ಖಾಸಗಿ ಶಾಲೆ ಮತ್ತು ಪೋಷಕರ ನಡುವೆ ಜಗಳಕ್ಕೆ ಕಾರಣವಾದ ಸಚಿವರ ಆದೇಶ!
ಬೆಂಗಳೂರು, ಏಪ್ರಿಲ್ 20 : ಕೊರೋನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ 1 ರಿಂದ 9 ನೇ ತರಗತಿ ವರೆಗಿನ ಮಕ್ಕಳನ್ನು ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಆನ್ಲೈನ್ ಮತ್ತು ವಿದ್ಯಾಗಮ ಯೋಜನೆ ಅಡಿ ಮಾಡಿರುವ ಪಾಠ ಪ್ರವಚನ ಹಾಗೂ ರೂಪಣಾತ್ಮಕ ಮೌಲ್ಯಾಂಕ ಆಧರಿಸಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ರಜೆ ಘೋಷಣೆ ಜತೆಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭದ ಬಗ್ಗೆಯೂ ಸ್ಪಷ್ಟ ಆದೇಶ ತೆಗೆದುಕೊಂಡಿದ್ದಾರೆ.
ಆದರೆ, 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ದಾಖಲಾಗದೇ ಇರುವ ಮಕ್ಕಳ ಬಗ್ಗೆ ಶಿಕ್ಷಣ ಸಚಿವರು ಯಾವುದೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಇದು ಮತ್ತೆ ಖಾಸಗಿ ಶಾಲೆ ಮತ್ತು ಪೋಷಕರ ನಡುವೆ ಜಗಳ ತಂದಿಡುವ ಮುನ್ಸೂಚನೆ ನೀಡಿದೆ.
ಕೋವಿಡ್ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿರುವ ಶಿಕ್ಷಣ ಸಚಿವರ ಕ್ರಮ ಪ್ರಶಂಸೆಗೆ ಪಾತ್ರವಾಗಿದೆ. ಶಿಕ್ಷಣ ಸಚಿವರು ಮಹತ್ವದ ಆದೇಶ ಹೊರಡಿಸುವ ಮುನ್ನ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಪೋಷಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲಾಗದ ಮಕ್ಕಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆದರೆ, ಆದೇಶದಲ್ಲಿ ಶಾಲೆಗೆ ದಾಖಲಾಗದ ಮಕ್ಕಳ ಬಗ್ಗೆ ಯಾವುದೇ ಸ್ಪಷ್ಟ ಆದೇಶ ಮಾಡದೇ ಇರುವುದು ಮತ್ತೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಶೇ. 50 ರಷ್ಟು ಮಕ್ಕಳು ಶಾಲೆಗೆ ದಾಖಲಾಗಿಲ್ಲ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ. 50 ರಷ್ಟು ಮಕ್ಕಳು ಶಾಲೆಗೆ ದಾಖಲಾಗಿಲ್ಲ. ರಾಜ್ಯದಲ್ಲಿ ಸರಾಸರಿ ಲೆಕ್ಕ ಹಾಕಿದರೆ ಶೇ. 40 ರಷ್ಟು ಮಕ್ಕಳು ಶಾಲೆಗೆ ಸೇರಿಸಿಲ್ಲ. ಅದರಲ್ಲೂ ಎಲ್ಕೆಜಿ, ಯುಕೆಜಿ ಯಿಂದ ಐದನೇ ತರಗತಿ ವರೆಗಿನ ಮಕ್ಕಳೇ ಹೆಚ್ಚಾಗಿದ್ದಾರೆ. ಉಳಿದ ಶೇ. 50 ರಷ್ಟು ಮಕ್ಕಳು ಈಗಾಗಲೇ ದಾಖಲಾಗಿದ್ದಾರೆ. ಆನ್ಲೈನ್ ಮತ್ತು ವಿದ್ಯಾಗಮ ಶಿಕ್ಷಣ ಪಡೆದುಕೊಂಡಿದ್ದಾರೆ.
ಇದಕ್ಕಾಗಿ ಸರ್ಕಾರ ನಿಗದಿ ಪಡಿಸಿದಂತೆ ಶಾಲಾ ಶುಲ್ಕವನ್ನು ಕೂಡ ಪಾವತಿ ಮಾಡಿದ್ದಾರೆ. ಇದೀಗ ಶಾಲೆಗೆ ದಾಖಲಾಗದೇ ಒಂದು ರೂಪಾಯಿ ಶಾಲಾ ಶುಲ್ಕ ಪಾವತಿಸದ ಮಕ್ಕಳನ್ನು ಪಾಸು ಮಾಡಿದರೆ, ಶುಲ್ಕ ಪಾವತಿ ಮಾಡಿರುವ ಪೋಷಕರು ದಂಗೆ ಏಳುವ ಸಾಧ್ಯತೆಯಿದೆ. ಇಲ್ಲವೇ ನಮ್ಮ ಶುಲ್ಕ ವಾಪಸು ಕೊಡಿ. ಅವರ ಬಳಿ ಒಂದು ರೂಪಾಯಿ ಶುಲ್ಕವಿಲ್ಲದೇ ಪಾಸು ಮಾಡಿದ್ದೀರ. ನಾವು ಯಾಕೆ ಶುಲ್ಕ ಪಾವತಿ ಮಾಡಬೇಕು ಎಂದು ಪ್ರಶ್ನೆ ಮಾಡುವುದು ಖಚಿತ. ಹೀಗಾಗಿ ಶಾಲಾ ಶುಲ್ಕ ಪಾವತಿ ಮಾಡಿದ ಹಾಗೂ ಪಾವತಿ ಮಾಡದ ಪೋಷಕರ ನಡುವೆಯೇ ತಿಕ್ಕಾಟಕ್ಕೆ ಎಡೆ ಮಾಡಕೊಡಲಿದೆ. ಇದರಿಂದ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಸಮರಕ್ಕೆ ನಾಂದಿಯಾಡಲಿದೆ.

ಶಿಕ್ಷಣ ಸಚಿವರ ಸಮ್ಮುಖದಲ್ಲಿ ನಡೆದ ಸಭೆ
ಶಿಕ್ಷಣ ಸಚಿವರಿಗೆ ಮನವಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದಾಖಲಾತಿ ಆಗದ ಮಕ್ಕಳ ಬಗ್ಗೆ ಸ್ಪಷ್ಟವಾಗಿ ಚರ್ಚೆ ನಡೆಸಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಪೋಷಕರು ಮಕ್ಕಳನ್ನು ದಾಖಲಾತಿಯೇ ಮಾಡಿಸಿಲ್ಲ. ನಮ್ಮ ಮಕ್ಕಳು ಅದೇ ತರಗತಿಯಲ್ಲಿ ಓದಲಿ ಬಿಡಿ ಎಂದು ಕೆಲವು ಪೋಷಕರು ತಮ್ಮ ಮಕ್ಕಳ ದಾಖಲಾತಿ ಮಾಡಿಸಿಯೇ ಇಲ್ಲ.
ಶೇ. 40 ರಷ್ಟು ಮಕ್ಕಳು ಶಾಲೆಗೆ ದಾಖಲಾಗದೇ ಹೊರಗುಳಿದಿದ್ದಾರೆ. ಶಾಲೆಗೆ ದಾಖಲಾಗದ ಮಕ್ಕಳನ್ನು ಉತ್ತೀರ್ಣ ಗೊಳಿಸುವುದು ಅಸಾಧ್ಯವಾದ ಮಾತು. ಈ ಕುರಿತು ಸ್ಪಷ್ಟ ಆದೇಶ ಮಾಡುವಂತೆ ಶಿಕ್ಷಣ ಸಚಿವರಿಗೆ ಮನವಿ ನೀಡುತ್ತಿದ್ದೇವೆ ಎಂದು ಕರ್ನಾಟಕ ನೋಂದಾಯಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ "ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ಹತ್ತನೇ ತರಗತಿ ಪರೀಕ್ಷೆ ರದ್ದು ಯಾಕೆ ಇಲ್ಲ?
ಹತ್ತನೇ ತರಗತಿ ಪರೀಕ್ಷೆ ರದ್ದು ಯಾಕೆ ಇಲ್ಲ? : ಕೇಂದ್ರದ ಸಿಬಿಎಸ್ ಬಿ ಬೋರ್ಡ್ ಹತ್ತನೇ ತರಗತಿಯ ಪರೀಕ್ಷೆಯನ್ನು ಕೂಡ ರದ್ದು ಪಡಿಸಿದೆ. ಆದರೆ, ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆಯನ್ನು ಮಾಡುವುದಾಗಿ ಈ ಸುತ್ತೋಲೆಯಲ್ಲಿಯೇ ಸಚಿವರು ಸ್ಪಷ್ಟ ಪಡಿಸಿದ್ದಾರೆ. ಕೇಂದ್ರ ಸಿಬಿಎಸ್ ಸಿ ಬೋರ್ಡ್ ನ ಆದೇಶವನ್ನು ಮಾದರಿಯಾಗಿ ಪರಿಗಣಿಸುವುದಾದರೆ ಯಾಕೆ ಹತ್ತನೇ ತರಗತಿ ಮಕ್ಕಳ ಪರೀಕ್ಷೆಯನ್ನು ರದ್ದು ಮಾಡುತ್ತಿಲ್ಲ ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಮುಂದಿನ ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬಹುದೆಂಬ ಉದ್ದೇಶದಿಂದ ಪರೀಕ್ಷೆಯನ್ನು ಮುಂದುವರೆಸಿದ್ದಾರೋ ಅಥವಾ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲು ತೀರ್ಮಾನಿಸಿದ್ದಾರೋ ಇದರ ಮರ್ಮ ಮಾತ್ರ ಗೊತ್ತಾಗುತ್ತಿಲ್ಲ.

ಸರ್ಕಾರಿ ಶಾಲಾ ಮಕ್ಕಳಿಗೆ ತೊಡಕು
ಸರ್ಕಾರಿ ಶಾಲಾ ಮಕ್ಕಳಿಗೆ ತೊಡಕು: ಇನ್ನು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಯೋಜನೆ ಜಾರಿ ಮಾಡಿ ಪಾಠ ಪ್ರವಚನ ಮಾಡಲಾಗಿದೆ. ಅದರೆ, ರಾಜಧಾನಿ ಬೆಂಗಳೂರಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದು ಹೊರ ಜಿಲ್ಲೆಗಳ ಮಕ್ಕಳು. ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕರು ಶಾಲೆಗೆ ದಾಖಲಾದರೂ ಪಾಠ ಪ್ರವಚನಗಳಿಂದ ದೂರ ಉಳಿದಿದ್ದಾರೆ. ಅವರು ಎಷ್ಟರ ಮಟ್ಟಿಗೆ ಆಕಾಶವಾಣಿ ಮತ್ತು ದೂರದರ್ಶನದ ಪಾಠಗಳಿಂದ ತಯಾರಿ ನಡೆಸಿದ್ದಾರೋ ದೇವರೇ ಬಲ್ಲ. ಅಂತೂ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಹೊರಡಿಸಿರುವ ಈ ಆದೇಶ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.












Click it and Unblock the Notifications