ಗೌರಿ ಲಂಕೇಶ್ ಹತ್ಯೆ, ಶಾಸಕ ಡಿ.ಎನ್.ಜೀವರಾಜ್ ವಿಚಾರಣೆ
ಬೆಂಗಳೂರು, ಸೆಪ್ಟೆಂಬರ್ 8 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ಎಸ್ಐಟಿ ವಿಚಾರಣೆ ಎದುರಿಸಬೇಕಿದೆ. ಜೀವರಾಜ್ ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಐಟಿಗೆ ನಿರ್ದೇಶನ ನೀಡಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ಎಸ್ಐಟಿ ಅಧಿಕಾರಿಗಳು ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಸಭೆ ನಡೆಸಿದರು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ತನಿಖೆ ಚುರುಕುಗೊಳಿಸುವಂತೆ ಸೂಚಿಸಿದರು.
ಗೌರಿ ಬಗ್ಗೆ ಹೇಳಿಕೆ, ಶಾಸಕ ಜೀವರಾಜ್ ವಿರುದ್ಧ ದೂರು
ಗೌರಿ ಲಂಕೇಶ್ ಹತ್ಯೆ ಕುರಿತು ಶೃಂಗೇರಿ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಭೆಯಲ್ಲಿ ಈ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಜೀವರಾಜ್ ಅವರ ವಿಚಾರಣೆ ನಡೆಸಿ ಎಂದು ಎಸ್ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ನಂತರ, ಮತ್ತೋರ್ವ ಪತ್ರಕರ್ತೆಗೆ ಜೀವ ಬೆದರಿಕೆ ಕರೆ
ಸಿದ್ದರಾಮಯ್ಯ ಜೊತೆಗಿನ ಸಭೆ ಬಳಿಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದರು. 'ಶಾಸಕ ಡಿ.ಎನ್.ಜೀವರಾಜ್ ವಿಚಾರಣೆ ನಡೆಸಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ' ಎಂದರು.
'ಚಡ್ಡಿಗಳ ಮಾರಣಹೋಮ ಅಂಥ ಬರೆದಿದ್ದೇ ಗೌರಿ ಲಂಕೇಶ್ ಹತ್ಯೆಗೆ ಕಾರಣ' ಎಂಬ ಹೇಳಿಕೆಯನ್ನು ಡಿ.ಎನ್.ಜೀವರಾಜ್ ನೀಡಿದ್ದರು. ಈ ರೀತಿಯ ಪ್ರಚೋದನೆ ನೀಡುವ ಹೇಳಿಕೆ ನೀಡಿರುವ ಬಗ್ಗೆ ಅವರ ವಿರುದ್ಧ ದೂರು ಸಹ ದಾಖಲಾಗಿದೆ.
ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ 7 ಕಡೆ ಹಾದಿ ತಪ್ಪಿದ ಪೊಲೀಸರು
ಶಾಸಕ ಜೀವರಾಜ್ ನೀಡಿರುವ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಗುರುವಾರ ಟ್ವಿಟ್ ಮಾಡಿದ್ದರು. ಇಂತಹ ಹೇಳಿಕೆ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದ್ದರು. ಇಂದು ಜೀವರಾಜ್ ವಿಚಾರಣೆ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ.
ತಮ್ಮ ಪತ್ರಿಕೆಯಲ್ಲಿ ಗೌರಿ ಅವರು ಸಂಘ ಪರಿವಾರದ ಅವಹೇಳನ ಮಾಡದೇ ಹೋಗಿದ್ದರೆ ಹತ್ಯೆ ಆಗುತ್ತಿರಲಿಲ್ಲ ಎಂದು ಬಿಜೆಪಿ ಶಾಸಕರೇ ಹೇಳಿರುವುದು ಏನು ಸಂದೇಶ ನೀಡುತ್ತದೆ?
— Siddaramaiah (@siddaramaiah) September 7, 2017
ಸೆ.5ರ ಮಂಗಳವಾರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಕರ್ನಾಟಕ ಸರ್ಕಾರ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ನೀಡಿದೆ. ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದ ಎಸ್ಐಟಿ ತನಿಖೆ ನಡೆಸುತ್ತಿದೆ.