ತನಿಖಾಧಿಕಾರಿಗಳ ಮೇಲೆ ಆರೋಪ, ಗೌರಿ ಹಂತಕರ ತಂತ್ರ: ಎಸ್ಐಟಿ
ಬೆಂಗಳೂರು, ಅಕ್ಟೋಬರ್ 03: ಎಸ್ಐಟಿ ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ಮಾಡಿ ಹೇಳಿಕೆ ಪಡೆದಿದ್ದಾರೆ' ಎಂದಿದ್ದ ಗೌರಿ ಲಂಕೇಶ್ ಹಂತಕರ ಆರೋಪ ಸಂಪೂರ್ಣ ಸುಳ್ಳು ಎಂದು ಎಸ್ಐಟಿ ಹೇಳಿದೆ.
ತನಿಖಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಿಕ್ಕು ತಪ್ಪಿಸುವುದು ಹಾಗೂ ಸಮಾಜದಲ್ಲಿ ಕರುಣೆ ಗಿಟ್ಟಿಸುವ ತಂತ್ರವನ್ನು ಗೌರಿ ಹತ್ಯೆ ಆರೋಪಿಗಳು ಮಾಡುತ್ತಿದ್ದಾರೆ ಎಂದು ಎಸ್ಐಟಿ ತನಿಖಾಧಿಕಾರಿಗಳು ಹೇಳಿದ್ದಾರೆ.
ಗೌರಿ ಹತ್ಯೆ ಕೇಸ್ನಲ್ಲಿ ಮಹಾರಾಷ್ಟ್ರದ ಮಾಜಿ ಕಾರ್ಪೊರೇಟರ್ ಕೈವಾಡ!
ಸೆಪ್ಟೆಂಬರ್ 29ರಂದು ಆರೋಪಿಗಳನ್ನು ಸಿವಿಲ್ ಕೋರ್ಟ್ಗೆ ಹಾಜರು ಪಡಿಸಿದ್ದಾಗ, ಮಧ್ಯಗಳ ಮುಂದೆ ಮಾತನಾಡಿದ್ದ ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆ, 'ಒತ್ತಾಯದಿಂದ ನಮ್ಮ ಬಳಿ ಹೇಳಿಕೆ ಪಡೆಯಲಾಗಿದೆ ಎಂದಿದ್ದರು.
'30 ಲಕ್ಷ ಲಂಚಕ್ಕೆ ಬೇಡಿಕೆ'
ಪರಶುರಾಮ್ ವಾಗ್ಮೋರೆ ಮಾತನಾಡಿ, ಎಸ್ಐಟಿಯು ನಮ್ಮ ಬಳಿ ಖಾಲಿ ಹಾಳೆ ಮೇಲೆ ಸಹಿ ತೆಗೆದುಕೊಂಡಿದೆ. ಅಲ್ಲದೆ ಅವರು ನಮ್ಮ ಬಳಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದಿದ್ದ. ಭಗವಾನ್ ಹತ್ಯೆ ಸಂಚು ಪ್ರಕರಣದಲ್ಲೂ ನಮ್ಮನ್ನು ಸಿಕ್ಕಿ ಹಾಕಿಸುವ ಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದರು.
ಎಸ್ಐಟಿ ಹೇಳುತ್ತಿರುದೇನು?
ಆರೋಪಿಗಳು ಈ ರೀತಿಯ ಹೇಳಿಕೆಗಳನ್ನು ನೀಡುವುದು ಹೊಸದಲ್ಲ, ನಾವಿದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆರೋಪಿಗಳ ಅಪರಾಧಗಳನ್ನು ಸಾಬೀತು ಮಾಡಲು ನಾವು ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿದ್ದೇವೆ. ಸಿಂಪತಿ ಗಿಟ್ಟಿಸಿಕೊಳ್ಳಲು ಹಾಗೂ ತನಿಖಾ ತಂಡದ ದಿಕ್ಕು ತಪ್ಪಿಸಲು ಆರೋಪಿಗಳು ಹೂಡಿರುವ ತಂತ್ರ ಇದು ಎಂದು ಎಸ್ಐಟಿ ಅಧಿಕಾರಿ ಹೇಳಿದ್ದಾರೆ.
ಎಸ್ಐಟಿಯಿಂದ ಬೆದರಿಸಿ ಹೇಳಿಕೆ ದಾಖಲು: ಗೌರಿ ಹತ್ಯೆ ಆರೋಪಿಗಳ ಅಳಲು
ಎಸ್ಐಟಿ ಮೇಲೆ ಆಂತರಿಕ ವಿಚಾರಣೆ ನಡೆಯಲಿದೆ
ಆರೋಪಿಗಳು ಈ ರೀತಿ ಆರೋಪ ಮಾಡಿದ ಕಾರಣ ಎಸ್ಐಟಿ ತಂಡ ಮೇಲೆ ಇಲಾಖೆ ತನಿಖೆ ನಡೆಸುತ್ತದೆ. ತನಿಖೆಯಿಂದ ತನಿಖಾಧಿಕಾರಿಗಳ ತಂಡ ಪ್ರಕರಣದಿಂದ ಕೆಲ ಸಮಯದ ವರೆಗೆ ವಿಮುಖರಾಗುತ್ತಾರೆ. ಆರೋಪಿಗಳಿಗೂ ಅದೇ ಬೇಕಾಗಿದೆ. ಹಾಗಾಗಿಯೇ ಅವರು ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.
ಈ ಮುಂಚೆ ಒಮ್ಮೆಯೂ ಆರೋಪಿಸಿಲ್ಲ ಏಕೆ?
ಪರಶುರಾಮ್ ವಾಗ್ಮೋರೆ ಸೇರಿ ಎಲ್ಲ ಆರೋಪಿಗಳನ್ನು ಈ ಮುಂಚೆ ಸಹ ಹಲವು ಬಾರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ ಆದರೆ ಯಾರೂ ಒಮ್ಮೆ ಕೂಡ ಎಸ್ಐಟಿ ಒತ್ತಡ ಹೇರುತ್ತಿದೆ ಎಂದು ಆರೋಪ ಮಾಡಿಲ್ಲ ಏಕೆ? ಎಂದು ಎಸ್ಐಟಿ ತನಿಖಾ ಅಧಿಕಾರಿ ಪ್ರಶ್ನಿಸಿದ್ದಾರೆ. ಆರೋಪಿಗಳ ಪರ ವಕೀಲರು ಮೂರು ಪತ್ರಿಕಾಗೋಷ್ಠಿ ನಡೆಸಿದ್ದಾರೆ ಆದರೆ ಒಮ್ಮೆ ಸಹ ಇದರ ಬಗ್ಗೆ ಆರೋಪ ಮಾಡಿಲ್ಲ ಆದರೆ ಈಗ ಏಕೆ ಮಾಡುತ್ತಿದ್ದಾರೆ ಎಂದು ಅವರು ಕೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ : ಬೆಳಗಾವಿಯ 6 ಜನರಿಗೆ ಎಸ್ಐಟಿ ನೋಟಿಸ್
ನರೇಂದ್ರ ದಾಬೋಲ್ಕರ್ ಹತ್ಯೆ ಆರೋಪಿಯದ್ದೂ ಇದೇ ತಂತ್ರ
ನರೇಂದ್ರ ದಾಬೋಲ್ಕರ್ ಅವರಿಗೆ ಗುಂಡು ಹಾರಿಸಿದ ಆರೋಪಿ ಸಚಿನ್ ಅಂದುರೆ ಸಹ ಇದೇ ರೀತಿಯ ಆರೋಪಗಳನ್ನು ಪೊಲೀಸರ ಮುಂದೆ ಮಾಡಿದ್ದಾರೆ. ಅವರ ಸಹೋದರ ಪ್ರವೀಣ್ ಅಂದುರೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಹೀಗೆ ಪೊಲೀಸರ ಮೇಲೆ ಆರೋಪ ಮಾಡುತ್ತಿವೆ ಇವು ಕೇವಲ ಆರೋಪಿಗಳ ತಂತ್ರಗಳಷ್ಟೆ ಎಂದು ಅವರು ಎಸ್ಐಟಿ ತನಿಖಾಧಿಕಾರಿ ಹೇಳಿದ್ದಾರೆ.
ಜನರ ಸಿಂಪತಿ ಪಡೆಯಲು ನಾಟಕ
ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ಸಹ ಗೌರಿ ಆರೋಪಿಗಳು ತನಿಖಾಧಿಕಾರಿಗಳ ಮೇಲೆ ಆರೋಪ ಮಾಡಿದ್ದಾರೆ. ಈಗಾಗಲೇ ಕೆಲವು ಸಂಸ್ಥೆಗಳು ಆರೋಪಿಗಳ ಪರ ಪ್ರತಿಭಟನೆಗಳನ್ನು ಮಾಡಿವೆ ಅದರ ಕಾರಣವಾಗಿಯೇ ಆರೋಪಿಗಳು ಈ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಎಸ್ಐಟಿ ಹೇಳಿದೆ. ಗೌರಿ ಹತ್ಯೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 12ರ ವರೆಗೆ ವಿಸ್ತರಿಸಲಾಗಿದೆ.