ಗುರು ರಾಘವೇಂದ್ರ ಬ್ಯಾಂಕ್ ವಂಚನೆ: 43.32 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು
ನವದೆಹಲಿ, ಸೆಪ್ಟೆಂಬರ್ 19: ಬೆಂಗಳೂರನ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) 43.32 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ನಿಯಮದಡಿ ಸಹಕಾರ ಬ್ಯಾಂಕ್ನ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಮತ್ತು ಶ್ರೀ ಗುರು ಸಾರ್ವಭೌಮ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ನ ಅಧ್ಯಕ್ಷ, ಉಪಾಧ್ಯಕ್ಷ, ಮಾಜಿ ಸಿಇಒ, ಹಾಲಿ ಸಿಇಒ ಹಾಗೂ ಅವರ ಸಹವರ್ತಿಗಳಿಗೆ ಸೇರಿದ ಬ್ಯಾಂಕ್ ಖಾತೆಯ ಹಣ ಹಾಗೂ ಸ್ಥಿರ ಠೇವಣಿಗಳ ರೂಪದಲ್ಲಿ 7.16 ಕೋಟಿ ರೂ.ದಷ್ಟು ಚರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
38.16 ಕೋಟಿ ರೂ. ಮೌಲ್ಯದ 29 ಸ್ಥಿರ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದು ಕೃಷಿ ಭೂಮಿ, ನಿವಾಸಿ ಅಪಾರ್ಟ್ಮೆಂಟ್, ಕೆ. ರಾಮಕೃಷ್ಣ, ದಿ. ಟಿಎಸ್ ಸತ್ಯನಾರಾಯಣ, ದಿ. ಎಂ.ವಿ. ಮಯ್ಯ, ಸಂತೋಷ್ ಕುಮಾರ್ ಎ ಮತ್ತು ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಮತ್ತು ಶ್ರೀ ಗುರು ಸಾರ್ವಭೌಮ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ನ ಇತರೆ ವಿವಿಧ ಉದ್ಯೋಗಿಗಳ ಹೆಸರಿನಲ್ಲಿರುವ ಮನೆಗಳನ್ನು ಒಳಗೊಂಡಿದೆ. ಇವರೆಲ್ಲರೂ ಬೆಂಗಳೂರು ಹಾಗೂ ಬೇರೆಡೆಯ ನಿವಾಸಿಗಳಾಗಿದ್ದಾರೆ. ಮುಂದೆ ಓದಿ.

ಟಿಡಿಎಸ್ ತಪ್ಪಿಸುವ ಉದ್ದೇಶ
ಕೆ. ರಾಮಕೃಷ್ಣ ಮತ್ತು ದಿವಂಗತ ಟಿ.ಎಸ್. ಸತ್ಯನಾರಾಯಣ ಈ ಎರಡೂ ಸಹಕಾರ ಬ್ಯಾಂಕುಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದರು. ಟಿಡಿಎಸ್ ಪಾವತಿಯನ್ನು ತಡೆಯುವ ಉದ್ದೇಶದಿಂದ 2015ರಲ್ಲಿ ಈ ಬ್ಯಾಂಕ್ಗಳನ್ನು ಸ್ಥಾಪಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಕೋಟ್ಯಂತರ ರೂ ವರ್ಗ
ಆದಾಯ ತೆರಿಗೆ ಕಾಯ್ದೆಯಡಿ ಈ ಸಹಕಾರ ಬ್ಯಾಂಕುಗಳ ಟಿಡಿಎಸ್ ಪಾವತಿ ಮಾಡಬೇಕಿದ್ದವು. 2016-2019ರ ಅವಧಿಯಲ್ಲಿ ಶ್ರೀ ಗುರು ಸಾರ್ವಭೌಮ ಕ್ರೆಡಿಟ್ ಕೋ ಆಪರೇಟಿವ್ ಲಿ.ದಿಂದ ಬ್ಯಾಂಕ್ಗೆ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾಯಿಸಲಾಗಿತ್ತು.

1,500 ಕೋಟಿ ಸಂಗ್ರಹ
ಎನ್ಪಿಎ ಮೌಲ್ಯವನ್ನು ತಗ್ಗಿಸಲು ಬ್ಯಾಂಕ್ ಎನ್ಪಿಎ ಖಾತೆಗಳಿಗೆ ಸೊಸೈಟಿಯಿಂದ ಹಣವನ್ನು ವರ್ಗಾವಣೆ ಮಾಡಿರುವುದಕ್ಕೆ ಅಧ್ಯಕ್ಷ ಹಾಗೂ ಎಂವಿ ಮಯ್ಯ ಹೊಣೆಗಾರರಾಗಿದ್ದಾರೆ. ಬೆಂಗಳೂರು ಪೊಲೀಸರಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಇ.ಡಿ. ತನಿಖೆ ನಡೆಸುತ್ತಿದೆ. ಆರೋಪಿಗಳು ಅಪಾರ ಸಂಖ್ಯೆಯ ಠೇವಣಿದಾರರಿಂದ 1,500 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.
Recommended Video

ಕೃತಕ ಸಾಲ ಖಾತೆ ಸೃಷ್ಟಿ
ಸೊಸೈಟಿಯ ಮಾಜಿ ಸಿಇಒ, ದಿವಂಗತ ಎಂ.ವಿ. ಮಯ್ಯ ಅವರು, ಬ್ಯಾಂಕ್ ಮತ್ತು ಸೊಸೈಟಿಯ ಹಣವನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ತಮ್ಮ ಹೆಸರಿನಲ್ಲಿ ಸ್ಥಿರ ಆಸ್ತಿಗಳನ್ನು ಖರೀದಿಸಿದ್ದರು. ಬ್ಯಾಂಕ್ನ ಉದ್ಯೋಗಿಗಳು ಮತ್ತು ಸೊಸೈಟಿ ಕೃತಕ ಸಾಲ ಖಾತೆಗಳನ್ನು ಸೃಷ್ಟಿಸುವ ಮೂಲಕ ಹಾಗೂ ತಮ್ಮ ಮತ್ತು ತಮ್ಮ ಸಹವರ್ತಿಗಳ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸುವ ಮೂಲಕ ಹಣವನ್ನು ಬೇರೆ ವರ್ಗಾಯಿಸಿದ್ದರು ಎಂದು ಇ.ಡಿ. ಹೇಳಿದೆ.












Click it and Unblock the Notifications