Government Employee: ಲೋಕಾಯುಕ್ತರು, ಸರ್ಕಾರಿ ನೌಕರರ ಮುಖಾಮುಖಿ, ವಿವರಗಳು
ಬೆಂಗಳೂರು, ಜನವರಿ 29: ಕರ್ನಾಟಕದ ಸರ್ಕಾರಿ ನೌಕರರು ಮತ್ತು ಲೋಕಾಯುಕ್ತರು ಮುಖಾಮುಖಿಯಾಗಲಿದ್ದಾರೆ. ಇದಕ್ಕಾಗಿಯೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾರ್ಯಾಗಾರವೊಂದನ್ನು ಆಯೋಜನೆ ಮಾಡಿದೆ. ಈ ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಯಾರು-ಯಾರು ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಮಾಹಿತಿಯನ್ನು ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ದಿನಾಂಕ 20-02-2025ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯದ ಎಲ್ಲಾ ಜಿಲ್ಲಾ-ತಾಲ್ಲೂಕು-ಯೋಜನಾ ಶಾಖೆಗಳ ಚುನಾಯಿತ ನಿರ್ದೇಶಕರು, ಬೆಂಗಳೂರು ರಾಜ್ಯ ಪರಿಷತ್ ಸದಸ್ಯರು-ಪದಾಧಿಕಾರಿಗಳ ಸಮಾಗಮ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸುವ ಬಗ್ಗೆ ಎಂಬ ವಿಷಯವನ್ನು ಇದು ಒಳಗೊಂಡಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ ಹಾಗೂ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಕಾರ್ಯಾಗಾರದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘ ಮಾಹಿತಿ ನೀಡಿದೆ.
ಕಾರ್ಯಾಕ್ರಮದ ವಿವರಗಳು: ರಾಜ್ಯ ಸರ್ಕಾರಿ ನೌಕರರ ಸಂಘ ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 'ರಾಜ್ಯ ಕಾರ್ಯಕಾರಿ ಸಮಿತಿ' ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ದಿನಾಂಕ 20-02-2025ರಂದು ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು ಇಲ್ಲಿ 'ಜಿಲ್ಲಾ ತಾಲ್ಲೂಕು-ಯೋಜನಾ ಶಾಖೆಗಳ ಚುನಾಯಿತ ನಿರ್ದೇಶಕರು, ಬೆಂಗಳೂರು ನಗರ ರಾಜ್ಯಪರಿಷತ್ ಸದಸ್ಯರು ಹಾಗೂ ಪದಾಧಿಕಾರಿಗಳ ಸಮಾಗಮ' ಮತ್ತು 'ಕಾರ್ಯಾಗಾರ'ವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದೆ.
ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಹಾಗೂ ಉಪಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಳಗ್ಗೆ 10ಕ್ಕೆ ಕರ್ನಾಟಕ ಲೋಕಾಯುಕ್ತರವರು ಹಾಗೂ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಾರ್ಯಾಗಾರದ ಉಪನ್ಯಾಸವನ್ನು ನೀಡಲಿದ್ದಾರೆ. ಸಂಘದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಪಾತ್ರ ಮುಖ್ಯವಾಗಿದ್ದು, ಕಡ್ಡಾಯವಾಗಿ ಭಾಗವಹಿಸಲು ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಹಾಗೂ ಯೋಜನಾ ಶಾಖೆಗಳ ಎಲ್ಲಾ ಚುನಾಯಿತ ಕಾರ್ಯಕಾರಿ ಸಮಿತಿ ನಿರ್ದೇಶಕರು-ಪದಾಧಿಕಾರಿಗಳು, ಜಿಲ್ಲಾ ಶಾಖೆಗಳ ಎಲ್ಲಾ ಚುನಾಯಿತ ಕಾರ್ಯಕಾರಿ ಸಮಿತಿಯ ನಿರ್ದೇಶಕರು-ಪದಾಧಿಕಾರಿಗಳು, ಬೆಂಗಳೂರು ನಗರದ ಚುನಾಯಿತ ಎಲ್ಲಾ ರಾಜ್ಯ ಪರಿಷತ್ ಸದಸ್ಯರು ಪಾಲ್ಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಸರ್ಕಾರಿ ನೌಕರರಿಗೆ ಸೂಚನೆಗಳು
* ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ಜಿಲ್ಲಾ ತಾಲ್ಲೂಕು/ ಯೋಜನಾ ಶಾಖೆಗಳ ಅಧ್ಯಕ್ಷರು ಆಯಾ ಶಾಖೆಗಳ ಕಾರ್ಯಕಾರಿ ಸಮಿತಿ ಸಭೆಗಳನ್ನು ಏರ್ಪಡಿಸಿ ಕಾರ್ಯಕ್ರಮದ ಬಗ್ಗೆ ನಿರ್ದೇಶಕರು-ಪದಾಧಿಕಾರಿಗಳಿಗೆ ಮಾಹಿತಿಯನ್ನು ನೀಡುವುದು
* ಭಾಗವಹಿಸುವ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಸರ್ಕಾರವು ಒಂದು ದಿನದ ಓ.ಓ.ಡಿ. ಸೌಲಭ್ಯವನ್ನು ನೀಡಲಿದೆ
* ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರಿಗೆ ವ್ಯವಸ್ಥೆಯನ್ನು ಆಯಾ ಶಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಭರಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಿರುತ್ತದೆ, ಆದರಂತೆ ಸಾರಿಗೆ ವ್ಯವಸ್ಥೆಯನ್ನು ಮಾಡಲು ಹಾಗೂ ವೆಚ್ಚವನ್ನು ಭರಿಸಲು ತಿಳಿಸಿದೆ
* ಚುನಾಯಿತ ಎಲ್ಲಾ ಪ್ರತಿನಿಧಿಗಳನ್ನು ಕಡ್ಡಾಯವಾಗಿ ಬೆಳಗ್ಗೆ 10 ಗಂಟೆಗೆ ನಿಗದಿತ ಸಮಯಕ್ಕೆ ಸಭಾ ಸ್ಥಳದಲ್ಲಿ ಹಾಜರಿದ್ದು, ಯಶಸ್ವಿಗೊಳಿಸುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಗುವುದು
* ಆಹ್ವಾನ ಪತ್ರಿಕೆ ಹಾಗೂ ಇತರೆ ವಿವರಗಳನ್ನು ನಂತರ ಕಳುಹಿಸಲಾಗುವುದು ಎಂದು ತಿಳಿಸಿದೆ.












Click it and Unblock the Notifications