ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ
Recommended Video

ಬೆಂಗಳೂರು, ಜುಲೈ 9: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಪುಟ ಸೇರುವ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಆಷಾಢ ಮಾಸ ಮುಗಿಯುವವರೆಗೂ ಸಂಪುಟ ವಿಸ್ತರಣೆ ನಡೆಸುವುದಿಲ್ಲ ಎಂದು ಕಾಂಗ್ರೆಸ್ ತೀರ್ಮಾನಿಸಿದೆ.
ಆಷಾಢ ಕಳೆಯುವವರೆಗೂ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪಕ್ಷದ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಜುಲೈ 14ರಿಂದ ಆಗಸ್ಟ್ 11ರವರೆಗೆ ಆಷಾಢವಿದ್ದು, ಅಲ್ಲಿಯವರೆಗೂ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಒಂದು ವೇಳೆ ನಾವು ಒಪ್ಪಿಕೊಂಡರೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಅದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ಅವರು ಇಂತಹ ವಿಚಾರಗಳಲ್ಲಿ ತುಂಬಾ ಕಟ್ಟುನಿಟ್ಟು ಎಂದು ಪರಮೇಶ್ವರ್ ಅವರು ಹೈಕಮಾಂಡ್ಗೆ ವಿವರಿಸಿದ್ದಾರೆ.

ಈ ಕಾರಣದಿಂದಾಗಿ ಸಂಪುಟ ವಿಸ್ತರಣೆ ಚಿಂತನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಇದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.
ಮೊದಲ ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ನೀಡದ ಕಾರಣ ಕಾಂಗ್ರೆಸ್ನ ಅನೇಕ ಹಿರಿಯ ಮುಖಂಡರು ಅಸಮಾಧಾನಗೊಂಡಿದ್ದರು.
ಮುಂದಿನ ವಿಸ್ತರಣೆ ವೇಳೆ ಸಚಿವ ಸ್ಥಾನ ಕಲ್ಪಿಸೋಣ ಎಂದು ಕೆಲವು ಮುಖಂಡರಿಗೆ ಭರವಸೆ ನೀಡಿ ಸಮಾಧಾನಪಡಿಸಲಾಗಿತ್ತು. ಅಲ್ಲದೆ, ಬಜೆಟ್ ಮಂಡನೆಯಾದ ಬಳಿಕ ಕೂಡಲೇ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ಈಗ ಅದು ಮುಂದೆ ಹೋಗುತ್ತಿರುವುದು ಈ ಶಾಸಕರಲ್ಲಿ ಅತೃಪ್ತಿ ಹೆಚ್ಚಿಸಿದೆ ಎನ್ನಲಾಗಿದೆ.












Click it and Unblock the Notifications