Breaking; ಸೇನಾ ಆಯ್ಕೆ ಪೂರ್ವ ತರಬೇತಿಗಾಗಿ 3 ಶಾಲೆ ಸ್ಥಾಪನೆ
ಬೆಂಗಳೂರು, ಜೂನ್ 25; ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂರು ಜಿಲ್ಲೆಗಳಲ್ಲಿ ಉಚಿತವಾಗಿ ಸೇನಾ ಆಯ್ಕೆ ಪೂರ್ವ ತರಬೇತಿ ನೀಡಲು ಶಾಲೆಗಳನ್ನು ಆರಂಭಿಸಲಿದೆ.
ಸೇನೆಗೆ ಸೇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಈ ಶಾಲೆಯನ್ನು ಆರಂಭಿಸಲಾಗುತ್ತಿದೆ. ಶಾಲೆ ಆರಂಭಿಸುವ ಕುರಿತು ಈಗಾಗಲೇ ಅಧಿಕೃತ ಆದೇಶ ಹೊರಡಿಸಲಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಶಾಲೆಗಳು ಆರಂಭವಾಗಲಿವೆ. ಸೇನಾ ಪೂರ್ವ ಆಯ್ಕೆ ತರಬೇತಿ ಶಾಲೆ ಆರಂಭಿಸುವ ಕುರಿತು ಇಲಾಖೆ ಜೂನ್ 20ರಂದು ಆದೇಶಿಸಿದೆ.

ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ತರಬೇತಿ ವೆಚ್ಚವನ್ನು ಇಲಾಖೆಯಿಂದ ಹಾಗೂ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ತರಬೇತಿ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸಲಾಗುತ್ತದೆ. ವಾರ್ಷಿಕ 67.50 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಶಾಲೆಗಳ ಹೆಸರು; ವೀರರಾಣಿ ಅಬ್ಬಕ್ಕ ಹೆಸರಿನಲ್ಲಿ ದಕ್ಷಿಣ ಕನ್ನಡದಲ್ಲಿ, ಕೋಟಿ ಚಿನ್ನಯ್ಯ ಹೆಸರಿನಲ್ಲಿ ಉಡುಪಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯಕ ಹೆಸರಿನಲ್ಲಿ ತರಬೇತಿ ಶಾಲೆ ಆರಂಭವಾಗಲಿದೆ.
ಈ ಶಾಲೆಗಳ ಪರಿಕಲ್ಪನೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರದ್ದು. ಸೇನೆಗೆ ಸೇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡುವುದು ಶಾಲೆಗಳ ಉದ್ದೇಶವಾಗಿದೆ.
ಕರಾವಳಿ ಭಾಗದಿಂದ ಹಲವು ಮಂದಿ ಸೇನೆಗೆ ಸೇರಲು ಬಯಸಿದರೂ ನಾನಾ ಕಾರಣದಿಂದ ವಿಫಲರಾಗುತ್ತಿದ್ದಾರೆ. ಅವರನ್ನು ದೈಹಿಕವಾಗಿ ಮತ್ತು ಲಿಖಿತ ಪರೀಕ್ಷೆಗೆ ತರಬೇತಿಗೊಳಿಸಲು ಶಾಲೆಗಳನ್ನು ಆರಂಭಿಸಲಾಗುತ್ತಿದೆ.
ಈ ಶಾಲೆಗಳಲ್ಲಿ ವಸತಿ ಸಹಿತವಾಗಿ ಸುಮಾರು ನಾಲ್ಕು ತಿಂಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಪ್ರತಿ ಶಾಲೆಯಲ್ಲಿ 100 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಇಲಾಖೆ ಚಿಂತನೆ ನಡೆಸಿದೆ.












Click it and Unblock the Notifications