ಗೃಹಜ್ಯೋತಿ; ಇಂಧನ ಇಲಾಖೆ ನೀಡಿರುವ ಸ್ಪಷ್ಟನೆಗಳು
ಬೆಂಗಳೂರು, ಜೂನ್ 16; ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ 'ಗೃಹಜ್ಯೋತಿ' ಸಹ ಒಂದು. ಈ ಯೋಜನೆ ಫಲಾನುಭವಿಯಾಗಲು ಜೂನ್ 18 ರಿಂದ ಅರ್ಜಿ ಸಲ್ಲಿಸಬಹುದು. ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಯಲ್ಲಿ ಹಲವು ಗೊಂದಲಗಳಿದ್ದವು.
'ಗೃಹಜ್ಯೋತಿ' ಬಗ್ಗೆ ಗ್ರಾಹಕರಿಗೆ ಮಾತ್ರವಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಸಹ ಸ್ಪಷ್ಟನೆ ಕೇಳಿದ್ದವು. ಆದ್ದರಿಂದ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ವಿನೋದ್ ಕುಮಾರ್ ಡಿ. ಎಂ. ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಈ ಸ್ಪಷ್ಟನೆ 'ಗೃಹಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ವಿದ್ಯುತ್ ಸರಬರಾಜು ಕಂಪನಿಗಳು ಕೋರಿರುವ ಅಂಶಗಳಿಗೆ ಸ್ಪಷ್ಟಿಕರಣ ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ. ಸರ್ಕಾರದ ಆದೇಶ ದಿನಾಂಕ 20/05/2023, ಸರ್ಕಾರದ ಆದೇಶ ದಿನಾಂಕ 5/6/2023 ಉಲ್ಲೇಖಿಸಿ ಈ ಸ್ಪಷ್ಟನೆ ನೀಡಿದ್ದಾರೆ.
ಏನು ಸ್ಪಷ್ಟನೆ ಕೋರಲಾಗಿತ್ತು?; ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರೀಕರಿಗೆ ಒದಗಿಸಲು ದಿನಾಂಕ 20/05/2023ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ 'ಗೃಹಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಒದಗಿಸಲು ತಾತ್ವಿಕ ಅನುಮೋದನೆ ನೀಡಿದೆ. ಯೋಜನೆಯನ್ನು ಕೆಲವು ಷರತ್ತುಗಳೊಂದಿಗೆ ದಿನಾಂಕ 01/07/2023ರಿಂದ ಜಾರಿಗೆ ತರುವಂತೆ ಅನುಮೋದಿಸಿದೆ.
'ಗೃಹಜ್ಯೋತಿ' ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿದೆ.
ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ ಪಾವತಿಸಲು ಸರ್ಕಾರವು ಕೆಲವು ಷರತ್ತುಗಳೊಂದಿಗೆ ಸದರಿ ಯೋಜನೆಯನ್ನು ದಿನಾಂಕ 01/07/2023ರಿಂದ ಜಾರಿಗೊಳಿಸಲು ದಿನಾಂಕ 05/06/2023ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಗಳು 'ಗೃಹಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಉಂಟಾಗಿರುವ ಗೊಂದಲಗಳ ಬಗ್ಗೆ ಸ್ಪಷ್ಟಿಕರಣ ನೀಡಲು ಕೋರಿರುತ್ತಾರೆ. ಆದ್ದರಿಂದ ಈ ಕೆಳಕಂಡ ಸ್ಪಷ್ಟೀಕರಣ ನೀಡಲಾಗಿದೆ.
ಆದೇಶದಲ್ಲಿ ಏನಿದೆ?; 'ಗೃಹಜ್ಯೋತಿ' ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಉಂಟಾಗಿರುವ ಗೊಂದಲಗಳ ಅಂಶಗಳ ಕುರಿತು ಅನುಬಂಧದಲ್ಲಿರುವಂತೆ ಸ್ಪಷ್ಟೀಕರಣ
ನೀಡಲಾಗಿದೆ.
'ಗೃಹಜ್ಯೋತಿ' ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ನಲ್ಲಿ ಜೋಡಣೆ ಮಾಡಿ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಅನುಬಂಧವು ಈ ಆದೇಶದ ಭಾಗವಾಗಿರುತ್ತದೆ.
ಈ ಆದೇಶವನ್ನು ಕಡತ ಸಂಖ್ಯೆ: ಎನರ್ಜಿ164/ಪಿಎಸ್ಆರ್/2023 ರಲ್ಲಿನ ಟಿಪ್ಪಣಿ ಸಂಖ್ಯೆ: 24ರಲ್ಲಿ ಆರ್ಥಿಕ ಇಲಾಖೆಯು ನೀಡಿರುವ ಸಹಮತಿಯನ್ವಯ ಹೊರಡಿಸಿದೆ. ಉಳಿದಂತೆ ಸರ್ಕಾರದ ದಿನಾಂಕ 05/06/2023ರ ಆದೇಶದಲ್ಲಿನ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ ಎಂದು ಹೇಳಿದ್ದಾರೆ.
ಜೂನ್ 18 ರಿಂದ ಅರ್ಜಿ ಸಲ್ಲಿಕೆ; ಜನರು 'ಗೃಹಜ್ಯೋತಿ' ಯೋಜನೆಯ ಫಲಾನುಭವಿಗಳಾಗಲು ನೋಂದಣಿ ಮಾಡಿಸಬೇಕು. ಜೂನ್ ತಿಂಗಳ 18ರಿಂದ ನೋಂದಣಿ ಪ್ರಾರಂಭಿಸಲಾಗುವುದು ಎಂದು ಇಂಧನ ಇಲಾಖೆ ಹೇಳಿದೆ.
ಯೋಜನೆ ಲಾಭ ಪಡೆಯಲಿಚ್ಛಿಸುವ ಫಲಾನುಭವಿಗಳು ಸೇವಾ ಸಿಂಧು ರ್ಪೋಟಲ್ನಲ್ಲಿ (https://sevasindhugs.karnataka.gov.in) ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸದರಿ ವೆಬ್ಸೈಟ್ ಮೊಬೈಲ್ ಫೋನ್/ ಡೆಸ್ಕ್ಟಾಪ್/ ಲ್ಯಾಪ್ ಟ್ಯಾಪ್ಗಳಲ್ಲಿಯೂ ಕಾರ್ಯ ನಿರ್ವಹಿಸಲಿದೆ.
ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ. ಅರ್ಜಿಯನ್ನು ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಸಲ್ಲಿಕೆ ಮಾಡಬಹುದು.












Click it and Unblock the Notifications