'ಕೈಲಾಗದಿದ್ದರೆ ಗ್ಯಾರೆಂಟಿ ಯೋಜನೆ ಬಿಟ್ಟುಬಿಡಿ'-ಆರ್.ಅಶೋಕ್ ಗುಡುಗು
ಬೆಂಗಳೂರು, ಫೆಬ್ರವರಿ 19: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಂಕಾಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ರಾಜ್ಯದ ಲಕ್ಷಾಂತರ ಮಹಿಳೆಯರ ಜೀವನ ನಿರ್ವಹಣೆಗೆ ಬಲವಾಗಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಾರದೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಬಂದಿಲ್ಲ ಎನ್ನುವ ದೂರುಗಳು ಹೆಚ್ಚಾಗಿದ್ದು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಇಂಧನ ಸಚಿವ ಕೆ.ಜೆ ಜಾರ್ಜ್ ನೀಡಿರುವ ಹೇಳಿಕೆ ಇದೀಗ ವಿರೋಧ ಪಕ್ಷದ ಟೀಕೆಗೆ ಗುರಿಯಾಗಿದೆ.
ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಗಳ ಹಣ ಸಕಾಲಕ್ಕೆ ಯಾಕೆ ಬರುತ್ತಿಲ್ಲ ಎನ್ನುವ ಪ್ರಶ್ನೆಗೆ ಸಚಿವ ಕೆ.ಜೆ ಜಾರ್ಜ್ ಉಡಾಫೆ ಉತ್ತರ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಹಣವೇನು ತಿಂಗಳ ಸಂಬಳ ಅಲ್ಲವಲ್ಲಾ? ಪ್ರತಿ ತಿಂಗಳು ಫಲಾನುಭವಿಗಳಿಗೆ ಹಣ ಹೋಗುತ್ತಿರುವುದು ವಿಳಂಬ ಆಗಿರಬಹುದು. ಆ ವಿಚಾರ ಗೊತ್ತಿರಬೇಕು ಎಂಬ ನಿಯಮ ಇದೆಯಾ? ಸಮಸ್ಯೆ ಗೊತ್ತಾದ ಕೂಡಲೇ ಪರಿಹರಿಸುವ ಕೆಲಸ ಮಾಡುತ್ತಾರೆ. ಗ್ಯಾರಂಟಿ ಹಣವೇನು ತಿಂಗಳ ಸಂಬಳದ ಟೈಪ್ ಅಲ್ವಲ್ಲಾ? ಎಂದು ಉತ್ತರ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಸಚಿವರ ಈ ಹಾರಿಕೆಯ ಹೇಳಿಕೆ ವಿರುದ್ಧ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಸ್ವಾಮಿ ಸಚಿವ ಕೆ.ಜೆ ಜಾರ್ಜ್ ಅವರೇ, ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ತಿಂಗಳ ಸಂಬಳ ಅಲ್ವಲ್ವಾ? ಅಂತ ಹೇಳಿದ್ದೀರಲ್ಲಾ, ಇದೇನಾ ಮತದಾರರಿಗೆ ನೀವು ಕೊಡುವ ಗೌರವ? ಎಂದು ಪ್ರಶ್ನಿಸಿದ್ದಾರೆ.
ಗೃಹಲಕ್ಷ್ಮಿ ಹಣ ಕೊಡಿ, ಅನ್ನಭಾಗ್ಯದ ಹಣ ಕೊಡಿ ಅಂತ ಮಾತಾದರರೇನು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಈ ಗ್ಯಾರೆಂಟಿ ಯೋಜನೆಗಳನ್ನು ಪ್ರಾರಂಭಿಸಿ ಅಂತ ಜನತೆ ಕೇಳಿಯೂ ಇರಲಿಲ್ಲ. ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕಾರದ ತೆವಲಿಗೆ ಬೇಕಾಬಿಟ್ಟಿ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಈಗ ಮತದಾರರ ಬಗ್ಗೆ ಕೀಳಾಗಿ ಯಾಕೆ ಮಾಡುತ್ತೀರಿ? ನಿಮ್ಮ ಕೈಲಾದರೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಗೌರವದಿಂದ ಜಾರಿ ಮಾಡಿ. ನಿಮ್ಮ ಕೈಲಾಗದಿದ್ದರೆ ಬಿಟ್ಟುಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ಯಾರೆಂಟಿ ಯೋಜನೆಗಳು ಜಾರಿ ಆಗುವ ಮುನ್ನವೂ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದರು. ಅವು ಇಲ್ಲದೆಯೂ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಕಾಂಗ್ರೆಸ್ ಕೋಳಿ ಕೂಗಿದರೆ ಕರ್ನಾಟಕದಲ್ಲಿ ಬೆಳಕು ಹರಿಯುತ್ತದೆ ಎನ್ನುವ ದುಸ್ಥಿತಿ ಕನ್ನಡಿಗರಿಗೆ ಬಂದಿಲ್ಲ. ಕನ್ನಡಿಗರ ಸ್ವಾಭಿಮಾನ ಕೆಣಕಬೇಡಿ. ಈಗಾಗಲೇ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಅಡ್ರೆಸ್ ಇಲ್ಲದಂತಾಗಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುವುದು ಗ್ಯಾರೆಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications