ಇದು ಬ್ಲಾಕ್ ಫಂಗಸ್ ಅಲ್ಲ; ಕೊರೊನಾದಿಂದ ಗುಣಮುಖರಾದವರಿಗೆ ಎದುರಾಯ್ತು ಹೊಸ ಸಮಸ್ಯೆ!
ಬೆಂಗಳೂರು, ಆ. 17: ಕೊರೊನಾ ವೈರಸ್ ಕಳೆದ ಎರಡು ವರ್ಷಗಳಿಂದ ಜನರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾ ಸೋಂಕಿನ ಬಗ್ಗೆ ಇರುವ ಭಯ ದಿನದಿಂದ ದಿನಕ್ಕೆ ಮತ್ತೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಬಹಳಷ್ಟು ರೋಗಿಗಳನ್ನು ಬ್ಲಾಕ್ ಫಂಗಸ್ ಕಾಡಿತ್ತು. ಅದಾದ ಬಳಿಕ ಡೆಲ್ಟಾ ವೈರಸ್ ಜೊತೆಗೆ ಕೊರೊನಾ ಮೂರನೇ ಅಲೆಯ ಆತಂಕ ಕಾಡುತ್ತಿದೆ. ಅದರೊಂದಿಗೆ ಈಗ ಮತ್ತೊಂದು ಹೊಸ ಸಮಸ್ಯೆ ಎದುರಾಗಿದೆ. ಕೊರೊನಾ ವೈರಸ್ ಸದ್ಯಕ್ಕೆ ತನ್ನ ಅಟ್ಟಹಾಸವನ್ನು ಬಿಡುವಂತೆ ಕಾಣುತ್ತಿಲ್ಲ. ಈ ಹೊಸ ಸಂಕಷ್ಟದಿಂದ ಪಾರಾಗಲು ರಾಜ್ಯ ಆರೋಗ್ಯ ಇಲಾಖೆ ಹೊಸ ಕಾರ್ಯಕ್ರಮ ಹಾಕಿಕೊಂಡಿದೆ.
ಕೊರೊನಾದಿಂದ ಗುಣಮುಖರಾದವರಲ್ಲಿ ಕ್ಷಯರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬುದು ಪತ್ತೆಯಾಗಿದೆ. ಇಡೀ ದೇಶದಲ್ಲಿ ಕಡಿಮೆಯಾಗಿದ್ದ ಕ್ಷಯರೋಗ ಈಗ ಮತ್ತೆ ಹೆಚ್ಚಾಗುತ್ತಿದೆ. ಕ್ಷಯ ರೋಗ ಹೆಚ್ಚಾಗಲು ಕೊರೊನಾ ವೈರಸ್ ಕಾರಣ ಎಂದು ವರದಿಯಾಗಿದೆ. ಹೀಗಾಗಿ ಮತ್ತೊಂದು ಹೊಸ ಸಮಸ್ಯೆ ಕೊರೊನಾದಿಂದ ಎದುರಾದಂತಾಗಿದೆ.

ಕೋವಿಡ್ನಿಂದ ಚೇತರಿಸಿಕೊಂಡವರಲ್ಲಿ ಹೊಸ ಸಮಸ್ಯೆ!
ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಕ್ಷಯರೋಗ ಕಾಣಿಸಿಕೊಳ್ಳುತ್ತಿದೆ ಎಂಬ ಅಘಾತಕಾರಿ ಅಂಶವನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಡಾ. ಸುಧಾಕರ್, ಈ ಹಿನ್ನೆಲೆಯಲ್ಲಿ ಆಗಸ್ಟ್ 16 ರಿಂದ 30ರ ವರೆಗೆ ಕೊರೊನಾದಿಂದ ಗುಣಮುಖರಾದವರಿಗೆ ಕ್ಷಯರೋಗ ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಒಟ್ಟು ಸುಮಾರು 28 ಲಕ್ಷ ಜನರು ಕೊವಿಡ್19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗೆ ಗುಣಮುಖರಾದವರಲ್ಲಿ ಅವರಲ್ಲಿ ಕಪ್ಪು ಶಿಲೀಂಧ್ರ ಪತ್ತೆ ಮಾಡುವ ರೀತಿ ಕ್ಷಯ ರೋಗದ ತಪಾಸಣೆ ಮಾಡಲಾಗುವುದು. ಕ್ಷಯ ರೋಗ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಕೊವಿಡ್ ಕೂಡ ಶ್ವಾಸಕೋಶದ ಸಮಸ್ಯೆಯಿಂದ ಬರುತ್ತದೆ. ಅದಕ್ಕಾಗಿ ಕ್ಷಯ ವ್ಯಾಪಕವಾಗಿ ಹರಡದಂತೆ ನೋಡಲು ತಪಾಸಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕ್ಷಯ!
ಕಳೆದ ಎರಡು ವರ್ಷಗಳಲ್ಲಿ ಕ್ಷಯ ರೋಗ ವಿಪರೀತ ಹೆಚ್ಚಾಗಿದೆ. ಎರಡೇ ವರ್ಷಗಳಲ್ಲಿ ಕ್ಷಯ ರೋಗ ಶೇಕಡಾ 33 ರಷ್ಟು ಹೆಚ್ಚಳವಾಗಿರುವುದು ಪತ್ತೆಯಾಗಿದೆ. ಈ ಮೊದಲು ಯಾವ ವೃತ್ತಿಯವರಿಗೆ ಈ ರೋಗ ಬರುತ್ತದೆ ಎಂಬುದನ್ನು ನೋಡಿ ತಪಾಸಣೆ ಮಾಡಲಾಗುತ್ತಿತ್ತು. ಆದರೆ ಈಗ ಕೊವಿಡ್ನಿಂದ ಗುಣಮುಖರಾದವರ ತಪಾಸಣೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ 28 ಲಕ್ಷ ಜನರು ಕೋವಿಡ್ ಸೋಂಕಿನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಕ್ಷಯ ರೋಗ ತಪಾಸಣೆ ಮಾಡಿಕೊಳ್ಳಬೇಕು. ಆರಭದಲ್ಲಿ ಕ್ಷಯ ರೋಗ ಪತ್ತೆಯಾದರೆ ಚಿಕಿತ್ಸೆ ನೀಡಲು ಅನುಕೂಲ ಎಂದು ಸುಧಾಕರ್ ಮನವಿ ಮಾಡಿದ್ದಾರೆ.
ಈ ಮೊದಲು 2017 ರಲ್ಲಿ ಕ್ಷಯ ರೋಗ ಸಮೀಕ್ಷೆ ನಡೆಸಲಾಗಿತ್ತು. ಆಗ ಶೇಕಡಾ 3.9 ರಷ್ಟು ಜನರಲ್ಲಿ ಕ್ಷಯ ರೋಗ ಪತ್ತೆಯಾಗಿತ್ತು. 2019-20 ರಲ್ಲಿ ಕ್ಷಯ ರೋಗಿಗಳ ಪ್ರಮಾಣ ಕಡಿಮೆಯಾಗಿತ್ತು. ಜೊತೆಗೆ ಆಗ ಪರೀಕ್ಷೆಯನ್ನೂ ಕಡಿಮೆ ಮಾಡಲಾಗಿತ್ತು. ಈ ವರ್ಷ 1.25 ಕೋಟಿ ಜನರನ್ನು ಕ್ಷಯರೋಗ ತಪಾಸಣೆಗೆ ಒಳಪಡಿಸಲು ತೀರ್ಮಾನ ಮಾಡಲಾಗಿದೆ. 2025 ರೊಳಗೆ ಭಾರತವವನ್ನು ಕ್ಷಯ ರೋಗ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಗುರಿ ಇಟ್ಟು ಕೊಂಡಿದ್ದಾರೆ. ಹೀಗಾಗಿ ಕ್ಷಯರೋಗ ತಪಾಸನೆ ಹೆಚ್ಚು ಮಾಡಿದ್ದೇವೆ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.

ಮಕ್ಕಳ ರಕ್ಷಣೆಗೆ 'ಆರೋಗ್ಯ ನಂದನ'!
ಕೊರೊನಾ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಹೊಸ ಕಾರ್ಯಕ್ರಮ ಜಾರಿಗೆ ಮಾಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆಂದು ತಜ್ಞರು ನೀಡಿರುವ ಸಲಹೆ ಮೇರೆಗೆ ಮಕ್ಕಳ ರಕ್ಷಣೆಗೆ 'ಆರೋಗ್ಯ ನಂದನ ಯೋಜನೆ' ಜಾರಿಗೆ ತರಲಾಗುವುದು. ರಾಜ್ಯದಲ್ಲಿ 1.5 ಕೋಟಿ ಮಕ್ಕಳಿದ್ದು ಎಲ್ಲ ಮಕ್ಕಳ ತಪಾಸಣೆ ನಡೆಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಒಂದು ವಾರದಲ್ಲಿ ಆರೋಗ್ಯ ನಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈಗಾಗಲೆ ಸಿಎಂ ಬೊಮ್ಮಾಯಿ ಹಾವೇರಿ ಹಾಗೂ ಉಡುಪಿಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಿದ್ದಾರೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಮೂರುವರೆ ಕೋಟಿ ಜನರಿಗೆ ಲಸಿಕೆ!
ರಾಜ್ಯದಲ್ಲಿ 3.5 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಈ ವಾರ ಸಿಎಂ ಬಸವರಾಜ ಬೊಮ್ಮಯಿ ಅವರೊಂದೊಗೆ ದೆಹಲಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಇನ್ನಷ್ಟು ಲಸಿಕೆಗೆ ಬೇಡಿಕೆ ಇಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಶೇಕಡಾ 25 ರಷ್ಟು ಲಸಿಕೆ ಹಾಕಿಸಲು ಅವಕಾಶ ನೀಡಲಾಗಿದ್ದು, ಉದ್ಯಮಿಗಳು ಐಟಿ ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯಿಂದ ಲಸಿಕೆ ಖರಿದಿಸಿ ಸರ್ಕಾರಕ್ಕೆ ನೀಡುವಂತೆ ಮನವಿ ಮಾಡಲಾಗಿದೆ. ಇದರಿಂದ ಆದಷ್ಟು ವೇಗವಾಗಿ ಲಸಿಕೆ ಹಾಕಿಸಲು ಅನುಕೂಲವಾಗಲಿದೆ. ಗಡಿ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಆಘಾತ ಮೂಡಿಸಿದೆ
ಇನ್ನು ಮಂಗಳೂರಿನಲ್ಲಿ ಕೊವಿಡ್ ನಿಂದ ಬಳಲಿದ ದಂಪತಿ ಆತ್ಮಹತ್ಯೆ ಮಾಡಿಡಿರುವುದು ಆಘಾತ ಮೂಡಿಸಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ. ಕೊವಿಡ್ ಬಂದರೆ ಸಾವು ಸಂಭವಿಸುವುದಿಲ್ಲ. ರಾಜ್ಯದಲ್ಲಿಯೇ 28 ಲಕ್ಷ ಜನರು ಗುಣಮುಖರಾಗಿದ್ದಾರೆ. ಆ ದಂಪತಿಗೆ ಮಾಹಿತಿಯ ಕೊರತೆಯಿಂದ ಈ ರೀತಿ ಮಾಡಿಕೊಂಡಿರಬಹುದು. ಅವರು ಈ ರೀತಿ ಜೀವನ ಅಂತ್ಯ ಮಾಡಿಕೊಂಡಿರುವುದು ಸಾಧುವಲ್ಲ. ಯಾರಿಗಾದರೂ ರೋಗ ಲಕ್ಷಣ ಕಂಡು ಬಂದ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದು ಬೇಡ. ದುಡುಕಿನ ನಿರ್ಧಾರ ತೆಗೆದುಕೊಳ್ಳುವುದೂ ಸರಿಯಲ್ಲ ಎಂದಿದ್ದಾರೆ.












Click it and Unblock the Notifications