ಸಿದ್ದರಾಮಯ್ಯ ಸರ್ಕಾರದಲ್ಲಿ ಶುರುವಾಯ್ತು ಸಂಪುಟ ಸರ್ಕಸ್: ಈ ಬಗ್ಗೆ ಡಾ. ಜಿ ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು, ಮೇ 25: ಮುಖ್ಯಮಂತ್ರಿ ಸ್ಥಾನದ ಜಟಾಪಟಿಯ ಬಳಿಕ ಸಿದ್ದರಾಮಯ್ಯ ಸರ್ಕಾರ ರಚನೆಯ ನಂತರ ಹೈಕಮಾಂಡ್ ನಾಯಕರಿಗೆ ಸಂಪುಟ ವಿಸ್ತರಣೆಯ ಸರ್ಕಸ್ ದೊಡ್ಡ ತಲೆನೋವಾಗಿದೆ. ಈಗಾಗಲೇ 8 ಜನ ಸಂಪುಟ ಸೇರ್ಪಡೆಯಾದ ಬಳಿಕ ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನಗೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದು, ದೆಹಲಿಗೆ ತೆರಳಿ ಸಚಿವಾಕಾಂಕ್ಷಿಗಳು ಲಾಬಿ ನಡೆಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ನೂತನ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ,ಸಂಪುಟ ವಿಸ್ತರಣೆ ಕುರಿತಾಗಿ ನಾಳೆ ನಾನು ಕೂಡ ದೆಹಲಿಗೆ ಹೋಗುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೋಗಿದ್ದಾರೆ. ಇವತ್ತು ಚರ್ಚೆ ಆಗಬಹುದು. ಸಂಜೆಯೇ ಮುಗಿಸಬಹುದು ಗೊಂದಲಕ್ಕೆ ಯಾವುದೇ ಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೂ ನಾನು ಯಾವ ಖಾತೆ ಕೊಟ್ಟರು ಕೆಲಸ ಮಾಡುತ್ತೇನೆ. ಯಾವುದೇ ಖಾತೆಗಾಗಿ ನಾನು ಲಾಬಿ ಮಾಡಲ್ಲ. ಯಾವುದೂ ಕಠಿಣ ಅಲ್ಲ. ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಅದು ಅವರ ವಿವೇಚನೆಗೆ ಬಿಟ್ಟಿದ್ದು. ನಾನು ಖಾತೆ ಕೇಳೋದಾಗಿದ್ದರೆ ದೆಹಲಿಗೆ ಹೋಗಿ ಲಾಬಿ ಮಾಡುತ್ತಿದ್ದೆ. ನನ್ನ ಅನುಭವ ಪರಿಗಣಿಸಿ ಅವರೇ ಕೊಡ್ತಾರೆ. ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
ಕರೆಂಟ್ ಬಿಲ್ ಕಟ್ಟಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕರೆ ನೀಡ್ತೇನೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಬಿಜೆಪಿ, ಜೆಡಿಎಸ್ ಅವರ ಹೇಳಿಕೆಗಳನ್ನು ನೋಡಿದ್ದೇನೆ. ನಾವು ಹೇಳಿದ್ದು ಮೊದಲ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು. ರಾಹುಲ್ ಗಾಂಧಿ ಕೂಡ ಇದನ್ನು ಹೇಳಿದ್ದಾರೆ. ಅದೇ ಪ್ರಕಾರ ಪ್ರಮಾಣವಚನದ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೆ ಸರ್ಕಾರಿ ಆದೇಶಕ್ಕೆ ಸೂಚನೆ ಕೊಟ್ಟಿದ್ದೇವೆ. ಸಂಜೆಯೊಳಗೆ ಆದೇಶ ಆಗಿದೆ. ಅದರ ಪ್ರೊಸೀಜರ್ ವರ್ಕೌಟ್ ಮಾಡಲಾಗುತ್ತಿದೆ ಎಂದರು.
ಯಾವ ರೀತಿ ಡಿಸ್ಕೌಂಟ್ ಮಾಡಬೇಕು ಎಂಬ ಬಗ್ಗೆ ನಡೆಯುತ್ತಿದೆ. ಇವರಿಗೆ ಹೊಟ್ಟೆ ಉರಿ ನಮ್ಮ ಪರಿಸ್ಥಿತಿ ಇಲ್ಲಿಗೆ ಬಂತಲ್ಲ ಎಂದು. ಅದಕ್ಕೆ ಹೀಗೆ ಹೇಳಿಕೆ ಕೊಡುತ್ತಿದ್ದಾರೆ. ಗ್ಯಾರಂಟಿಗಳನ್ನು ರುಜು ಮಾಡಿ ಕಾರ್ಡ್ ಹಂಚಿದ್ದೇವೆ ಎಂದರು.

ಯಾವುದು ಸಮಾಜದ ವಿರುದ್ಧ ಇದೆಯೋ ಅಥವಾ ಸಮಾಜದ ಶಾಂತಿ ಕದಡುವ ವಿಚಾರಗಳು, ಜನರ ವಿರೋಧಿ ಕಾಯ್ದೆಗಳು ಇವೆಯೋ ಅವುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು, ಅಂತಹ ನಿಯಮಗಳನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡಲು ಬೇಕಾದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ರಚನೆಯಾದ ಪಠ್ಯ ಪುಸ್ತಕ ರದ್ದು ವಿಚಾರವಾಗಿ ಮಾತನಾಡಿ, ಸರ್ಕಾರ ಸಂಪೂರ್ಣವಾಗಿ ತೀರ್ಮಾನ ತೆಗೆದುಕೊಳ್ಳುವಂತಹ ಹಂತಕ್ಕೆ ಬರಬೇಕು. ವಿಧಾನಸೌಧದಲ್ಲಿ ಸಂಪೂರ್ಣವಾದ ಸರ್ಕಾರ ರಚನೆ ಆದ ಮೇಲೆ ಹಾಗೂ ಖಾತೆ ಹಂಚಿಕೆ ಆದ ಮೇಲೆ ಸಂಬಂಧಪಟ್ಟ ಸಚಿವರು ಈ ಕುರಿತಾಗಿ ಪರಿಶೀಲನೆ ಮಾಡುತ್ತಾರೆ ಎಂದರು. ಪರಿಶೀಲನೆ ಬಳಿಕ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ಹೇಳಿದರು.
ಇನ್ನೂ ಪಕ್ಷ ಅಂದ ಮೇಲೆ ಶಿಸ್ತಿನಿಂದ ಹೋಗಬೇಕು. ನಾನು ಅದನ್ನೇ ಮಾಡುತ್ತಿದ್ದೇನೆ. ಸಿದ್ದರಾಮಯ್ಯಗೆ ಈ ಬಾರಿ ಫ್ರೀ ಹ್ಯಾಂಡ್ ಇಲ್ಲ ಎಂಬ ವಿಚಾರ ಅವರನ್ನೇ ಕೇಳಿ ಎಂದು ಹೇಳಿದರು.












Click it and Unblock the Notifications