ಚಂದ್ರು ಪ್ರಕರಣ: ಭಾವೋದ್ವೇಗ ಬೇಡ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು,ನವೆಂಬರ್7: ರೇಣುಕಾಚಾರ್ಯ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ, ಆ ರೀತಿ ಭಾವೋದ್ವೇಗಕ್ಕೆ ಒಳಗಾಗೋದು ಸಹಜ. ಆದರೆ, ಇಷ್ಟೊಂದು ಭಾವೋದ್ವೇಗ ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ರೇಣುಕಾಚಾರ್ಯ ಸಹೋದರ ಮಗನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಟುಂಬದ ವ್ಯಕ್ತಿಯನ್ನು ಕಳೆದುಕೊಂಡಾಗ ರೇಣುಕಾಚಾರ್ಯ ಅವರು ಸಹಜವಾಗಿ ಭಾವೋದ್ವೇಗರಾಗಿದ್ದಾರೆ. ಚಂದ್ರು ತುಂಬಾ ಒಳ್ಳೆಯ ಯುವಕ. ರೇಣುಕಾಚಾರ್ಯ ಆ ರೀತಿ ಭಾವೋದ್ವೇಗಕ್ಕೆ ಒಳಗಾಗಬಾರದು. ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತಿದೆ. ಅವರ ಕುಟುಂಬಕ್ಕಾಗ್ಲಿ ರೇಣುಕಾಚಾರ್ಯರಿಗಾಗ್ಲಿ ಯಾವುದೇ ಸಂದೇಹ ಬೇಡ. ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ, ನೀವು ದೊಡ್ಡವರು, ಮಂತ್ರಿಯಾಗಿದ್ದವರು. ಶಾಸಕರಾಗಿ ಬಹಳ ವರ್ಷ ಕೆಲಸ ಮಾಡಿದವರು.ಇಂತಹ ದುಃಖದ ಮನೆಗಳಿಗೆ ಹೋಗಿ ಸಾಕಷ್ಟು ಬಾರಿ ಸಾಂತ್ವನ ಹೇಳಿದ್ದೀರಾ ಎಂದರು.
ಚಂದ್ರಶೇಖರ್ ಸಾವು: ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡರಾ ರೇಣುಕಾಚಾರ್ಯ?
ಚಂದ್ರು ಶೇಖರ್ ಸಾವಿನ ಪ್ರಕರಣ ಸಂಪೂರ್ಣ ತನಿಖೆಯಾಗುವ ತನಕ ನಾನು ಏನು ಹೇಳಲ್ಲ. ಸರ್ಕಾರ ಈ ಪ್ರಕರಣಕ್ಕೆ ತುಂಬಾ ಮಹತ್ವ ಕೊಟ್ಟಿದೆ. ಸ್ಥಳಕ್ಕೆ ಎಡಿಜಿಪಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಹಾಗೂ FSL ತಜ್ಞರು ಹೋಗಿದ್ದಾರೆ. ಮೂರು ಜನ ತಜ್ಞ ವೈದ್ಯರಿಂದ ಶವ ಪರೀಕ್ಷೆಯಾಗಿದೆ ನಾವು ಯಾವುದನ್ನೂ ಸಹ ನೆಗ್ಲೆಟ್ ಮಾಡಿಲ್ಲ ಎಂದರು.
ಪೊಲೀಸ್ ತನಿಖೆ ಸರಿಯಾಗಿಯೇ ನಡೀತಿದೆ, ಪೊಲೀಸರಿಗಾದ್ರು ಏನ್ ಉದ್ದೇಶ ಇರುತ್ತೆ ಹೇಳಿ ಹೈಡ್ ಮಾಡೋದಕ್ಕೆ. ನಾನೇ ಸ್ವತಃ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ. ಅಂತಿಮ ಶವ ಸಂಸ್ಕಾರದ ಸಮಯದಲ್ಲಿ ಜೊತೆಗೆ ಇದ್ದೆ, ಅಲ್ಲದೇ ಯಡಿಯೂರಪ್ಪನವರ ಹೋಗಿ ವಿಚಾರಿಸಿಕೊಂಡು ಬಂದಿದ್ದಾರೆ. ಸಿಎಂ ಸಹ ನನಗೆ ತಿಳಿದ ಮಟ್ಟಿಗೆ ಹೋಗ್ತಾರೆ ಎಂದರು.
ಪಿಎಸ್ಐ ಹುದ್ದೆಗೆ ವಯಸ್ಸು ಮೀತಿ ಹೆಚ್ಚಳ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಆ ಸಂದರ್ಭ ಬಂದಾಗ ಯೋಚನೆ ಮಾಡೋಣ. ಕಾನ್ಸ್ಟೇಬಲ್ ಗೆ ಈಗಾಗಲೇ ಎರಡು ವರ್ಷ ಹೆಚ್ಚಳ ಮಾಡಿಯಾಗಿದೆ. ಇದನ್ನ ಯುವಕ ಯುವತಿಯರು ಸದುಪಯೋಗ ಮಾಡಿಕೊಳ್ಳಲಿ ಯಾರಿಗೆ ಅರ್ಹತೆ ಇದೆ ಅವರಿಗೆ ಅರ್ಜಿ ಹಾಕೋಕೆ ಅವಕಾಶ ಇದೆ. ಜನರಲ್ ಗೆ 25 ರಿಂದ 27 ವರ್ಷ ಎಸ್ ಇ ಅಭ್ಯರ್ಥಿಗಳಿಗೆ 27 ರಿಂದ 29 ವರ್ಷ ಎಸ್ ಟಿ ಅಭ್ಯರ್ಥಿಗಳಿಗೆ 32 ವರ್ಷ ವಯೋಮಿತಿ ಇದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೂ ಒತ್ತಡವಿತ್ತು, ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಸಹ ಸಲಹೆ ನೀಡಿದ್ದರು. ಯುವಕರಿಗೆಲ್ಲ ಅವಕಾಶ ಸಿಗುತ್ತೆ ಅಂತ ಹೇಳಿದ್ದರು. ಇದನ್ನ ಸದುಪಯೋಗ ಪಡಿಸಿಕೊಳ್ಳಬೇಕು ಅಷ್ಟೇ ಎಂದು ತಿಳಿಸಿದರು.
ಬಂಡೆ ಮಠದ ಸ್ವಾಮೀಜಿ ಡೆತ್ ನೋಟ್ ನಲ್ಲಿ ಪ್ರಭಾವಿಗಳ ಹೆಸರು ಉಲ್ಲೇಖವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಎಲ್ಲ ರೀತಿಯಿಂದಲೂ ಆಳವಾದ ತನಿಖೆ ನಡೀತಿದೆ. ತನಿಖೆಯಿಂದ ಎಲ್ಲವೂ ಹೊರಗೆ ಬರುತ್ತದೆ ಎಂದರು.