ಸಂಪುಟ ವಿಸ್ತರಣೆ: ಪರಮೇಶ್ವರ್-ಜಮೀರ್ ಭಿನ್ನ ಹೇಳಿಕೆಗಳ ಗೊಂದಲ
ಬೆಂಗಳೂರು, ನವೆಂಬರ್ 22: ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ನ ಮುಖಂಡರು ಒಂದೇ ದಿನ ಭಿನ್ನ ಭಿನ್ನ ಹೇಳಿಕೆ ನೀಡಿರುವುದು ಸಂಪುಟ ವಿಸ್ತರಣೆ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.
ಡಿಸಿಎಂ ಪರಮೇಶ್ವರ್ ಅವರು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ರಾಹುಲ್ ಗಾಂಧಿ ಬ್ಯುಸಿಯಾಗಿದ್ದಾರೆ ಅವರ ಒಪ್ಪಿಗೆ ಪಡೆದುಕೊಳ್ಳುವವರೆಗೆ ಸಂಪುಟ ವಿಸ್ತರಣೆ ಆಗಲ್ಲ' ಎಂದಿದ್ದರು. ಆದರೆ ಸಿದ್ದರಾಮಯ್ಯ ಅವರ ನಿಷ್ಠ ಸಚಿವ ಜಮೀರ್ ಅವರು ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಅವರು, ಡಿಸೆಂಬರ್ 3ನೇ ತಾರೀಖು ಸಂಪುಟ ವಿಸ್ತರಣೆ ಪಕ್ಕಾ ಎಂದಿದ್ದಾರೆ. ಅಂದೇ ಸಂಪುಟ ವಿಸ್ತರಣೆ ಮಾಡಲು ಮೈತ್ರಿಯ ಎರಡೂ ಪಕ್ಷಗಳ ಮುಖಂಡರು ಒಪ್ಪಿದ್ದಾರೆ ಎಂದಿದ್ದಾರೆ.
ಜಮೀರ್ ಅಹ್ಮದ್ ಹೇಳಿದ್ದೇ ಬೇರೆ
ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಜಮೀರ್ ಅವರು ರಾಜ್ಯ ಕಾಂಗ್ರೆಸ್ನಲ್ಲಿ ಟ್ರಬಲ್ ಶೂಟರ್ ಆಗಿ ಹೊಸ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅಸಮಾಧಾನ ಶಾಸಕರ ಅಸಮಾಧಾನ ಶಮನದ ಕಾರ್ಯವನ್ನೂ ಅವರೇ ಮಾಡುತ್ತಿದ್ದಾರೆ ಹಾಗಾಗಿ ಅವರಿಗೆ ಸಂಪುಟ ವಿಸ್ತರಣೆಯ ಬಗ್ಗೆ ಮಾಹಿತಿ ಇರುತ್ತದೇ ಎಂದು ನಂಬಬಹುದಾಗಿದೆ.
ಪರಮೇಶ್ವರ್ ಹೇಳಿಕೆ ಅಲಕ್ಷಿಸುವಂತಿಲ್ಲ
ಆದರೆ ಡಿಸಿಎಂ ಪರಮೇಶ್ವರ್ ಅವರು ಹೈಕಮಾಂಡ್ಗೆ ಆಪ್ತರು ಹಾಗೂ ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಸ್ಥಾನದಲ್ಲಿರುವವರು ಅವರ ಗಮನಕ್ಕೆ ಬಾರದೆ ಸಂಪುಟ ವಿಸ್ತರಣೆ ದಿನಾಂಕ ನಿಗದಿ ಆಗುವ ಸಾಧ್ಯತೆ ಬಹು ಅಲ್ಪ. ಹಾಗಾಗಿ ಇಬ್ಬರ ಹೇಳಿಕೆಗಳಲ್ಲಿ ಯಾವುದನ್ನು ಪರಿಗಣಿಸುವುದು ಎಂಬ ಅನುಮಾನ ಎದ್ದಿದೆ.
ಪರಮೇಶ್ವರ್ ಹೇಳಿದ್ದೇನು?
ರಾಹುಲ್ ಗಾಂಧಿ ಅವರು ಪಂಚ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿದ್ದು, ಅವರು ಬಿಡುವು ಮಾಡಿಕೊಳ್ಳುವವರೆಗೂ ಅಂದರೆ ಡಿಸೆಂಬರ್ ಅಂತ್ಯದ ವರೆಗೆ ಸಂಪುಟ ವಿಸ್ತರಣೆ ಇಲ್ಲ ಎಂದು ಪರಮೇಶ್ವರ್ ಅವರು ಹೇಳಿದ್ದರು.
ಅಧಿವೇಶನ ಮುಗಿದ ಮೇಲೆ ವಿಸ್ತರಣೆ
ಅಧಿವೇಶನ ಇರುವುದು, ಶೂನ್ಯ ಮಾಸ ಮತ್ತು ಪಂಚ ರಾಜ್ಯಗಳ ಚುನಾವಣೆ ಇರುವ ಕಾರಣ ಈಗಾಗಲೇ ತಡವಾಗಿರುವ ಎರಡನೇ ಹಂತದ ಸಂಪುಟ ವಿಸ್ತರಣೆಯನ್ನು ಮತ್ತಷ್ಟು ಮುಂದಕ್ಕೆ ಹಾಕಲಾಗಿದೆ. ಚುನಾವಣೆ ಸಮಯದಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳನ್ನು ಎದುರಿಸದಿರುವಂತೆ ನೋಡಿಕೊಳ್ಳುವಂತೆ ರಾಹುಲ್ ಹೇಳಿರುವ ಕಾರಣ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.