ಯದ ಮಟ್ಟಿಗೆ ಎಚ್.ವಿಶ್ವನಾಥ್ ದುರಂತ ನಾಯಕ. ರಾಜಕೀಯ ನಿಂತ ನೀರಲ್ಲ ಎನ್ನುವ ನಿರ್ಧಾರಕ್ಕೆ ಎಚ್.ವಿಶ್ವನಾಥ್ ಬರುತ್ತಾರೋ, ಕಾದು ನೋಡಬೇಕಿದೆ..












Click it and Unblock the Notifications