ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಧಕ್ಕೆಯಿಲ್ಲ: ಸರ್ಕಾರದ ಸ್ಪಷ್ಟನೆ
ಬೆಂಗಳೂರು, ಫೆಬ್ರವರಿ 3: ಕರ್ನಾಟಕದಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ 9,800ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ವರದಿ ವಸ್ತುಸ್ಥಿತಿಗೆ ದೂರವಾಗಿದೆ,' ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಹೇಳಿದ್ದಾರೆ.
ಪತ್ರಿಕೆಗಳ ವರದಿಗೆ ಸಂಬಂಧಿಸಿದಂತೆ ಗುರುವಾರ ಸ್ಪಷ್ಟನೆ ನೀಡಿರುವ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಈವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದರು.
ಅತಿಥಿ ಉಪನ್ಯಾಸಕರ ನೇಮಕ: 27ರಿಂದ ಆನ್ಲೈನ್ ಕೌನ್ಸೆಲಿಂಗ್
14,000 ಅತಿಥಿ ಉಪನ್ಯಾಸಕರ ಪೈಕಿ 10,600 ಅತಿಥಿ ಉಪನ್ಯಾಸಕರನ್ನು ಈಗ ಕಾರ್ಯಭಾರ ಮತ್ತು ವೇತನ ಎರಡನ್ನೂ ಸೂಕ್ತವಾಗಿ ನಿಗದಿಪಡಿಸಿ ನೇಮಿಸಿಕೊಳ್ಳಲಾಗುತ್ತಿದೆ. ವಾಸ್ತವ ಹೀಗಿರುವಾಗ 9,881 ಮಂದಿ ಕೆಲಸ ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ? ಎಂದಿದ್ದಾರೆ.
ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾನದಂಡ
ಕರ್ನಾಟಕದಲ್ಲಿ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯಲ್ಲಿ ಸೇವಾ ಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಮೂರನ್ನೂ ಸಮಾನವಾಗಿ ಪರಿಗಣಿಸಲಾಗಿದೆ. ನೇಮಕಾತಿಯಲ್ಲಿ ಇವರಿಗೆ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ನಿಯಮಾನುಸಾರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುತ್ತಿಲ್ಲ. ಆದರೆ, ಇವರಲ್ಲಿ ಹೆಚ್ಚಿನವರು ಅತ್ಯಂತ ಕಡಿಮೆ ಅನುಭವ ಹೊಂದಿದವರಾಗಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ವಿವರಿಸಿದರು.
ಅತಿಥಿ ಉಪನ್ಯಾಸಕರ ವೇತನ 13 ರಿಂದ 32 ಸಾವಿರಕ್ಕೆ ಹೆಚ್ಚಳ
ರಾಜ್ಯದಲ್ಲಿ ಈವರೆಗೂ ಅತಿಥಿ ಉಪನ್ಯಾಸಕರು ಗರಿಷ್ಠ ಅವಧಿ ಬೋಧನೆ ಮಾಡಿದರೂ ಮಾಸಿಕ ವೇತನ 13 ಸಾವಿರ ರೂಪಾಯಿ ಮೀರುತ್ತಿರಲಿಲ್ಲ. ಆದರೆ ಈಗ ನೇಮಕ ಆಗುತ್ತಿರುವವರಿಗೆ ಗರಿಷ್ಠ 32 ಸಾವಿರ ರೂಪಾಯಿವರೆಗೆ ವೇತನ ಸಿಗುವಂತೆ ಮಾಡಲಾಗಿದೆ. ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಇದುವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದರವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಬೀದಿಗೆ ಬಿದ್ದಿರುವ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಒತ್ತಾಯ
ರಾಜ್ಯದಲ್ಲಿ 9881 ಮಂದಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು ಎದುರಾಗಿದೆ. ಅತಿಥಿ ಉಪನ್ಯಾಸಕರಿಗೆ ಎದುರಾಗಿರುವ ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಬಗೆಹರಿಸಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. ಸರ್ಕಾರಕ್ಕೆ ಆರು ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ. ಆದರೆ, 9,881 ಅತಿಥಿ ಉಪನ್ಯಾಸಕರು ಬೀದಿಗೆ ಬಿದ್ದಿದ್ದಾರೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? ಎಂದು ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಈ ಸ್ಥಿತಿಯಾದರೆ ಭಾರತ ವಿಶ್ವಗುರು ಆಗುತ್ತದೆಯೇ?
ರಾಷ್ಟ್ರೀಯ ಶಿಕ್ಷಣದ ಮೂಲಕ ಭಾರತ ಜ್ಞಾನದ ಕಾಶಿ ಆಗಬೇಕು ಎನ್ನುತ್ತೀರಿ. ಭಾರತ ವಿಶ್ವಗುರು ಆಗಬೇಕು ಎನ್ನುತ್ತೀರಿ. ಕರ್ನಾಟಕ ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ, ಆದರೆ 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧಿಸಲು ಸಾಧ್ಯವಾಗುತ್ತದೆಯೇ ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ದೇಶ ಕಟ್ಟುವುದರಲ್ಲಿ ಶಿಕ್ಷಣ ನಿರ್ಣಾಯಕವಾಗಲಿದ್ದು, ಈ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕನಾಗಿತ್ತಾರೆ. ಆದರೆ ಇಂದು ಕಲಿಸುವ ಗುರು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರ್ಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು ಆಗುತ್ತಿದೆ. ಸರ್ಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ ಹುನ್ನಾರ ನಡೆದಿದೆ. ಆ ಮೂಲಕ ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿ ಮಾಡುವ ಅನುಮಾನ ಬರುತ್ತಿದೆ ಎಂದಿದ್ದಾರೆ.
ಅರ್ಹತೆ ಇಲ್ಲದ ಮೇಲೆ ಏಕೆ ಅವರನ್ನು ದುಡಿಸಿಕೊಂಡಿರಿ?
ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ, ಹಿರಿತನ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳುತ್ತಿದ್ದಾರೆ. ಹಾಗಾದರೆ, ಇವೆರಡೂ ಅರ್ಹತೆ ಇಲ್ಲದಿದ್ದ ಮೇಲೆ ಇವರನ್ನು ಇಷ್ಟು ದಿನ ಕನಿಷ್ಠ ಸಂಬಳಕ್ಕೆ ಏಕೆ ದುಡಿಸಿಕೊಂಡಿರಿ. ಕಾನೂನಿನಲ್ಲಿ ಅದಕ್ಕೆ ಅವಕಾಶವಿತ್ತಾ. ಆರೇ ತಿಂಗಳಲ್ಲಿ ಅಭಿವೃದ್ಧಿ ಹರಿಕಾರರಾಗುವುದು ಎಂದರೆ ಇದೇನಾ? ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂದರೆ ನಿರುದ್ಯೋಗ ಸೃಷ್ಟಿಯಾ? ಸರ್ಕಾರ ಇರುವುದು ಸಬೂಬು ಹೇಳುವುದಕ್ಕಲ್ಲ, ಕಾರಣ ಹೇಳಿ ಪಲಾಯನ ಮಾಡುವುದಕ್ಕಲ್ಲ. ನ್ಯಾಯ ಕೊಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ವಹಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.